ಸಿದ್ದರಾಮಯ್ಯರದು ತಾಲಿಬಾನ್ಗಿಂತ ಕಡಿಮೆ ಇಲ್ಲದ ಮನಸ್ಥಿತಿ; ಸಿ.ಟಿ. ರವಿ ವಾಗ್ದಾಳಿ
ಚಿಕ್ಕಮಗಳೂರು, ಫೆಬ್ರವರಿ 28: "ಸಿದ್ದರಾಮಯ್ಯ ಒಬ್ಬ ಮತೀಯವಾದಿ, ಸಿದ್ದರಾಮಯ್ಯ ತಾಲಿಬಾನ್ಗಿಂತ ಕಡಿಮೆ ಇಲ್ಲದ ಮನಸ್ಥಿತಿಯವರು," ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, "ಮಾಜಿ ಸಿಎಂ ಸಿದ್ದರಾಮಯ್ಯಗೆ ಕುಂಕುಮ ಕಂಡರೆ ಹೆದರಿಕೆ ಆಗುತ್ತದೆ ಅಂತಾ ಹೇಳುತ್ತಾರೆ. ಅವರ ತಾಯಿಯ ಹಣೆಯಲ್ಲಿ ಕುಂಕುಮ ಇದೆ, ಪತ್ನಿಯ ಹಣೆ ಮೇಲೂ ಕುಂಕುಮ ಇದೆ. ಸೊಸೆಯ ಹಣೆ ಮೇಲೂ ಕುಂಕುಮ ಇದೆ. ಅವರಿಗೆ ಹೆಣ್ಮಕ್ಳು ಇದರೆ ಅವರ ಹಣೆಯಲ್ಲಿಯೂ ಕುಂಕುಮ ಇದೆ. ಕುಂಕುಮದಿಂದ ಜಗತ್ತಿನಲ್ಲಿ ಎಲ್ಲೂ ಭಯೋತ್ಪಾದನೆ ನಡೆದಿಲ್ಲ," ಎಂದು ವಾಗ್ದಾಳಿ ನಡೆಸಿದರು.
"ಸ್ಕಲ್ ಟೋಪಿಯ ಜನ ತಮ್ಮವರನ್ನು ಕೊಂದಿದ್ದಾರೆ, ಬೇರೆಯವರನ್ನೂ ಕೊಂದಿದ್ದಾರೆ. ಬಹುಶಃ ಇವನ್ನೆಲ್ಲ ನೋಡಿದರೆ ಅವರ ತಂದೆ ಸಿದ್ದರಾಮಯ್ಯ ಅಂತಾ ಹೆಸರು ಇಡುತ್ತಿರಲಿಲ್ಲ. ಹಿಂದೆ ರಾಮನ ಹೆಸರು ಇದೆ, ಅಂದಿನ ಕಾಲದ ಸಮಾಜ ಸುಧಾರಕ ಸಿದ್ದರಾಮನ ಹೆಸರಿದ್ದು, ಇವರು ನಡೆದುಕೊಳ್ಳುತ್ತಿರುವ ರೀತಿಗೂ, ಅವರ ಹೆಸರಿಗೂ ಸಂಬಂಧವೇ ಇಲ್ಲ ಅನ್ನೋದು ವ್ಯಕ್ತವಾಗುತ್ತದೆ," ಎಂದು ಟೀಕಿಸಿದರು.

ಮೇಕೆದಾಟು ವಿಚಾರವಾಗಿ ಮಾತಾನಾಡಿದ ಸಿ.ಟಿ. ರವಿ, "ಎಲ್ಲರಿಗೂ ಸ್ಪಷ್ಟ ಇದೆ, ಈ ಪಾದಯಾತ್ರೆಯಲ್ಲಿ ರಾಜಕಾರಣ ಬಿಟ್ಟರೆ ಬೇರೆನೂ ಇಲ್ಲ. ನಮ್ಮ ಪ್ರಶ್ನೆಗಳಿಗೆ ಇವತ್ತಿನವರೆಗೂ ಉತ್ತರ ಕೊಡಲಿಲ್ಲ. ಇಲ್ಲಿ ಪಾದಯಾತ್ರೆ ನಾಟಕವನ್ನು ಮಾಡುವುದರ ಬದಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ನಿಯೋಗ ಕರ್ಕೊಂಡು ಹೋಗಿ ಅಲ್ಲಿರುವ ಕಾಂಗ್ರೆಸ್ ಮುಖಂಡರಾದ ಪಿ. ಚಿದಂಬರಂ, ಡಿಎಂಕೆಯ ಸ್ಟಾಲಿನ್ ಅವರನ್ನು ಒಪ್ಪಿಸಿದ್ದರೆ ಸುಲಭವಾಗುತ್ತದೆ. ಅವರ ಅಕ್ಷೇಪಣೆ ಇಲ್ಲ ಅಂದರೆ ಎಲ್ಲ ರೀತಿಯ ಅಡೆತಡೆಗಳು ನಿವಾರಣೆಯಾಗುತ್ತದೆ. ಅದನ್ನು ಮಾಡೋದು ಬಿಟ್ಟು ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆ ದೈಹಿಕ ಕಸರತ್ತು ಕೊಡಬಹುದು," ಎಂದು ಕಾಂಗ್ರೆಸ್ನವರ ಪಾದಯಾತ್ರೆ ಬಗ್ಗೆ ವ್ಯಂಗ್ಯವಾಡಿದರು.
ತಮಿಳುನಾಡನ್ನು ಒಪ್ಪಿಸುವ ತಾಕತ್ತು ಸಿದ್ದರಾಮಯ್ಯಗಿದೆ
"ತಮಿಳುನಾಡನ್ನು ಒಪ್ಪಿಸೋ ತಾಕತ್ತು ಸಿದ್ದರಾಮಯ್ಯ ಅವರಿಗೆ ಇದೆ. ಒಂದು ಮಾತು ಇಲ್ಲವೇ ಸಿದ್ದರಾಮಯ್ಯ ಅವರು ಒಂದು ಗುಟುರು ಹಾಕಿದರೆ ಸಾಕು, ಸೋನಿಯಾ ಗಾಂಧಿ ಅಲರ್ಟ್ ಆಗುತ್ತಾರೆ. ಸೋನಿಯಾ ಗಾಂಧಿ ಒಂದು ಮಾತು ಹೇಳಿದರೆ ಸಾಕು ಚಿದಂಬರಂ ತೆಗೆದು ಹಾಕಲ್ಲ. ಚಿದಂಬರಂ ಒಂದು ಮಾತು ಹೇಳಿದರೆ ಸ್ಟಾಲಿನ್ ತೆಗೆದು ಹಾಕಲ್ಲ. ಇದು ಸುಲಭದಲ್ಲಿ ಆಗಲಿರುವ ಸಂಗತಿ. ಇಲ್ಲಿ ಪಾದಯಾತ್ರೆ ಮಾಡುತ್ತಿರುವ ಉದ್ದೇಶ ರಾಜಕಾರಣ, ಅದು ಬಿಟ್ಟು ಬೇರೆನೂ ಇಲ್ಲ," ಎಂದು ಮಾತಿನಲ್ಲೇ ಸಿ.ಟಿ. ರವಿ ಸಿದ್ದರಾಮಯ್ಯಗೆ ತಿವಿದರು.

ಸಿದ್ದರಾಮಯ್ಯ ಒಬ್ಬ ಮತೀಯವಾದಿ
ಹಿಜಾಬ್ ವಿವಾದದ ಮೂಲಕ ಕಾಂಗ್ರೆಸ್ ಮತೀಯ ವಾದವನ್ನು ಹೊರಹಾಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು. ಕಾಂಗ್ರೆಸ್ನ ಜಾತ್ಯಾತೀತವಾದ ಅನ್ನುವುದು ನಾಟಕ, ಹಿಂದೂಗಳನ್ನು ಮೋಸ ಮಾಡುವುದಕ್ಕೆ ಮಾತ್ರ ಉಪಯೋಗ ಮಾಡಿಕೊಂಡಿದ್ದಾರೆ. ಹಿಂದೂಗಳ ಮೇಲೆ ಪ್ರಹಾರ ಮಾಡುವುದಕ್ಕೆ ಮಾತ್ರ ಕಾಂಗ್ರೆಸ್ ಜಾತ್ಯಾತೀತವಾದ ಇರುವುದು. ಕೇಸರಿ ಶಾಲು ತಿರಸ್ಕರಿಸುವ ಸಿದ್ದರಾಮಯ್ಯ, ಮುಸ್ಲಿಂ ಧರ್ಮದ ಟೋಪಿ ಧರಿಸುತ್ತಾರೆ. ಕೇಸರಿ ಪೇಟವನ್ನು ನೋಡಿದರೆ ಉರಿದು ಬೀಳುವ ಸಿದ್ದರಾಮಯ್ಯ, ಸ್ಕಲ್ ಟೋಪಿ (ಮುಸ್ಲಿಮರ ಟೋಪಿ) ನೋಡಿದರೆ ಜಾತ್ಯತೀತವಾದ ಎನ್ನುವುದು ತಪ್ಪು ಎಂದು ಟೀಕಿಸಿದರು.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಪುನರಾರಂಭಗೊಂಡಿದ್ದು, ಮಾ.3ರವರೆಗೆ ನಡೆಯಲಿದೆ. ಮಾ.4ರಂದು ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಮಾ.3ರವರೆಗೆ ಮಾಡಲು ನಿರ್ಧರಿಸಿದ್ದಾರೆ. ಮಾ.3ರಂದು ಬಸವನಗುಡಿಯಲ್ಲಿ ಬೃಹತ್ ಸಮಾರೋಪ ಸಮಾರಂಭ ನಡೆಯಲಿದೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ. ಟ್ರಾಫಿಕ್ ಸಮಸ್ಯೆ ತಪ್ಪಿಸಲು ಆದಷ್ಟು ಮೆಟ್ರೋ ಬಳಸುವಂತೆ ಸಿ.ಟಿ. ರವಿ ಸಲಹೆ ನೀಡಿದರು.












Click it and Unblock the Notifications