ಗೋಹತ್ಯೆ ನಿಷೇಧಕ್ಕೆ ಸಿಎಂಗೆ ಮನವಿ: ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ, ಆಗಸ್ಟ್ 30: ಗೋವನ್ನು ಹತ್ಯೆ ಮಾಡುವುದು ಮಹಾಪಾಪ. ಗೋಹತ್ಯೆ ನಿಷೇಧಿಸಲು ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆ. ಜೊತೆಗೆ ಜಿಲ್ಲೆಯಲ್ಲಿ ಜಾಗೃತಿ ಆಂದೋಲನವನ್ನು ಕೂಡ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
Recommended Video
ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶ್ವರ ಗೋಶಾಲೆ ಉದ್ಘಾಟಿಸಿ ಮಾತನಾಡಿದ ಅವರು, "ಗೋಹತ್ಯೆಯನ್ನು ಎಲ್ಲ ಸರ್ಕಾರಗಳು ನಿಷೇಧಿಸಬೇಕು. ಗೋಮಾಂಸದ ರಫ್ತನ್ನು ಕೂಡ ನಿಷೇಧಿಸಬೇಕು. ಪಶ್ಚಿಮದ ದೇಶಗಳಲ್ಲಿ ನಾಲಿಗೆ ಚಪಲಕ್ಕೆ ಏನು ಬೇಕಾದರೂ ತಿನ್ನುತ್ತಾರೆ. ಆದರೆ ಭಾರತೀಯರಾಗಿ ನಾವು ಗೋಹತ್ಯೆ ಮಾಡಬಾರದು. ಇದನ್ನು ನಾನು ಬಲವಾಗಿ ವಿರೋಧಿಸುತ್ತೇನೆ" ಎಂದರು.
"ಭಾರತೀಯ ಸಂಪ್ರದಾಯದಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದೆ. ವಯಸ್ಸಾಗಿದೆ ಎಂಬ ಕಾರಣಕ್ಕೆ ಹಸುವನ್ನು ಮಾರಾಟ ಮಾಡಬಾರದು. ಹಸು ಮನುಷ್ಯನಿಗೆ ಎಲ್ಲವನ್ನೂ ನೀಡುವ ಕಾಮಧೇನುವಾಗಿದೆ. ಆದ್ದರಿಂದ ಗೋಹತ್ಯೆ ಮಾಡಬಾರದು" ಎಂದರು.

ಶೀಘ್ರದಲ್ಲೇ ಗೋಮಾಂಸ ರಫ್ತು ನಿಷೇಧ ಆಗಲಿದೆ
"ಗೋಮಾಂಸ ರಫ್ತು ನಿಷೇಧಕ್ಕೆ ಎರಡೂ ಸದನಗಳಲ್ಲಿ ಸಾಕಷ್ಟು ಚರ್ಚೆಯಾಗಬೇಕಿದೆ. ನಮ್ಮ ಪಕ್ಷ ಈ ವಿಚಾರದಲ್ಲಿ ದೃಢ ಸಂಕಲ್ಪ ಹೊಂದಿದೆ. ಶೀಘ್ರದಲ್ಲೇ ರಫ್ತು ನಿಷೇಧ ಆಗಲಿದೆ" ಎಂದರು.
"ನಮ್ಮ ಮನೆಯಲ್ಲೂ ಸುಮಾರು 50 ಹಸುಗಳಿದ್ದವು. ಆಗ ನಮ್ಮ ಅಜ್ಜ ರಾತ್ರಿಯಲ್ಲೂ ಹಸುಗಳಿಗೆ ಮೇವು ಹಾಕುತ್ತಿದ್ದರು. ಹಸುವಿನ ಸಗಣಿ ಸ್ಯಾನಿಟೈಜರ್ ನಂತೆ ಸೂಕ್ಷ್ಮ ರೋಗನುಗಳನ್ನೂ ನಾಶಪಡಿಸುವ ಶಕ್ತಿ ಹೊಂದಿದೆ. ಆದ್ದರಿಂದ ಸಗಣಿಯಲ್ಲಿ ನೆಲ ಸಾರಿಸುತ್ತಾರೆ" ಎಂದರು.
ಜಿಲ್ಲಾಧಿಕಾರಿ ಲತಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ ಉಪಸ್ಥಿತರಿದ್ದರು

ಗುರುಭವನ ನಿರ್ಮಾಣಕ್ಕೆ ಭೂಮಿ ಪೂಜೆ
ಜಿಲ್ಲಾ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾ ಗುರುಭವನ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡರು. ನಂತರ ಮಾತನಾಡಿ, "ಗುರುಭವನ ನಿರ್ಮಾಣಕ್ಕೆ ಅನೇಕ ಬಾರಿ ಗುದ್ದಲಿ ಪೂಜೆ ನೇರವೇರಿಸಿದರೂ ಕಾಮಗಾರಿ ಆರಂಭವಾಗಿರಲಿಲ್ಲ. ಬಹಳ ವರ್ಷಗಳ ಶಿಕ್ಷಕರ ಕನಸು ನನಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ತಂದ ರಾಷ್ಟ್ರೀಯ ಶಿಕ್ಷಣ ನೀತಿ ದೂರದೃಷ್ಟಿ ಹೊಂದಿದೆ. ಎಲ್ಲ ವರ್ಗದ ಜನರ ಮಕ್ಕಳಿಗೆ ಸಮಾನ ಅವಕಾಶ ಸಿಗಲಿದೆ" ಎಂದರು.

ಡ್ರಗ್ಸ್ ಮಾಫಿಯಾ ಬೆಂಗಳೂರಿನಲ್ಲಿ ವ್ಯಾಪಕ
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲನ್ನು ನಮ್ಮ ಮುಖಂಡರು ತರುವ ವಿಶ್ವಾಸವಿದೆ. ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಇದು ಅವಶ್ಯಕ.
ಡ್ರಗ್ಸ್ ಮಾಫಿಯಾ ಬೆಂಗಳೂರಿನಲ್ಲಿ ವ್ಯಾಪಕವಾಗುತ್ತಿರುವುದು ಆತಂಕಕಾರಿ. ಇದು ಸಮಾಜಕ್ಕೆ ಮಾರಕವಾಗಿದ್ದು, ಆರಂಭದಲ್ಲೇ ಕಿತ್ತುಹಾಕಬೇಕು. ಇಲ್ಲವಾದರೆ ಇದು ಅಪಾಯಕಾರಿಯಾಗಲಿದೆ. ಪೊಲೀಸರು ಮಾಫಿಯಾವನ್ನು ಸಮಾಜದಿಂದ ತೆಗೆದುಹಾಕಬೇಕು.

ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮ
ಆವಲಗುರ್ಕಿ ಪಂಚಾಯ್ತಿ ಗೇರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಈರಣ್ಣ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ರವರು ಭಾಗವಹಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷರಾದ ಕೆ.ವಿ.ನಾಗರಾಜ್, ಗ್ರಾಮಾಂತರ ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೃಷ್ಣಾರೆಡ್ಡಿ, ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಅಭಿಷೇಕ್, ಮುಖಂಡರಾದ ಜಯರಾಮರೆಡ್ಡಿ, ರಾಜಣ್ಣ, ಎಸ್ಟೇಟ್ ಪಾಪಣ್ಣ, ಮಂಜುನಾಥ್, ಎಂ.ಎಫ್.ಸಿ ನಾರಾಯಣಸ್ವಾಮಿ ಇನ್ನಿತರರು ಹಾಜರಿದ್ದರು.











Click it and Unblock the Notifications