ವಿಧುರಾಶ್ವಥದಲ್ಲಿ ಉತ್ತರ ಪಿನಾಕಿನಿ ನದಿ ನೀರು ಸಂಗ್ರಹಿಸಿದ ನಿಖಿಲ್
ಚಿಕ್ಕಬಳ್ಳಾಪುರ, ಏಪ್ರಿಲ್ 16: ಜನತಾ ಜಲಧಾರೆ ಗಂಗಾ ರಥಯಾತ್ರೆ ಕಾರ್ಯಕ್ರಮದಡಿಯಲಿ, ಜಿಲ್ಲೆಯ ಗೌರಿಬಿದನೂರಿನ ವಿಧುರಾಶ್ವಥದಲ್ಲಿ ಉತ್ತರ ಪಿನಾಕಿನಿ ನದಿ ನೀರು ಸಂಗ್ರಹವನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಂಗ್ರಹಿಸಿದರು.
ಗೌರಿಬಿದನೂರು ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡುತ್ತಾ, "ಇಂದು ರಾಜ್ಯದ 15 ಕಡೆ ಜಲಧಾರೆ ಕಾರ್ಯಕ್ರಮ ನಡೆಯುತ್ತಿದೆ. ನಾನು ಗೌರಿಬಿದನೂರಿನ ಕಾರ್ಯಕ್ರಮಕ್ಕೆ ಬಂದಿದ್ದು ಸಂತೋಷವಾಗಿದೆ. ಜನತಾ ಜಲಧಾರೆ ಕಾರ್ಯಕ್ರಮ ಕುಮಾರಸ್ವಾಮಿ ಅವರ ಪರಿಕಲ್ಪನೆಯ ಕಾರ್ಯಕ್ರಮ"ಎಂದು ನಿಖಿಲ್ ಹೇಳಿದರು.
"ರಾಜ್ಯದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಸರಿಯಾಗಿ ಆಗಿಲ್ಲ, ರಾಜ್ಯದ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವಾರು ಯೋಜನೆಗಳು ಜಾರಿಯಾಗಬೇಕು ಅಂದರೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು"ಎಂದು ನಿಖಿಲ್ ಅಭಿಪ್ರಾಯ ಪಟ್ಟರು.

"ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅದೇ ರೀತಿ ರಾಜ್ಯಕ್ಕೆ ಒಳ್ಳೆಯ ಯೋಜನೆಗಳನ್ನು ಜೆಡಿಎಸ್ ಕೊಡಲಿದೆ, ನೀವು ನಮಗೆ ಬೆಂಬಲ ಕೊಡಬೇಕು. ರಾಜ್ಯದಲ್ಲಿ ಸಾಮರಸ್ಯ ಕೆಡುತ್ತಿದೆ, ಇಂತಹ ಪರಿಸ್ಥಿತಿ ಬರಲು ಭಜರಂಗದಳ ಸೇರಿದಂತೆ ಹಲವರು ಕಾರಣ"ಎಂದು ನಿಖಿಲ್ ಹೇಳಿದರು.
"ಏಕೆ ರಾಜ್ಯದಲ್ಲಿ ಜನರು ಶಾಂತಿಯಿಂದ ಇರಬಾರದಾ? ಜನರ ಮಧ್ಯ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಇದನ್ನು ಸರ್ಕಾರ ಸಹ ನೋಡಿಕೊಂಡು ಕೂತಿದೆ. ಇದೆಲ್ಲವನ್ನು ನೀವು ನೋಡುತ್ತಿದ್ದೀರಾ, ಎಲ್ಲರೂ ಯೋಚನೆ ಮಾಡಿ ಮುಂದಿನ ಚುನಾವಣೆಗಳಲ್ಲಿ ಮತ ಕೊಡುವಾಗ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನದಲ್ಲಿಟ್ಟುಕೊಂಡಿರಬೇಕು"ಎಂದು ನಿಖಿಲ್ ಈ ಸಂದರ್ಭದಲ್ಲಿ ಹೇಳಿದರು.

"ನಾನು ಏಕೆ ಈ ವಿಚಾರವನ್ನು ಮಾತನಾಡುತ್ತಿದ್ದೀನಿ ಅಂದರೆ, ರಾಜ್ಯ ಶಾಂತಿಯಿಂದ ಇರಬೇಕು ಅದು ಎಲ್ಲರಿಗೂ ಒಳ್ಳೆಯದು. ರಾಜ್ಯದ ನೀರಾವರಿ ಯೋಜನೆಗೆ ದೇವೇಗೌಡರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಗಾಗಿ ಮುಂದೆ ನಮಗೆ ಒಮ್ಮೆ ಪೂರ್ಣ ಪ್ರಮಾಣದ ಅಧಿಕಾರ ಕೊಡಿ. ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಕ್ಕೆ ಅಧಿಕಾರ ಕೊಟ್ಟೀದ್ದೀರಿ. ಹಾಗೇ ಕುಮಾರಸ್ವಾಮಿ ಅವರಿಗೂ ಒಮ್ಮೆ ಪೂರ್ಣ ಪ್ರಮಾಣದ ಅಧಿಕಾರ ಕೊಡಿ, ಆಗ ರಾಜ್ಯದ ಅಭಿವೃದ್ಧಿಗೆ ಸಹಾಯವಾಗಲಿದೆ"ಎನ್ನುವ ಭರವಸೆಯನ್ನು ನಿಖಿಲ್ ಕುಮಾರಸ್ವಾಮಿ ನೀಡಿದರು.












Click it and Unblock the Notifications