ಗಣೇಶ ಚತುರ್ಥಿ: ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಲಗ್ಗೆ ಇಟ್ಟ ಪರಿಸರ ಸ್ನೇಹಿ ಗೌರಿ-ಗಣೇಶ
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 16: ವಿಘ್ನವಿನಾಶಕ, ಮೋದಕ ಪ್ರೀಯ ಗಣೇಶನ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಪಟ್ಟಣದ ವಿವಿಧ ಕಡೆ ಮಾರಾಟಕ್ಕಿಟ್ಟ ಬಣ್ಣ ಬಣ್ಣದ ಗಣಪನ ವಿಗ್ರಹಗಳು ಎಲ್ಲರ ಮನಸುರೆಗೊಳಿಸುತ್ತಿವೆ. ಗಣೇಶ ಚತುರ್ಥಿ ದಿನ ಪ್ರತಿಷ್ಠಾಪನೆಯಾಗುವ ಗಣಪ ಆಯಾ ಮನೆಯವರ ಪದ್ಧತಿಯಂತೆ ಪೂಜಿಸಿಕೊಂಡು, ಕೊನೆಗೆ ನೀರಿನಲ್ಲಿ ವಿಸರ್ಜನೆಗೊಳ್ಳುತ್ತಾನೆ.
ಗಣೇಶ ಚತುರ್ಥಿ ಮತ್ತೆ ಬರುತ್ತಿದೆ. ಈ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಎಲ್ಲೆಡೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಮಾರಾಟ ಭರದಿಂದ ಸಾಗಿದ್ದು ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಮಾರಾಟಕ್ಕೆ ಲಗ್ಗೆ ಇಟ್ಟಿವೆ.

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಹಾಗೂ ಹೋಬಳಿ ಕೇಂದ್ರಗಳಲ್ಲಿ ವಿವಿಧ ಬಗೆ ಬಗೆಯ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತಿದ್ದು, ಪರಿಸರ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆಯೂ ಸಹ ವ್ಯಕ್ತವಾಗಿದ್ದು, ಉತ್ತಮ ಮಾರಾಟವು ಸಹ ನಡೆಯುತ್ತಿದೆ. ಪರಿಸರ ಸ್ನೇಹಿ ಗಣಪನ ವಿಗ್ರಹಗಳನ್ನು ಮಾರಾಟ ಮಾಡಲು ವ್ಯಾಪಾರಸ್ಥರು ಮುಂದಾಗಿರುವುದು ಪಟ್ಟಣದ ಸಾರ್ವಜನಿಕರ ಮೆಚ್ಚುಗೆಗೂ ಸಹ ಪಾತ್ರವಾಗಿದೆ.
ಸಿದ್ಧತೆಗಳು ಹೇಗಿವೆ?
ಜಿಲ್ಲೆಯ ಚಿಕ್ಕಬಳ್ಳಾಪುರ, ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರು, ಮಂಚೇನಹಳ್ಳಿ ಹಾಗೂ ಚೇಳೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಸಂಘ ಸಂಸ್ಥೆಗಳು ಹಾಗೂ ವಿನಾಯಕ ಯುವಕರ ಸಂಘಗಳು ಸೇರಿದಂತೆ ಹಲವಾರು ಯುವಕರು, ಮುಖಂಡರು ಅದ್ಧೂರಿಯಾಗಿ ವೇದಿಕೆಗಳ ಮೂಲಕ ಗಣೇಶನನ್ನು ಪ್ರತಿಷ್ಠಾಪನೆ ಮಾಡಲು ಬೇಕಾದ ಸಿದ್ಧತೆಗಳು ಬರದಿಂದ ಸಾಗಿವೆ.

ಪಿಒಪಿ ಮೂರ್ತಿಗಳೇಕೆ ಬೇಡ ?
ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಂತರ ವಿಸರ್ಜನೆಗೊಳ್ಳುವ ವಿಗ್ರಹಗಳು ಕೆರೆ, ಬಾವಿಗಳಲ್ಲಿ ಉಂಟು ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಗಣೇಶ ವಿಗ್ರಹ ತಯಾರಿಕೆ ವೇಳೆ ಪರಿಸರಕ್ಕೆ ಹಾನಿಕಾರಕವಾಗಿರುವ ಬಣ್ಣಗಳನ್ನು ಬಳಸಲಾಗಿರುತ್ತದೆ. ಹೀಗಾಗಿ ಅಂತಹ ವಿಗ್ರಹವನ್ನು ನೀರಿಗೆ ಹಾಕುತ್ತಿದ್ದಂತೆಯೇ ನೀರು ಮಲೀನಗೊಳ್ಳುತ್ತದೆ. ಇನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ವಿಗ್ರಹಗಳಂತೂ ಎಷ್ಟು ದಿನಗಳಾದರೂ ಕರಗದೇ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಪರಿಸರ ಸ್ನೇಹಿ ಗಣಪ ತಯಾರಾಗುವುದು ಹೇಗೆ?
ಕಳೆದ ಎರಡು ದಶಕಗಳಿಂದ ಚಿಕ್ಕಬಳ್ಳಾಪುರದ ನಾಗರಾಜಯ್ಯ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ತಯಾರಿಸಿ, ಜಿಲ್ಲೆಯ ವಿವಿಧ ತಾಲೂಕುಗಳು ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಮಾರಾಟ ಸಹ ಮಾಡುತ್ತಿದ್ದಾರೆ. ಜೇಡಿಮಣ್ಣು, ಗೋಪಿ ಚಂದನ, ಅಷ್ಟಗಂಧ, ಇದ್ದಿಲು ಪುಡಿಯ ಮಿಶ್ರಣದಿಂದ ಬಗೆ ಬಗೆಯ ವಿಗ್ರಹಗಳನ್ನು ಇವರು ತಯಾರಿಸುತ್ತಿದ್ಧಾರೆ. ಇದರಿಂದಾಗಿ ವಿಸರ್ಜನೆ ಬಳಿಕ ಇವೆಲ್ಲ ನೀರಿನಲ್ಲಿ ಸುಲಭವಾಗಿ ಕರಗುತ್ತವಲ್ಲದೇ ಪರಿಸರಕ್ಕೂ ಯಾವುದೇ ರೀತಿಯಲ್ಲಿ ಹಾನಿ ಮಾಡಲಾರವು.
ನಮಗೂ ಇರಲಿ ಪರಿಸರ ಕಾಳಜಿ
ಗಣೇಶ ವಿಗ್ರಹ ಕೊಳ್ಳುವಾಗ ಕೊಂಚವಾದರೂ ಪರಿಸರದ ಬಗ್ಗೆ ನಾವು ಕಾಳಜಿ ವಹಿಸಲೇಬೇಕು. ಏಕೆಂದರೆ ಗಣೇಶ ವಿಸರ್ಜನೆ ಬಳಿಕ ವಿಗ್ರಹದಲ್ಲಿರುವ ಹಾನಿಕಾರಕ ರಾಸಾಯನಿಕಗಳು ನೀರಿನಲ್ಲಿ ಸೇರಿಕೊಳ್ಳುತ್ತವೆ. ಇದು ಪರಿಸರದ ಮೇಲೆ ಭೀಕರ ಪರಿಣಾಮ ಬೀರುತ್ತದೆ. ಕುಟುಂಬ ಪರಿಸರ ಪ್ರೇಮಿಯಾಗಿ ಹಬ್ಬವನ್ನು ಆಚರಿಸುವ ಪದ್ಧತಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ.
ಪಾಲಿಸಬೇಕಾದ ನಿಯಮಗಳೇನು?
ಗಣೇಶ ಇರಿಸುವ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಜೊತೆಗೆ ಗಣೇಶ ಮೂರ್ತಿ ವಿಸರ್ಜನ ಆಗುವವರೆಗೆ ಸ್ಥಳದಲ್ಲಿ 24 ಗಂಟೆ ಒಬ್ಬ ಸ್ವಯಂಸೇವಕ ಇರುವಂತೆ ನೋಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ಆಯಾ ವ್ಯಾಪ್ತಿಯ ಪೊಲೀಸ್ ಇಲಾಖೆ ತೀವ್ರ ನಿಗಾ ಇರಿಸುತ್ತದೆ.
ಏಕ ಗವಾಕ್ಷಿ ಮೂಲಕ ಅನುಮತಿ
ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಮಿತಿಯವರು ಪೊಲೀಸ್ ಇಲಾಖೆ, ಆಯಾ ಸ್ಥಳೀಯ ಸಂಸ್ಥೆಗಳು, ಬೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಸಮಿತಿಯವರ ಓಡಾಟ ತಪ್ಪಿಸಲು ಹಲವು ವರ್ಷಗಳಿಂದ ಏಕ ಗವಾಕ್ಷಿ ವ್ಯವಸ್ಥೆ ಮಾಡಿ, ಎಲ್ಲ ಇಲಾಖೆಗಳ ಅನುಮತಿ ಒಂದೇ ಕಡೆ ಸಿಗುವಂತೆ ಮಾಡಲಾಗುತ್ತಿದೆ. ಈ ಬಾರಿ ಇನ್ನೂ ಹಲವು ತಾಲೂಕುಗಳಲ್ಲಿ ಏಕ ಗವಾಕ್ಷಿವ್ಯವಸ್ಥೆ ಆರಂಭಿಸಿಲ್ಲ.
ಈ ವರ್ಷ ಗಣೇಶ ಚತುರ್ಥಿ ಹಿನ್ನೆಲೆ ಇತ್ತೀಚೆಗೆ ಹಲವು ಕಡೆ ಶಾಂತಿ ಸೌಹಾರ್ದ ಸಭೆಗಳು ಸಹ ನಡೆಯುತ್ತಿವೆ, ಶೀಘ್ರವೇ ಗಣೇಶೋತ್ಸವ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications