ವಿಡಿಯೋ: ಭಾರೀ ಮಳೆಗೆ ನಂದಿಬೆಟ್ಟದಲ್ಲಿ ಭೂಕುಸಿತ; ಪ್ರವಾಸಿಗರು ವಾಪಸ್
ಚಿಕ್ಕಬಳ್ಳಾಪುರ, ಆಗಸ್ಟ್ 25: ಮಂಗಳವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದ ಬ್ರಹ್ಮಗಿರಿ ಗುಡ್ಡಗಳು ಕುಸಿದಿವೆ.
Recommended Video
ನಂದಿ ಬೆಟ್ಟದ ಮೇಲಿಂದ ನೀರು ಹರಿದು ಬಂದು 10 ಅಡಿ ಆಳಕ್ಕೆ ಮುಖ್ಯ ರಸ್ತೆ ಕುಸಿದಿದೆ. ರಂಗಪ್ಪ ವೃತ್ತದ ಬಳಿ ಗುಡ್ಡ ಕುಸಿದು ಗಿರಿಧಾಮದ ರಸ್ತೆ ಬಂದ್ ಆಗಿದೆ. ಹೀಗಾಗಿ ನಂದಿ ಬೆಟ್ಟಕ್ಕೆ ಬರುತ್ತಿರುವ ಪ್ರವಾಸಿಗರನ್ನು ಪೊಲೀಸರು ವಾಪಸ್ ಕಳಿಸುತ್ತಿದ್ದಾರೆ.
ನಂದಿಬೆಟ್ಟದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ರಸ್ತೆಗೆ ಅಡ್ಡಲಾಗಿ ಬಂಡೆಗಳು ಉರುಳಿ ನಿಂತಿವೆ. ರಸ್ತೆ ಬಂದ್ ಆಗಿದ್ದರಿಂದ ನಂದಿಬೆಟ್ಟಕ್ಕೆ ಬಂದಿರುವ ಪ್ರವಾಸಿಗರಿಗೆ ನಿರಾಸೆ ಅನುಭವಿಸುವಂತಾಗಿದೆ.

ಮಂಗಳವಾರ ರಾತ್ರಿ ನಂದಿಬೆಟ್ಟದ ಪರಿಸರದಲ್ಲಿ ಭಾರೀ ಮಳೆಯಾಗಿದ್ದು, ಮೇಲ್ಭಾಗದಿಂದ ಮಣ್ಣು ಕೊಚ್ಚಿಕೊಂಡು ಬಂದಿದೆ. ಮಳೆಯ ನೀರಿನ ಜೊತೆ ಮಣ್ಣು, ಬೃಹತ್ ಬಂಡೆ, ಮರ ಗಿಡಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇನ್ನು ವಿದ್ಯುತ್ ಕಂಬಗಳು ಧರೆಗೆ ಉರುಳಿರುವ ಕಾರಣ ನಂದಿ ಗಿರಿಧಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ನಂದಿಬೆಟ್ಟದ ಚೆಕ್ಪೋಸ್ಟ್ನ ಸ್ವಲ್ಪ ದೂರದಲ್ಲೇ ರಸ್ತೆಗೆ ಅಡ್ಡಲಾಗಿ ಮಣ್ಣು ಶೇಖರಣೆಯಾಗಿದ್ದರಿಂದ, ಮೊದಲೇ ರೆಸಾರ್ಟ್ ಬುಕ್ ಮಾಡಿಕೊಂಡು ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಮೇಲ್ಭಾಗದಲ್ಲಿಯೇ ಸಿಲುಕಿಕೊಂಡಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ್ದು, ಮಣ್ಣು ತೆರವು ಕೆಲಸದಲ್ಲಿ ನಿರತರಾಗಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಭೂ ಕುಸಿತವಾಗಿದೆ. ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಮಲೆನಾಡು ಭಾಗದಲ್ಲಿ ಕಾಣಿಸುತ್ತಿದ್ದ ದೃಶ್ಯಗಳನ್ನು ತಮ್ಮಲ್ಲಿ ಆಗಿರುವುದನ್ನು ಕಂಡು ಸ್ಥಳೀಯ ಜನರು ಆತಂಕಕ್ಕೊಳಗಾಗಿದ್ದಾರೆ.

ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ರಾತ್ರಿಯಿಡೀ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಜೈಭೀಮ್ ನಗರ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನಗರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು
ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದಲ್ಲಿ ನಡೆದಿದೆ. ವಿದ್ಯುತ್ ಕಂಬ ಬಿದ್ದಿರುವ ಪರಿಣಾಮ ನಂದಿ ಗಿರಿಧಾಮದಲ್ಲಿ ವಿದ್ಯುತ್ ಸಂಪೂರ್ಣ ಕಡಿತವಾಗಿದೆ. ಅಲ್ಲದೆ ನಂದಿ ಗಿರಿಧಾಮದ ಕೆಲವೆಡೆ ಮರಗಳು ಕೂಡ ನೆಲಕ್ಕುರುಳಿವೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಕೋಲಾರದಲ್ಲಿ ಮಳೆ ನೀರಿನಿಂದ ಕೆರೆಗಳಂತಾದ ಜಮೀನು
ಕೋಲಾರ ಜಿಲ್ಲೆಯಲ್ಲು ಮಂಗಳವಾರ ರಾತ್ರಿಯಿಡೀ ಸುರಿದ ಮಳೆಗೆ ಕೆ.ಸಿ. ವ್ಯಾಲಿಯ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕೋಲಾರ ತಾಲೂಕಿನ ನರಸಾಪುರ ಭಾಗದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ.
ಇನ್ನು ಕೆ.ಸಿ. ವ್ಯಾಲಿ ಕಾಲುವೆಯಲ್ಲಿ ತುಂಬಿ ಹರಿಯುತ್ತಿರುವ ಮಳೆ ನೀರಿನ ಪರಿಣಾಮ ಕ್ಯಾರೆಟ್, ಟೊಮೆಟೋ, ರಾಗಿ, ಕೊತ್ತಂಬರಿ, ಸೇರಿದಂತೆ ಇನ್ನಿತರ ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿದೆ ಎಂದು ವರದಿಯಾಗಿದೆ.












Click it and Unblock the Notifications