ಚಿಕ್ಕಬಳ್ಳಾಪುರ ಸ್ಫೋಟ: ಕ್ರಷರ್ ಮಾಲೀಕರ ಬಂಧನಕ್ಕೆ ಸಚಿವರ ಆದೇಶ
ಚಿಕ್ಕಬಳ್ಳಾಪುರ, ಫೆಬ್ರವರಿ.23: ಚಿಕ್ಕಬಳ್ಳಾಪುರದಲ್ಲಿ ಯಾವುದೇ ರೀತಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ಜಿಲೆಟಿನ್ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಅವರು ಮಾತನಾಡಿದ್ದಾರೆ.
ಕಳೆದ ಕೆಲವೇ ಕೆಲವು ದಿನಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭ್ರಮರವಾನಿಸಿ ಕ್ರಷರ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ನಿಯಮ ಉಲ್ಲಂಘಿಸಿರುವುದು ಕಂಡು ಬಂದ ಹಿನ್ನೆಲೆ ಅದನ್ನು ಬಂದ್ ಮಾಡಿಸಲಾಗಿತ್ತು. ಅದಾಗಿಯೂ ಇಂಥದೊಂದು ಘಟನೆ ನಡೆಸಿರುವುದು ಬೇಸರ ತಂದಿದೆ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಮಂಡಿಕಲ್ ಹೋಬಳಿಯ ಹಿರೇನಾಗವಲ್ಲಿ ಗ್ರಾಮದಲ್ಲಿ ಸಂಭವಿಸಿರುವ ಜಿಲೆಟಿನ್ ಸ್ಫೋಟದಿಂದಾಗಿ ಆರು ಮಂದಿ ಮೃತಪಟ್ಟಿದ್ದಾರೆ. ಜಿಲೆಟಿನ್ ಸ್ಫೋಟದಲ್ಲಿ ಮೃತಪಟ್ಟವರನ್ನು ಕ್ರಷರ್ ಇಂಜಿನಿಯರ್ ಉಮಾಕಾಂತ್, ಕಂಪ್ಯೂಟರ್ ಆಪರೇಟರ್ ಆರ್. ಗಂಗಾಧರ್, ವೇಯರ್ ಆಗಿರುವ ಮುರುಳಿ, ವಾಚ್ ಮೆನ್ ಮಹೇಶ್ ಹಾಗೂ ಸ್ಥಳೀಯ ರಾಮು ಎಂದು ಗುರುತಿಸಲಾಗಿದೆ.

ಆರೋಪಿಗಳ ಬಂಧನಕ್ಕೆ ತಂಡ ರಚನೆ:
ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಮರವಾಸಿನಿ ಕ್ರಷರ್ ಮಾಲೀಕ ಹಾಗೂ ಸ್ಥಳೀಯ ಬಿಜೆಪಿ ಮುಖಂಡರೂ ಆಗಿರುವ ನಾಗರಾಜು, ಆಂಧ್ರ ಪ್ರದೇಶ ಮೂಲದ ಶಿವಾರೆಡ್ಡಿ ಹಾಗೂ ರಾಘವೇಂದ್ರ ರೆಡ್ಡಿ ಎಂದು ತಿಳಿದು ಬಂದಿದೆ. ಭ್ರಮರವಾಸಿನಿ ಕ್ರಷರ್ ಕಂಪನಿಯ ಮೂವರು ಮಾಲೀಕರ ಬಂಧನಕ್ಕೆ ಸಂಬಂಧಿಸಿದಂತೆ ತಂಡ ರಚಿಸಲಾಗಿದ್ದು, ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಅಕ್ರಮ ಜಿಲೆಟಿನ್ ಹೊತ್ತು ತರುವ ಪ್ರಯತ್ನ:
ಭ್ರಮರವಾಸಿನಿ ಕ್ರಷನ್ ನಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಇರುವ ಅರಣ್ಯದಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಮತ್ತು ಎಲೆಕ್ಟ್ರಿಕ್ ಡಿಟೋನೇಟರ್ಸ್ ಅನ್ನು ಹೊತ್ತು ತರಲು ಒಬ್ಬರು ಬೈಕ್ ನಲ್ಲಿ ಮುಂದೆ ಸಾಗಿದರೆ ನಾಲ್ವರು ಟಾಟಾ ಏಸ್ ನಲ್ಲಿ ತೆರಳಿದ್ದರು. ಈ ವೇಳೆ ಮೊಬೈಲ್ ಆನ್ ಮಾಡಿರುವ ಸಂದರ್ಭದಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸಿರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.












Click it and Unblock the Notifications