ದೊಪ್ಪನೆ ಬಿದ್ದ ಮನೆ, ಸಾವು ಗೆದ್ದು ಬಂದ ಪುಟ್ಟ ಕಂದ
ಚಿಕ್ಕಮಗಳೂರು, ಆಗಸ್ಟ್ 8: ಚಿಕ್ಕಮಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದೆ. ಅಲ್ಲಲ್ಲಿ ಗುಡ್ಡ ಕುಸಿತ, ಭೂ ಕುಸಿತದ ಘಟನೆಗಳೂ ನಡೆಯುತ್ತಿವೆ. ಮಳೆ ಆಹುತಿ ತೆಗೆದುಕೊಂಡಿರುವ ಮನೆಗಳಿಗೂ ಲೆಕ್ಕವಿಲ್ಲ.
ಆದರೆ ಮನೆ ಬಿದ್ದರೂ ಪವಾಡ ಎಂಬಂತೆ ಒಂದೂವರೆ ವರ್ಷದ ಮಗುವೊಂದು ಬದುಕಿ ಉಳಿದಿರುವುದು ಅಚ್ಚರಿ ಮೂಡಿಸಿದೆ.
ಇದ್ದಕ್ಕಿದ್ದಂತೆ ಹೆಚ್ಚಾದ ಮಳೆ, ಜೋರು ಗಾಳಿಗೆ ಚಿಕ್ಕಮಗಳೂರಿನ ಅರವಿಂದ ನಗರದಲ್ಲಿ ಏಕಾಏಕಿ ಮನೆಯೊಂದು ಬಿದ್ದಿದೆ. ಚಾವಣಿ, ಗೋಡೆ ಎಲ್ಲವೂ ನೋಡನೋಡುತ್ತಿದ್ದಂತೆ ಕುಸಿಯುತ್ತಿರುವುದು ಮನೆಯವರ ಗಮನಕ್ಕೆ ಬಂದಿದೆ. ಸರಿಯಾಗಿ ನೋಡಬೇಕೆಂದು ಮನೆಯವರು ಹೊರಗೆ ಬರುವಷ್ಟರಲ್ಲೇ ಮನೆ ಧೊಪ್ಪನೆ ನೆಲಕ್ಕೆ ಉರುಳಿದೆ. ಮನೆ ಬೀಳುತ್ತಿದ್ದಂತೆ ಮನೆಯೊಳಗಿದ್ದ ಒಂದೂವರೆ ವರ್ಷದ ಕಂದನಿಗೆ ಹುಡುಕಾಟ ನಡೆಸಿದ್ದಾರೆ.

ಮನೆ ಉರುಳಿದ ರಭಸಕ್ಕೆ ಆಘಾತಗೊಂಡ ತಾಯಿ ಮಗುವಿಗಾಗಿ ಅಳುತ್ತಾ ಹುಡುಕಾಟ ನಡೆಸಿದ್ದಾರೆ. ಅದರೆ ಅಚ್ಚರಿ ಎಂಬಂತೆ ಮಗು ಪ್ರಾಣಾಪಾಯದಿಂದ ಪಾರಾಗಿದೆ.
"ದೇವರೇ ನಮ್ಮನ್ನು ಕಾಪಾಡಿದ. ಇಂಥ ಮಳೆ, ಗಾಳಿ, ಜೊತೆಗೆ ಉರುಳಿ ಬಿದ್ದ ಮನೆ, ಇದೆಲ್ಲದರಿಂದ ಮಗುವನ್ನು ನಮ್ಮ ಕೈಗೆ ಕೊಟ್ಟಿದ್ದಾನೆ" ಎಂದು ಮನೆಯವರೂ ಸಮಾಧಾನಗೊಂಡಿದ್ದಾರೆ. ಆದರೆ ಇಷ್ಟೆಲ್ಲಾ ಆಗುತ್ತಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ವಿಚಾರಿಸಿಲ್ಲ. ಈ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications