ಚಿಂತಾಮಣಿ, ಬಾಗೇಪಲ್ಲಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ತಯಾರಿ, ಇಲಾಖೆ ಕ್ರಮಕ್ಕೆ ಆಕ್ಷೇಪ!
ಚಿಕ್ಕಬಳ್ಳಾಪುರ ಡಿಸೆಂಬರ್ 25: ಕೆ.ಸಿ. ವ್ಯಾಲಿ ಮತ್ತು ಎಚ್ಎನ್ ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಶುದ್ದೀಕರಿಸಬೇಕೆಂಬ ಬೇಡಿಕೆ ತೀವ್ರವಾಗಿದೆ. ಆದರೆ ಮೂರನೇ ಹಂತದ ಶುದ್ದೀಕರಣಕ್ಕೆ ತಲೆಕೆಡಿಸಿಕೊಳ್ಳದ ಸರಕಾರ ಇಡೀ ಜಿಲ್ಲೆಯ ಕೆರೆಗಳಿಗೆ ವ್ಯಾಲಿಗಳ ನೀರನ್ನು ಹರಿಸಲು ಮುಂದಾಗಿದೆ. ಎರಡನೇ ಹಂತದ ಶುದ್ದೀಕರಣ ನೀರನ್ನು ಹರಿಸಲು ಮುಂದಾಗಿರುವುದು ಈಗ ಆಕ್ಷೇಪಕ್ಕೆ ಕಾರಣವಾಗಿದೆ.
ಒಂದೆಡೆ ಎರಡನೇ ಹಂತದ ಎಚ್ಎನ್ ವ್ಯಾಲಿ ಯೋಜನೆಯಡಿ ಬಾಗೇಪಲ್ಲಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ನಡೆಯುತ್ತಿದೆ. ಇನ್ನೊಂದೆಡೆ ಕೆ.ಸಿ.ವ್ಯಾಲಿ ಯೋಜನೆಯ ಎರಡನೇ ಜಿಲ್ಲೆಯ ಚಿಂತಾಮಣಿ ತಾಲೂಕಿನ 50ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ನವೆಂಬರ್ 2024ಕ್ಕೆ ಕಾಮಗಾರಿ ಮುಗಿಸುವ ಗಡುವು ನೀಡಲಾಗಿದೆ. ಈ ಎರಡೂ ಕಾಮಗಾರಿಗಳು ಮುಗಿದರೆ ಇಡೀ ಜಿಲ್ಲೆಯ ಎಲ್ಲ ತಾಲೂಕಿನ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿತ ನೀರು ಹರಿದಂತೆ ಆಗಲಿವೆ.

ಚಿಂತಾಮಣಿಯ 50 ಕೆರೆಗೆ ನೀರು:
ಬೆಂಗಳೂರು ನಗರದ ಸಂಸ್ಕರಿಸಿದ ತ್ಯಾಜ ನೀರನ್ನು ಕೋಲಾರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆರೆಗಳು ಸೇರಿದಂತೆ ದ್ವಿತೀಯ ಹಂತದಲ್ಲಿ 272 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಮೇ 2022ರಲ್ಲೇ ಗುತ್ತಿಗೆದಾರರಿಗೆ ವಹಿಸಲಾಗಿದೆ. 2ನೇ ಹಂತದ ಯೋಜನೆಗೆ ಒಟ್ಟು 455 ಕೋಟಿ ರೂ. ಅಂದಾಜು ಮೊತ್ತವಾಗಿದ್ದು, ಗುತ್ತಿಗೆದಾರರಿಗೆ ಟೆಂಡರ್ ಮೂಲಕ 446.23 ಕೋಟಿ ರೂ. ವಹಿಸಲಾಗಿದೆ. ಇದುವರೆಗೂ 86.65 ಕೋಟಿ ರೂ. ಬಿಡಗಡೆಯಾಗಿದ್ದು, ಇನ್ನೂ 359.58 ಕೋಟಿ ರೂ. ಬಿಡುಗಡೆಯಾಗಬೇಕಿದೆ.
ಅರ್ಧದಷ್ಟು ಕಾಮಗಾರಿ ಪೂರ್ಣ:
1516.ಮೀ. ಎಂ.ಎಸ್ ಪೈಪ್ ಪೈಕಿ ಈಗಾಗಲೇ 83 ಕಿ.ಮೀ. ಪೈಪ್ ಅಳವಡಿಸಲಾಗಿದೆ. 70 ಕಿ. ಮೀ. ಎಚ್ ಡಿಪಿಐ ಪೈಪ್ ಪೈಕಿ 26 ಕಿ.ಮೀ. ಪೈಪ್ ಲೈನ್ ಅಳವಡಿಸಲಾಗಿದೆ. ಒಟ್ಟು 221 ಕಿ.ಮೀ. ಪೈಪ್ ಲೈನ್ ಪೈಕಿ 109 ಕಿ.ಮೀ. ಪೈಪ್ ಲೈನ್ ಅಳವಡಿಸಲಾಗಿದ್ದು, 112 ಕಿ.ಮೀ. ಪೈಪ್ ಲೈನ್ ಅಳವಡಿಸಬೇಕಿದೆ. ಒಟ್ಟು 9 ಪಂಪ್ಹೌಸ್ ಲಿಫ್ಟ್ಗಳ ಮೂಲಕ ಒಟ್ಟು 272 ಕೆರೆಗಳಿಗೆ ನೀರು ತುಂಬಿಸಲು ಯೋಜಿಸ ಲಾಗಿದೆ.
ಎಲ್ಲ ತಾಲೂಕುಗಳಿಗೂ ನೀರು:
272 ಕೆರೆಗಳ ಪೈಕಿ ಮಾಲೂರು 33, ಕೋಲಾರ 45, ಬಂಗಾರಪೇಟೆ 17, ಕೆಜಿಎಫ್ 12, ಮುಳ ಬಾಗಿಲು 42, ಶ್ರೀನಿವಾಸಪುರ ತಾಲೂಕಿನ 73 ಹಾಗೂ ಚಿಂತಾಮಣಿ ತಾಲೂಕಿನ 50 ಕೆರೆಗಳಿಗೆ ಎರಡನೇ ಹಂತದ ಯೋಜನೆಯಡಿ ನೀರು ತುಂಬಿಸಲು ಯೋಚಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ನವೆಂಬರ್ 2024ಕ್ಕೆ ಕಾಮಗಾರಿ ಮುಗಿದು ಕೆರೆಗಳಿಗೆ ನೀರು ಹರಿಯ ಬೇಕಿದೆ. ಈ ಯೋಜನೆ ಪೂರ್ಣ ಗೊಂಡರೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಎಲ್ಲ ತಾಲೂಕಿನ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿತ ತ್ಯಾಜ್ಯನೀರು ಹರಿದಂತೆ ಆಗಲಿದೆ.

3ನೇ ಹಂತದ ಶುದ್ಧಿಕರಣಕ್ಕೆ ನಿರ್ಲಕ್ಷ್ಯ:
ಈ ಬಾರಿ ವಿಧಾನಸಭೆ ಅಧಿವೇಶನಕ್ಕೂ ಮುನ್ನ ವ್ಯಾಲಿ ಯೋಜನೆಗಳಡಿ ಹರಿಯುತ್ತಿರುವ ನೀರಿನ ಮೂರನೇ ಹಂತದ ಶುದ್ದೀಕರಣಕ್ಕೆ ದೊಡ್ಡ ಮಟ್ಟದ ಹೋರಾಟವೂ ನಡೆದಿತ್ತು. ಆದರೆ, ಶಾಸಕರಿಂದ ಗಮನ ಸೆಳೆಯವ ಚರ್ಚೆ ನಡೆಯಲಿದೆ ಭಾವಿಸಲಾಗಿತ್ತು. ಆದರೆ, ಕೆಲ ಶಾಸಕರು ವ್ಯಾಲಿ ನೀರಿನ ಮೂರನೇ ಹಂತದ ಶುದ್ದೀಕರಣದ ಬಗ್ಗೆ ಮಾಹಿತಿ ಕೇಳಿದ್ದರಾದರೂ ಸಣ್ಣ ನೀರಾವರಿ ಇಲಾಖೆ ಮೂರನೇ ಹಂತದ ಶುದ್ದೀಕರಣದ ಪ್ರಸ್ತಾಪವೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ವ್ಯಾಲಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಸರ್ಕಾರು ಈ ಬಗ್ಗೆ ಸದನದಲ್ಲಿ ಗಮನ ಸೆಳೆಯುವ ಪ್ರಯತ್ನಗಳನ್ನು ಮಾಡಲೇ ಇಲ್ಲ. ಇನ್ನೊಂದೆಡೆ ಮೂರು ಜಿಲ್ಲೆಗಳಲ್ಲಿ ಬೆಂಗಳೂರಿನ ಸಂಸ್ಕರಿತ ತ್ಯಾಜ್ಯ ನೀರನ್ನು ಕೆರೆಗಳಿಗೆ ಹರಿಸುವ ಕಾಮಗಾರಿಗಳನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ವಿಸ್ತರಿಸುವ ಕಾಮಗಾರಿಗಳು ನಡೆಯುತ್ತಲೇ ಇವೆ. ಇನ್ನೊಂದೆಡೆ ವ್ಯಾಲಿ ನೀರಿನ ಮೂರನೇ ಹಂತದ ಶುದ್ಧಿಕರಣಕ್ಕೆ ಹೋರಾಟಗಳು ನಡೆಯುತ್ತಿದ್ದು, ಮುಂದೆ ತೀವ್ರ ಸ್ವರೂಪ ಪಡೆಯವ ಸಾಧ್ಯತೆಗಳು ಹೆಚ್ಚಿವೆ.
ಈಗಾಗಲೇ ವ್ಯಾಲಿ ಯೋಜನೆಗಳಡಿ ಹರಿಯುತ್ತಿರುವ ನೀರು ವಿಷಪೂರಿತ ಎಂಬುದು ಕಣ್ಣಿಗೆ ಕಾಣುವಂತಿದೆ.ಆದರೆ, ಜನರ ಹಿತ ಬಲಿಕೊಟ್ಟು ಅದ್ಯಾವ ಕಾರಣಕ್ಕೆ ಈ ಯೋಜನೆ ವಿಸ್ತರಿಸುತ್ತಿದ್ದಾರೋ ಗೊತ್ತಿಲ್ಲ. ಮೊದಲಿ ಮೂರನೇ ಹಂತದಲ್ಲಿ ನೀರನ್ನು ಶುದ್ದೀಕರಿಸುವ ಕೆಲಸವನ್ನು ಮಾಡಲಿ. ಅದನ್ನು ಬಿಟ್ಟು ಕೋಟ್ಯಂತರ ರೂ. ವೆಚ್ಚ ಮಾಡಿ ಕಾಮಗಾರಿಗಳನ್ನು ಮಾಡಿದರೆ ಜನರಿಗೆ ವಿಷವುಣಿಸಿದಂತೆ ಆಗಲಿದೆ ಎಂದು ಉಸಿರಿಗಾಗಿ ಹಸಿರು ಸಂಸ್ಥೆ ಟ್ರಸ್ಟಿ ಗಂಗಾಧರರೆಡ್ಡಿ ಹೇಳಿದರು.

ಈಗಾಗಲೇ ಕೆರೆಗಳಿಗೆ ಹರಿಯುತ್ತಿರುವ ಸಂಸ್ಕರಿತ ತ್ಯಾಜ್ಯ ನೀರಿನಿಂದ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ. ಸಂಸ್ಕರಿತ ನೀರು ನೇರ ಬಳಕೆಗೆ ಹಾಗೂ ಕೃಷಿಗೆ ಯೋಗ್ಯವಲ್ಲ ಎಂಬ ಫಲಕಗಳನ್ನು ಹಾಕಿಕೊಂಡು ಕೆರೆಗಳಿಗೆ ನೀರು ಹರಿಸುತ್ತಿದ್ದಾರೆ. ಇಂತಹ ನೀರಿನಿಂದ ಜನರಿಗೆ ತೊಂದರೆಯಾಗಲಿದೆ ಎಂಬ ಅರಿವು ಬಾರದಿರುವುದು ನಿಜಕ್ಕೂ ದುರಂತ ಎಂದು ನೀರಾವರಿ ಹೋರಾಟಗಾರ ಲಕ್ಷ್ಮೀನಾರಾಯಣ್ ಬೇಸರ ವ್ಯಕ್ತಪಡಿಸಿದರು.
ಈಗಲೇ ವ್ಯಾಲಿ ಯೋಜನೆಗಳಡಿ ಗುಣಮಟ್ಟ ಮತ್ತು ನಿಗದಿತ ನೀರನ್ನು ಹರಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ವಿಸ್ತರಣೆ ನೆಪದಲ್ಲಿ ಪೈಪ್ ಗಳನ್ನು ಹಾಕುವ ಕೆಲಸಗಳನ್ನು ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಸೇರಿದಂತೆ ಹಲವು ಸಂಸ್ಥೆಗಳು ಮೂರನೇ ಹಂತದ ಶುದ್ದೀಕರಣ ಮಾಡಲೇಬೇಕೆಂದು ಹೇಳಿದ್ದರೂ ಸರಕಾರ ಧಿ ಕ್ಕರಿಸುತ್ತಿರುವುದು ಪರ್ಯಾಸ. ಸಮಸ್ಯೆ ಇನ್ನಷ್ಟು ಭೀಕರವಾಗುವ ಮೊದಲು ಮೂರನೇ ಹಂತದ ಶುದ್ದೀಕರಣಕ್ಕೆ ಕ್ರಮ ಕೈಗೊಳ್ಳಲಿ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಅಂಜನೇಯರೆಡ್ಡಿ ತಾಕೀತು ಮಾಡಿದರು.












Click it and Unblock the Notifications