ಚಿಕ್ಕಮಗಳೂರು; ಚಿನ್ನದ ವರ್ತಕನನ್ನು ಬೆದರಿಸಿ ಪೊಲೀಸರಿಂದ ದರೋಡೆ!
ಚಿಕ್ಕಮಗಳೂರು, ನವೆಂಬರ್22 : ಜಿಲ್ಲೆಯ ಅಜ್ಜಂಪುರ ಠಾಣೆಯ ಪೊಲೀಸರು ಚಿನ್ನದ ವ್ಯಾಪಾರಿಯನ್ನು ಬೆದರಿಸಿ ಲಕ್ಷಾಂತರ ರೂಪಾಯಿ ದರೋಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಚಿನ್ನದ ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆಂದು ವರ್ತಕ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣಾಧಿಕಾರಿ ಲಿಂಗರಾಜು ಸೇರಿದಂತೆ ನಾಲ್ವರು ಪೊಲೀಸರ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನಾಪತ್ತೆಯಾಗಿದ್ದಾರೆ. ಆರೋಪಿತ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಕಾಡಾನೆ ದಾಳಿಗೆ ಮಹಿಳೆ ಬಲಿ: ಮೂಡಿಗೆರೆ ಶಾಸಕರ ಮೇಲೆ ಜನರ ಹಲ್ಲೆ
ದಾವಣಗೆರೆ ಮೂಲದ ಚಿನ್ನದ ವ್ಯಾಪಾರಿ ಭಗವಾನ್ ಎಂಬವರನ್ನು ಬೆದರಿಸಿ ಅಜ್ಜಂಪುರ ಠಾಣಾಧಿಕಾರಿ ಲಿಂಗರಾಜು ಸೇರಿದಂತೆ ನಾಲ್ವರು ಪೊಲೀಸರು ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆಂದು ದೂರು ದಾಖಲಾಗಿತ್ತು.
ಪ್ರಕರಣದಲ್ಲಿ ಠಾಣಾಧಿಕಾರಿ ಲಿಂಗರಾಜು ಮುಖ್ಯ ಆರೋಪಿಯಾಗಿದ್ದಾರೆ. ಇನ್ನು ಸಖರಾಯಪಟ್ಟಣ ಠಾಣೆಯ ಧನಪಾಲ ನಾಯಕ್, ಕುದುರೆಮುಖದ ಓಂಕಾರ ಮೂರ್ತಿ, ಲಿಂಗದಹಳ್ಳಿಯ ಶರತ್ ರಾಜ್ ಉಳಿದ ಆರೋಪಿಗಳಾಗಿದ್ದಾರೆ.
ದಾವಣಗೆರೆಯ ಚಿನ್ನದ ವರ್ತಕ ಭಗವಾನ್ ಅವರ ಪುತ್ರ ರೋಹಿತ್ ಸುಮಾರು 2 ಕೆಜಿ ಚಿನ್ನದ ಆಭರಣಗಳನ್ನು ಬೇಲೂರಿನ ವರ್ತಕ ಒಬ್ಬರಿಗೆ ನೀಡಲು ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕಾರನ್ನು ಅಡ್ಡಹಾಕಿದ ಪೊಲೀಸರು ಹಣ ವಸೂಲಿ ಮಾಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ರೋಹಿತ್ ಆಭರಣಗಳೊಂದಿಗೆ ಬರುತ್ತಿದ್ದ ಸಂದರ್ಭದಲ್ಲಿ ತರೀಕೆರೆ ತಾಲೂಕಿನ ಬುಕ್ಕಾಂಬುದಿ ಗೇಟಿನ ಬಳಿ ಇಬ್ಬರು ಪೊಲೀಸರು ಕಾರನ್ನು ತಡೆದು ನಿಲ್ಲಿಸಿದ್ದಾರೆ. ನೇರವಾಗಿ ಕಾರಿನ ಒಳಗೆ ಬಂದು ಕುಳಿತ ಪೊಲೀಸ್ ಸಿಬ್ಬಂದಿ, ಸ್ವಲ್ಪ ದೂರದಲ್ಲಿದ್ದ ಠಾಣಾಧಿಕಾರಿ ಲಿಂಗರಾಜು ಬಳಿ ಕರೆದುಕೊಂಡು ಹೋಗಿದ್ದಾರೆ.
ಈ ವೇಳೆ ರೋಹಿತ್ನನ್ನು ಬಲವಂತವಾಗಿ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ 5 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಲ್ಲದೇ ಇದ್ದರೆ ಅಕ್ರಮವಾಗಿ ಚಿನ್ನ ಸಾಗಿಸುವ ಆರೋಪದ ಮೇಲೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.
ತಾನು ಕಾನೂನು ಬದ್ಧವಾಗಿ ವ್ಯಾಪಾರ ಮಾಡುತ್ತಿದ್ದು, ಆಭರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಿದರೂ ಬಿಡದೆ ಹಣಕ್ಕೆ ಒತ್ತಾಯಿಸಿದ್ದಾರೆ. ಅಂತಿಮವಾಗಿ 5 ಲಕ್ಷ ರೂಪಾಯಿ ನೀಡುವಂತೆ ಪೊಲೀಸರು ಪಟ್ಟು ಹಿಡಿದಿದ್ದು, ಕೊನೆಗೆ ರೋಹಿತ್ ಅಜ್ಜಂಪುರದಲ್ಲಿರುವ ವರ್ತಕರೊಬ್ಬರಿಂದ ಹಣವನ್ನು ಪಡೆದು ಪೊಲೀಸರಿಗೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವರ್ತಕರ ದೂರಿನ ಮೇರೆಗೆ ಇಲಾಖಾ ಮಟ್ಟದಲ್ಲಿ ತನಿಖೆ ನಡೆದಿದ್ದು, ಆರೋಪಿಗಳ ವಿರುದ್ಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಪ್ರಕರಣದಿಂದಾಗಿ ಜಿಲ್ಲಾ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಆಗಿದೆ.