ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲೇ ಪಾವತಿ ಕೇಂದ್ರ; ಏನಿದರ ಪ್ರಯೋಜನ?
ಚಿಕ್ಕಬಳ್ಳಾಪುರ, ಫೆಬ್ರವರಿ 3: ಚಿಕ್ಕಬಳ್ಳಾಪುರದಲ್ಲಿ ಹಿರಿಯ ನಾಗರಿಕರು, ದಿವ್ಯಾಂಗರು ಸೇರಿದಂತೆ ಸಾರ್ವಜನಿಕರು ಬ್ಯಾಂಕುಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ನೂತನ ಪಾವತಿ ಕೇಂದ್ರವನ್ನು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಉದ್ಘಾಟಿಸಿದರು. ಇದೇ ದಿನ ತವರು ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ನಗರಸಭೆ ಆವರಣದಲ್ಲಿ ಬ್ಯಾಂಕ್ ಆಫ್ ಬರೋಡದ ನೂತನ ಪಾವತಿ ಕೇಂದ್ರವನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು. ಈ ಪಾವತಿ ಕೇಂದ್ರದಿಂದ ಜನರಿಗೆ ಹಲವು ರೀತಿಯಲ್ಲಿ ಸಹಕಾರಿ ಆಗಲಿದೆ. ಈ ವ್ಯವಸ್ಥೆಯ ಮೂಲಕ ಜನರು ತ್ವರಿತ ಮತ್ತು ಸುಲಭವಾಗಿ ಹಣ ಪಾವತಿಸಲು ಸಾಧ್ಯವಾಗುತ್ತದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಿರಿಯ ನಾಗರಿಕರು, ದಿವ್ಯಾಂಗರು ಬ್ಯಾಂಕುಗಳಿಗೆ ಅಲೆಯುವ ಸಮಸ್ಯೆ ಇರುವುದಿಲ್ಲ. ಇದು ನಗರಸಭೆಯ ವಿವಿಧ ಶುಲ್ಕಗಳ ಪಾವತಿಗೆ ಸೀಮಿತವಾಗಿದೆ. ಹೀಗಾಗಿ ಹೆಚ್ಚು ಜನಜಂಗುಳಿ ಉಂಟಾಗುವುದಿಲ್ಲ. ಜೊತೆಗೆ ಪಾವತಿ ಕೇಂದ್ರದಲ್ಲಿ ಹಣ ಪಾವತಿಯ ನಂತರ ಚಲನ್ ಪ್ರತಿಯನ್ನು ನಗರಸಭೆಗೆ ಸಲ್ಲಿಸಲು ಅನುಕೂಲವಾಗಲಿದೆ. ಇದರಿಂದ ನಗದು ರಹಿತ ಪಾವತಿಯ ಅನುಕೂಲವೂ ಸಿಗಲಿದೆ ಎಂದರು.

73 ಲಕ್ಷ ರೂ. ಮೌಲ್ಯದಲ್ಲಿ ಮಳಿಗೆ ನಿರ್ಮಾಣ:
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ಕೃಷ್ಣಾ ಟಾಕೀಸ್ ಮುಂಭಾಗದಲ್ಲಿ ಐಡಿಎಸ್ಎಂಟಿ ಯೋಜನೆಯಡಿ 73 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಸಚಿವ ಡಾ ಕೆ ಸುಧಾಕರ್ ಗುರುವಾರ ಉದ್ಘಾಟಿಸಿದರು. ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಯೋಜನೆಯಡಿ ನಿರ್ಮಿಸಲಾಗಿರುವ ಈ ಕಟ್ಟಡಗಳು ಸಣ್ಣ ಮತ್ತು ಅತಿಸಣ್ಣ ವ್ಯಾಪಾರಿಗಳಿಗೆ ಕಡಿಮೆ ಬಾಡಿಗೆ ವೆಚ್ಚದಲ್ಲಿ ಸೂಕ್ತ ಮಾರುಕಟ್ಟೆ ಸ್ಥಳ ಒದಗಿಸಲಿದೆ.
ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ:
ಚಿಕ್ಕಬಳ್ಳಾಪುರ ನಗರದ ವಿವಿಧ ಕಡೆ ನಗರಾಭಿವೃದ್ಧಿ ಮತ್ತು ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಒಟ್ಟು 3.3 ಕೋಟಿ ರೂಪಾಯಿ ವೆಚ್ಚದಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಸಚಿವ ಡಾ.ಕೆ.ಸುಧಾಕರ್ ಭೂಮಿ ಪೂಜೆ ನೆರವೇರಿಸಿದರು. ತದನಂತರದಲ್ಲಿ ತುಮಕಲಹಳ್ಳಿ ಗ್ರಾಮದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಟ್ಟಡದ ನೆಲ ಅಂತಸ್ತು ಮತ್ತು 1ನೇ ಅಂತಸ್ತು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಈ ಕಾಮಗಾರಿಗೆ ಸುಮಾರು 2.48 ಕೋಟಿ ರೂಪಾಯಿ ವೆಚ್ಚವಾಗಲಿದೆ.
ಪಾಲಿಕ್ಲಿನಿಕ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ:
ಹೊನ್ನೇನಹಳ್ಳಿ ಗ್ರಾಮದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪಾಲಿಕ್ಲಿನಿಕ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಶಂಕುಸ್ಥಾಪನೆ ನೆರವೇರಿಸಿದರು. ಈ ಮೂಲಕ ಒಂದೇ ಸೂರಿನಡಿ ಎಲ್ಲಾ ರೀತಿಯ ಪಶು ವೈದ್ಯಕೀಯ ಸೇವೆಗಳು ಸಿಗಲಿದೆ.
ಪ್ರಯೋಗಾಲಯ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಎಕ್ಸ್ ರೇ ಸೌಲಭ್ಯಗಳು ಈ ಚಿಕಿತ್ಸಾಲಯದಲ್ಲಿ ಇರಲಿದೆ. 1.20 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ಈ ಪಾಲಿಕ್ಲಿನಿಕ್ ನಲ್ಲಿ ಬರಡು ರಾಸುಗಳಿಗೆ ಪ್ರಸೂತಿ ತಜ್ಞರಿಂದ ಚಿಕಿತ್ಸೆ, ತುರ್ತು ಸಂದರ್ಭಗಳಲ್ಲಿ ರೈತರ ಮನೆ ಬಾಗಿಲಿಗೆ ಆ್ಯಂಬುಲೆನ್ಸ್ ಸೇವೆ ಸಹಿತ ಅನೇಕ ಸೇವೆಗಳು ಸಿಗಲಿವೆ.












Click it and Unblock the Notifications