ಸರ್ಕಾರ ನಾಟಕ ಬಿಟ್ಟು ದತ್ತಪೀಠ ಹಿಂದುಗಳಿಗೆ ಒಪ್ಪಿಸಲಿ; ಗಂಗಾಧರ್ ಕುಲಕರ್ಣಿ
ಚಿಕ್ಕಮಗಳೂರು, ನವೆಂಬರ್ 09; "ಹೈಕೋರ್ಟ್ ನಿರ್ದೇಶನದಂತೆ ಮೀನಾಮೇಷ ಎಣಿಸದೇ, ಎಲ್ಲಾ ನಾಟಕಗಳನ್ನು ಬಿಟ್ಟು ಬಿಜೆಪಿ ಸರ್ಕಾರ ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು, ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಬೇಕು" ಎಂದು ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಆಗ್ರಹಿಸಿದರು.
ಚಿಕ್ಕಮಗಳೂರು ನಗರದ ಶಂಕರಮಠದಲ್ಲಿ ಶ್ರೀರಾಮಸೇನೆ ವತಿಯಿಂದ 17ನೇ ದತ್ತಮಾಲಾ ಅಭಿಯಾನಕ್ಕೆ ಗಂಗಾಧರ್ ಕುಲಕರ್ಣಿ ಚಾಲನೆ ನೀಡಿದರು. ದತ್ತ ಭಕ್ತರು ದತ್ತ ಮಾಲಾಧಾರಣೆ ಮಾಡುವ ಮೂಲಕ ಅಭಿಯಾನ ಆರಂಭಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಸರ್ಕಾರ ಸಮಿತಿ ರಚನೆ, ಅಹವಾಲುಗಳನ್ನು ಸ್ವೀಕರಿಸುವುದನ್ನು ಬಿಟ್ಟು ನ್ಯಾಯಾಲಯದ ಆದೇಶದಂತೆ ಸೂಕ್ತ ನಿರ್ಧಾರ ತಗೆದುಕೊಳ್ಳಬೇಕು" ಎಂದು ಹೇಳಿದರು.
"ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ಹಿಂದುಗಳಿಗೆ ದತ್ತಪೀಠವನ್ನು ಒಪ್ಪಿಸುತ್ತೇವೆ ಎಂದು ಆಶ್ವಾಸನೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಮೀನಾಮೇಷ ಎಣಿಸುತ್ತಿರುವುದನ್ನು ಗಮನಿಸಿದರೆ ನಾಚಿಕೆ ಆಗಬೇಕು" ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

"ದತ್ತಮಾಲಾ ಸಂದರ್ಭದಲ್ಲಿ ದತ್ತಮಾಲಾಧಾರಣೆ ಮಾಡದಿದ್ದರೆ ನಿಮ್ಮ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಕಳೆದ ಬಾರಿ ನೀಡಲಾಗಿತ್ತು. ಅದೇ ರೀತಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ದತ್ತಾತ್ರೇಯರ ಜೊತೆಗೆ, ಗುರುಗಳ ಜೊತೆಗೆ ಹಾಗೂ ಧರ್ಮದ ಜೊತೆಗೆ ಆಟವಾಡಿದರೆ ಧರ್ಮ ಯಾವುದೇ ಕಾರಣಕ್ಕೂ ನಿಮ್ಮನ್ನು ಬಿಡುವುದಿಲ್ಲ. ಹಾಗಾಗಿ ತಡಮಾಡದೇ ಹಿಂದೂಗಳಿಗೆ ದತ್ತಪೀಠವನ್ನು ಒಪ್ಪಿಸಬೇಕು" ಎಂದು ಒತ್ತಾಯಿಸಿದರು.
"ಕಳೆದ ಎರಡು ವರ್ಷದ ಹಿಂದೆ ದತ್ತಾತ್ರೇಯರ ವಿಗ್ರಹದ ಶೋಭಾಯಾತ್ರೆಗೆ ಅನುಮತಿ ನೀಡಿದ್ದ ಜಿಲ್ಲಾಡಳಿತ ಇದನ್ನು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಆ ಹಿನ್ನೆಲೆಯಲ್ಲಿ ನಗೆ ವಿಗ್ರಹ ವಾಪಾಸ್ ನೀಡುವವರೆಗೆ ಹಾಗೂ ಶೋಭಾಯಾತ್ರೆಯಲ್ಲಿ ವಿಗ್ರಹಕ್ಕೆ ಅವಕಾಶ ನಿಡುವವರೆಗೆ ಶೋಭಾಯಾತ್ರೆನ್ನು ಮಾಡುವುದಿಲ್ಲ ಎಂಬ ಸಂಕಲ್ಪ ಮಾಡಿದ್ದು, ಈ ಬಾರಿಯೂ ಸಹ ಶೋಭಾಯಾತ್ರೆ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ಕೋವಿಡ್ ನೆಪವನ್ನು ಜಿಲ್ಲಾಡಳಿತ ಹೇಳದೇ ಬಂದ ಭಕ್ತರಿಗೆ ಮುಕ್ತವಾಗಿ ದತ್ತಪಾದುಕೆ ದರ್ಶನಕ್ಕೆ ಅವಕಾಶ ನೀಡಬೇಕು. ಕಳೆದ ಬಾರಿ ಸ್ವಾಮೀಜಿಗಳಿಗೆ ಪಾದುಕೆ ದರ್ಶನಕ್ಕೆ ಅಡಚಣೆ ಮಾಡಿದ್ದು, ಈ ಬಾರಿ ಆ ರೀತಿಯ ಉದ್ದಟತನವನ್ನು ಮಾಡಿದರೆ ಪರಿಣಾಮಕಾರಿ ಪರಿಸ್ಥಿತಿ ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಮಾತನಾಡಿ, "ದತ್ತಮಾಲಾಧಾರಣೆ ಅಂಗವಾಗಿ 11ನೇ ತಾರೀಖು ತಾಲೂಕಿನ ಎಲ್ಲಾ ದೇವಸ್ಥಾನದಲ್ಲಿ ದೀಪೋತ್ಸವ ನಡೆಸಲಾಗುವುದು ಹಾಗೂ 13ರಂದು ನಗರದ ಪ್ರಮುಖ ರಸ್ತೆಯಲ್ಲಿ ಭಿಕ್ಷಾಟನೆ ಮಾಡಿ, 14ರಂದು ದತ್ತ ಭಕ್ತರು ದತ್ತಪೀಠಕ್ಕೆ ತೆರಳುವ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲಾಗುವುದು" ಎಂದರು.
"ಜಿಲ್ಲಾಡಳಿತ ನಗರ ಅಲಂಕಾರ ಸೇರಿದಂತೆ ಹಲವು ಕಾರ್ಯಗಳಿಗೆ ಅಡ್ಡಿ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡುವ ಮೂಲಕ ಈ ಕಾರ್ಯಕ್ರಮವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದು ಹಿಂದೂ ವಿರೋಧಿಯಾಗಿ ವರ್ತಿಸುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದತ್ತಮಾಲೆ ಅಭಿಯಾನ; ಶ್ರೀರಾಮಸೇನೆಯ 17ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಗಿದೆ. ಚಿಕ್ಕಮಗಳೂರು ನಗರದ ಶಂಕರಮಠದಲ್ಲಿ ಹಲವರು ಮಾಲಾಧಾರಣೆ ಮಾಡಿದರು.
ಸೋಮವಾರದಿಂದ 7 ದಿನ ದತ್ತಮಾಲಾ ಅಭಿಯಾನ ನಡೆಯಲಿದೆ.
ನವೆಂಬರ್ 14ರಂದು ಮಾಲಾಧಾರಿಗಳು ಇನಾಂ ದತ್ತಾತ್ರೇಯ ಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಮಾಲಾಧಾರಣೆ ಮಾಡಿರುವ ಶ್ರೀರಾಮಸೇನೆ ಕಾರ್ಯಕರ್ತರು ನವೆಂಬರ್ 14ರಂದು ದತ್ತ ಪಾದುಕೆ ದರ್ಶನಕ್ಕೆ ಆಗಮಿಸಲಿದ್ದಾರೆ.












Click it and Unblock the Notifications