ಜಾತಿ ನೋಡಿ ಮತ ಹಾಕಿದರೆ ಸರ್ಕಾರ ಉಳಿಯೊಲ್ಲ: ಮೊಯ್ಲಿ
ಚಿಕ್ಕಬಳ್ಳಾಪುರ, ಮಾರ್ಚ್ 25: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಂ. ವೀರಪ್ಪ ಮೊಯ್ಲಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇದಕ್ಕೂ ಮುನ್ನ ಮಾತನಾಡಿದ ಅವರು, ಜಾತಿ ಆಧಾರದಲ್ಲಿ ಮತ ಹಾಕಿದರೆ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಉಳಿವು ಕಷ್ಟ ಎಂದು ಆತಂಕ ವ್ಯಕ್ತಪಡಿಸಿದರು.
'ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಅವರು ಒಕ್ಕಲಿಗರು ಎನ್ನುವ ಕಾರಣಕ್ಕೆ ಒಕ್ಕಲಿಗರು ಅವರಿಗೆ ಮತ ನೀಡಿದರೆ ಒಕ್ಕಲಿಗ ಜನಾಂಗದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಸಂಚಕಾರ ಬರಲಿದೆ' ಎಂದು ಮೊಯ್ಲಿ ಹೇಳಿದರು.

ಜೆಡಿಎಸ್ ಕಾರ್ಯಕರ್ತರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು ಮೈತ್ರಿ ಅಭ್ಯರ್ಥಿಗೆ ಮತ ಹಾಕಬೇಕು. ಜಾತಿಯನ್ನು ನೋಡಿ ಮತ ಚಲಾಯಿಸಿದರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವೇ ಉಳಿಯುವುದಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ, ಯಾರೂ ಜಾತಿ ನೋಡಿ ಮತ ನಿಡುವುದಿಲ್ಲ. ಅದೆಲ್ಲ ಸುಳ್ಳು. ಪಕ್ಷ ನೋಡಿ, ದೇಶ ನೋಡಿ, ಮೋದಿ ನೋಡಿ ಓಟು ಕೊಡುವ ಕಾಲ. ಜಾತಿ ನೋಡಿ ಓಟು ಕೊಡುವವರಿಲ್ಲ. ಹಾಗೆ ಓಟು ಕೇಳುವವರೂ ಇಲ್ಲ ಎಂದು ಹೇಳಿದರು.
ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?
ಜಾತಿಗಳು ಎಷ್ಟಿವೆ ಎಂದು ನಮಗೆ ಗೊತ್ತಿಲ್ಲ. ಅದರ ಆಧಾರದಲ್ಲಿ ಮತ ಕೇಳುವುದಿಲ್ಲ. ಬಿಜೆಪಿಗೆ ಮತ ಕೊಡಿ ಎಂದು ಕೇಳುತ್ತೇನೆ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರ ಇರುವುದರಿಂದ ಅವರು ಒಟ್ಟಾಗಿ ಸ್ಪರ್ಧೆ ಮಾಡುವುದು ಸಹಜ. ಇಲ್ಲಿ ನೇರ ಸ್ಪರ್ಧೆ ಇದೆ. ಕಳೆದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇತ್ತು. ನೇರ ಸ್ಪರ್ಧೆಯಿಂದ ನಮಗೆ ಒಳ್ಳೆಯದಾಗುತ್ತದೆ. ಗೆಲ್ಲುವುದು ಸುಲಭ. ಈ ಸಲ ಬಚ್ಚೇಗೌಡರಿಗೆ ಮತ ಕೊಡಬೇಕು ಎಂಬ ಜನಾಭಿಪ್ರಾಯ ಇದೆ ಎಂದು ಹೇಳಿದರು.












Click it and Unblock the Notifications