9 ರಿಂದ 10ನೇ ತರಗತಿ ಮಕ್ಕಳಿಗೆ ಮೊಟ್ಟೆ ಕೊಡಲು ಹಣ ಸಂಗ್ರಹಿಸುವ ಗ್ರಾಮ ಯಾವುದು?
ಚಿಕ್ಕಮಗಳೂರು, ಆಗಸ್ಟ್ 19: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯಡಿ ಮಕ್ಕಳು ಮೊಟ್ಟೆ ತಿನ್ನಬೇಕಾ ಇಲ್ಲ ಬೇಡವಾ ಎಂಬ ಚರ್ಚೆ ನಡುವೆ ಚಿಕ್ಕಮಗಳೂರಿನ ಕುಗ್ರಾಮದ ಜನರು ತಮ್ಮ ಶಾಲಾ ಮಕ್ಕಳಿಗೆ ಕೊಡಲು ಮೊಟ್ಟೆಗಳನ್ನು ಕೊಡಲು ತಮ್ಮ ಸ್ವಂತ ಹಣ ನೀಡುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 45 ಕಿ.ಮೀ ದೂರದಲ್ಲಿರುವ ಬೊಗಸೆ ಗ್ರಾಮಸ್ಥರು 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ಖರೀದಿಸಲು ಜೇಬಿನಿಂದ ಹಣ ಪಾವತಿಸುತ್ತಿದ್ದಾರೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡುವ ಸರ್ಕಾರದ ಕ್ರಮಕ್ಕೆ ತೇಜಸ್ವಿನಿ ಅನಂತ್ಕುಮಾರ್ ಆಕ್ಷೇಪ
ಮಧ್ಯಾಹ್ನದ ಬಿಸಿಯೂಟದ ಯೋಜನೆಯಡಿ ಮೊಟ್ಟೆಗಳನ್ನು ನೀಡಲು ಸರ್ಕಾರವು 8 ನೇ ತರಗತಿಯವರೆಗೆ ಮಾತ್ರ ಹಣವನ್ನು ನೀಡುತ್ತದೆ. ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಧ್ಯಾಹ್ನದ ಊಟದ ಯೋಜನೆಯಲ್ಲಿ ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ ಆದೇಶ ಹೊರಡಿಸಿ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿದೆ. ಬೊಗಸೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್ಡಿಎಂಸಿ) ಸಭೆ ನಡೆಸಿ 9 ಮತ್ತು 10ನೇ ತರಗತಿಯ ಮಕ್ಕಳಿಗೆ ಯೋಜನೆ ವಿಸ್ತರಿಸಲು ಗ್ರಾಮಸ್ಥರು ನೆರವಾಗಲು ನಿರ್ಧರಿಸಲಾಯಿತು.
ಬೊಗಸೆಯ ಎಲ್ಲಾ ಮೂರು ತರಗತಿಗಳು ಅಂದರೆ 8, 9 ಮತ್ತು 10 - ಒಂದೇ ಶಾಲೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತವೆ. ನಾವು ಆಹಾರ ನೀಡುವಾಗ ಮಕ್ಕಳ ನಡುವೆ ವ್ಯತ್ಯಾಸವನ್ನು ಮಾಡಬಯಸುವುದಿಲ್ಲ ಎಂದು ಎಸ್ಡಿಎಂಸಿ ಅಧ್ಯಕ್ಷ ಪ್ರಭಾಕರ ತಿಳಿಸಿದರು.
9 ಮತ್ತು 10ನೇ ತರಗತಿ ಮಕ್ಕಳಿಗೆ ಮೊಟ್ಟೆ ನೀಡದಿರುವುದಕ್ಕೆ ಬೇಸರ
''ಬಿಸಿಯೂಟ ಯೋಜನೆಯು 8ನೇ ತರಗತಿಯವರೆಗೆ ಮಾತ್ರ ವ್ಯಾಪ್ತಿಗೆ ಬರುವುದರಿಂದ ಶಾಲೆಯಲ್ಲಿನ ಶಿಕ್ಷಕರು ಮತ್ತು ಸಿಬ್ಬಂದಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡದಿರುವ ಬಗ್ಗೆ ಅತೃಪ್ತಿ ಹೊಂದಿದ್ದರು. ನಂತರ ನಾವು ಎಲ್ಲ ಗ್ರಾಮಸ್ಥರೊಂದಿಗೆ ಸಭೆ ನಡೆಸಿದಾಗ ಅವರಲ್ಲಿ ಹೆಚ್ಚಿನವರು ಮೊಟ್ಟೆಗೆ ಹಣ ಪಾವತಿಸಲು ಒಪ್ಪಿಕೊಂಡರು. ಗ್ರಾಮಸ್ಥರು ನೀಡಿದ ಹಣದಲ್ಲಿ ಮೊಟ್ಟೆ ಖರೀದಿಸುತ್ತಿದ್ದೇವೆ'' ಎಂದು ಎಸ್ಡಿಎಂಸಿ ಅಧ್ಯಕ್ಷ ಪ್ರಭಾಕರ ತಿಳಿಸಿದರು.
ಮೊಟ್ಟೆ ನೀಡಲು ದಿನಕ್ಕೆ 600 ರೂ. ಅಗತ್ಯ
ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಮಾತನಾಡಿ, ಬೊಗಸೆ ಸರಕಾರಿ ಪ್ರೌಢಶಾಲೆಯಲ್ಲಿ 8ರಿಂದ10ನೇ ತರಗತಿಯಲ್ಲಿ 80 ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ 55 ಮಂದಿ 9-10ನೇ ತರಗತಿಯಲ್ಲಿದ್ದಾರೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೇಯಿಸಿದ ಮೊಟ್ಟೆ ನೀಡಲು ದಿನಕ್ಕೆ 600 ರೂ. ಅಗತ್ಯವಿದೆ. ಜುಲೈ 26 ರಿಂದ 9 ಮತ್ತು 10 ನೇ ತರಗತಿಗೆ ಮೊಟ್ಟೆಯನ್ನು ನೀಡಲು ಪ್ರಾರಂಭಿಸಿದ್ದೇವೆ. ಇಲ್ಲಿಯವರೆಗೆ ಅದು ಸುಗಮವಾಗಿ ನಡೆಯುತ್ತಿದೆ. ನಮ್ಮ ಬಳಿ ಹಣವಿದೆ. ಗ್ರಾಮಸ್ಥರಿಂದ ಮುಂದಿನ ಎರಡು ತಿಂಗಳಿಗೆ ಸಾಕಾಗುತ್ತದೆ ಎಂದರು.
ಫೆಬ್ರುವರಿವರೆಗೆ ಯೋಜನೆ ಜಾರಿ
ಶಿಕ್ಷಕರು ಮತ್ತು ಸಿಬ್ಬಂದಿ ಕೂಡ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಫೆಬ್ರವರಿವರೆಗೆ ಯೋಜನೆ ಜಾರಿಯಲ್ಲಿದ್ದು, ಗ್ರಾಮಸ್ಥರೊಂದಿಗೆ ಮತ್ತೊಮ್ಮೆ ಸಭೆ ನಡೆಸಲು ಎಸ್ಡಿಎಂಸಿಯವರೊಂದಿಗೆ ಸಮನ್ವಯ ಸಾಧಿಸುತ್ತೇವೆ. ಈ ಗ್ರಾಮದಲ್ಲಿ 80 ಕುಟುಂಬಗಳಿವೆ. ಬೊಗಸೆ ಶಾಲೆಗೆ ಸಮೀಪದ ಆರು ಗ್ರಾಮಗಳ ಮಕ್ಕಳು ನಮ್ಮ ಶಾಲೆಗೆ ಪ್ರವೇಶ ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕ ಹೇಳಿದರು.
ಮಕ್ಕಳಿಗೆ ಮೊಟ್ಟೆ ಕೊಡುವುದಕ್ಕೆ ಹಲವರ ವಿರೋಧ
ಶಾಲಾ ಶಿಕ್ಷಣ ಇಲಾಖೆಯು 10ನೇ ತರಗತಿಯವರೆಗೆ ಮೊಟ್ಟೆಗಳನ್ನು ವಿಸ್ತರಿಸುವಂತೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಯು ಹಣಕಾಸಿನ ಕೊರತೆಯನ್ನು ಮುಂದಿಟ್ಟು ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುವುದಕ್ಕೆ ರಾಜ್ಯದಲ್ಲಿ ವಿರೋಧವೂ ಕೇಳಿಬಂದಿತ್ತು. ಆದರೆ ಕರ್ನಾಟಕದ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟದ ಜೊತೆ ಮೊಟ್ಟೆ ನೀಡಲು ನಿರ್ಧರಿಸಲಾಗಿತ್ತು.