ನೀರು ಕೊಡದ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ-ಅಣ್ಣಾಮಲೈ
ರಾಜ್ಯದ ಜನರಿಗೆ ಕುಡಿಯಲು ನೀರು ಕೊಡದ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ. ಇದಕ್ಕೆಲ್ಲ ಯುವಕರು ಉತ್ತರ ನೀಡಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಚಿಕ್ಕಬಳ್ಳಾಪುರ, ಮಾರ್ಚ್ 7: ರಾಜ್ಯದಲ್ಲಿ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬರುವ ಎಲ್ಲಾ ರೀತಿಯ ಅವಕಾಶಗಳು ಇವೆ. ರಾಜ್ಯದ ರಾಜಕೀಯದಲ್ಲಿ ಯುವಕರು ಅತಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದು ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಸೋಮವಾರ ಆಯೋಜಿಸಿದ್ದ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಕುಡಿಯಲು ನೀರು ಕೊಡದ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ. ಇದಕ್ಕೆಲ್ಲ ಯುವಕರು ಉತ್ತರ ನೀಡಬೇಕು ಎಂದು ಹೇಳಿದರು.

ದೇಶದಲ್ಲಿ ಯುವಕರು ಯಾವುದೇ ಕೆಲಸವನ್ನು ಆಸಕ್ತಿಯಿಂದ ಮಾಡುತ್ತಾರೆ. ದೇಶದ ಯುವಕರು ಮಾಡುವ ಮುಂದಾಲೋಚನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಷ್ಟವಾಗಿದೆ. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎನ್ನುವುದು ಅವರ ಆಶಯವಾಗಿದೆ ಎಂದು ತಿಳಿಸಿದರು.
ಗ್ರಾಮ, ನಗರಗಳಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾಸಕರ, ಎಂಪಿಗಳನ್ನು ಯುವಕರು ನೇರವಾಗಿ ಭೇಟಿ ಮಾಡಲು ಮೋದಿಯವರು ನಿರ್ದೇಶನ ನೀಡಿದ್ದಾರೆ. ಇದರಿಂದಾಗಿ ದೇಶದ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ದೇಶದ ಪ್ರತಿಯೊಂದು ಮನೆಮನೆಗೂ ನಲ್ಲಿ ಮೂಲಕ ನೀರು ಹರಿಸಲು ಸಂಕಲ್ಪ ಮಾಡಿದ್ದು ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ಬಿಜೆಪಿಗೆ ಕರ್ನಾಟಕ ದಕ್ಷಿಣ ಭಾರತದ ಹೆಬ್ಬಾಗಿಲು ಆಗಿದ್ದು, ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಧಿಕಾರಕ್ಕೆ ಬಂದರೆ ಕುಟುಂಬದ ಮಹಿಳೆಯರಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಇಂತಹ ಸುಳ್ಳು ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.

ಸರ್ಕಾರವು ಜಲ ಜೀವನ್ ಮಿಷನ್, ಕಿಸ್ಸಾನ್ ಸನ್ಮಾನ್ ಮತ್ತು ಆಯುಷ್ಮಾನ್ ಭಾರತ್ನಂತಹ ಯೋಜನೆಗಳೊಂದಿಗೆ 135 ಕೋಟಿ ಜನರಿಗೆ ನೀಡಲು ಪ್ರಾರಂಭಿಸಿರುವುದರಿಂದ ಕಾಂಗ್ರೆಸ್ಗೆ ಆತಂಕ ಎದುರಾಗಿದೆ. 1.5 ಕೋಟಿಗೂ ಹೆಚ್ಚು ಮನೆಗಳನ್ನು ಹೊಂದಿರುವ ಕರ್ನಾಟಕದಲ್ಲಿ ಕೇವಲ ಶೇ.12ರಷ್ಟು ಮನೆಗಳಿಗೆ ಪೈಪ್ ಮೂಲಕ ಕುಡಿಯುವ ನೀರನ್ನು ಕಾಂಗ್ರೆಸ್ ಪೂರೈಸಿತ್ತು, ಆದರೆ ಈಗ ಬಿಜೆಪಿ ಸರ್ಕಾರವು ಶೇ.63ರಷ್ಟು ಕುಟುಂಬಗಳಿಗೆ ನೀರು ಒದಗಿಸಿದ್ದು, ಒಂದು ವರ್ಷದಲ್ಲಿ 100% ರಷ್ಟು ಸಂಪೂರ್ಣ ಸಾಧಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್, ರಾಜ್ಯ ಖಾದಿ ಮತ್ತು ಗ್ಯಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್ ಕುಮಾರ್, ಮಾಜಿ ಶಾಸಕ ರಾಜಣ್ಣ, ಸಾಯಿನಾಥ್, ಮುಖಂಡರಾದ ಸಿ.ಮುನಿರಾಜು, ವೇಣುಗೋಪಾಲ್, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಯುವ ಅಧ್ಯಕ್ಷ ಅಭಿಷೇಕ್, ರಾಜಶೇಖರ್, ಕೃಷ್ಣಮೂರ್ತಿ ಮುಂತಾದವರು ಪಾಲ್ಗೊಂಡಿದ್ದರು.












Click it and Unblock the Notifications