ಒಂದು ರೂ ಲಂಚ ಪಡೆದಿರುವುದು ಬಹಿರಂಗಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ- ಸುಧಾಕರ್
ಚಿಕ್ಕಬಳ್ಳಾಪುರ, ಏಪ್ರಿಲ್ 17: ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದ ಜನರ ಸುನಾಮಿಯೇ ನಗರದಲ್ಲಿ ಕೇಂದ್ರೀಕೃತವಾಗಿದ್ದು, ಈ ಜನ ಸುನಾಮಿಯಲ್ಲಿ ಪ್ರತಿಸ್ಪರ್ಧಿಗಳು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಡಾ.ಕೆ. ಸುಧಾಕರ್ ಹೇಳಿದ್ದಾರೆ.
ನಗರದ ವಾಪಸಂದ್ರದಲ್ಲಿರುವ ರಂಗನಾಥಸ್ವಾಮಿ ದೇವಾಲಯದ ಮುಂಭಾಗದಿಂದ ಶಿಡ್ಲಘಟ್ಟ ವೃತ್ತದವರೆಗೂ ರೋಡ್ ಶೋ ನಡೆಸಿದ ಡಾ.ಕೆ. ಸುಧಾಕರ್, 2019ರ ನ.17ರಂದು ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಇದೇ ಜಾಗದಲ್ಲಿ ಹಲವು ಭರವಸೆಗಳನ್ನು ನೀಡಿದ್ದೆ, ಈಗ ಎಲ್ಲ ಭರವಸೆಗಳನ್ನು ಈಡೇರಿಸಿ ನಿಮ್ಮ ಮುಂದೆ ಬಂದಿರುವುದಾಗಿ ಮತದಾರರಿಗೆ ಹೇಳಿದ್ದಾರೆ.

ಕ್ಷೇತ್ರದ ಅಭ್ಯುದಯಕ್ಕೆ ಟೊಂಕ ಕಟ್ಟಿ ನಿಂತಿದ್ದೇನೆ, 2023ರ ಮೇ13ರ ದಿಗ್ವಿಜಯದ ದಿಕ್ಸೂಚಿ ಇಂದು ಕಾಣಿಸುತ್ತಿದೆ . ನಾನು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು 15 ವರ್ಷಗಳು ಕಳೆದಿದೆ. ಈ 15 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಒಂದು ರೂಪಾಯಿ ಲಂಚ ಪಡೆದಿರುವುದು ಯಾರಾದರೂ ಬಹಿರಂಗಪಡಿಸಿದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಸಚಿವ ಸುಧಾಕರ್ ಸವಾಲು ಹಾಕಿದ್ದಾರೆ.
ಕಳೆದ ಮೂರು ಬಾರಿ ಸ್ಪರ್ಧಿಸಿದಾಗಲೂ ಗೆಲುವಿನ ಅಂತರ ಹೆಚ್ಚುತ್ತಲೇ ಇದೆ. ಈ ಬಾರಿ ವಿಜಯದ ಅಂತರ 50 ಸಾವಿರಕ್ಕೂ ಹೆಚ್ಚು ಇರುತ್ತದೆ. ಇದು ಗರ್ವದಿಂದ ಹೇಳುವ ಮಾತಲ್ಲ, ಬದಲಿಗೆ ನಿಮ್ಮ ಪ್ರೀತಿ ನೋಡಿ ಹೇಳುತ್ತಿದ್ದೇನೆ. ನಾನು ಸುನಾಮಿಯಾಗಲು ಬಂದಿಲ್ಲ, ನನ್ನ ಜನರಿಗೆ ಸಂಜೀವಿನಿಯಾಗಲು ಬಂದಿದ್ದೇನೆ. ನಿಮಗೆ ಅಭಿವೃದ್ಧಿಯ ಮೆಟ್ಟಿಲಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
ಜೆಡಿಎಸ್ ಸುಧಾಕರ್ ತಿರುಗೇಟು
ಕಳೆದ ಹತ್ತು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಏನು ಎಂದು ಜೆಡಿಎಸ್ ಪ್ರಶ್ನಿಸುತ್ತಿದೆ, ರೈತರ, ಬಡವರ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ಹೋಗಿ ಕ್ಷೇತ್ರದ ರೈತರನ್ನು ಕೇಳಿದರೆ ತಿಳಿಯಲಿದೆ ರೈತರು ಎಷ್ಟು ಸಂತೋಷವಾಗಿದ್ದಾರೆ ಎಂಬುದು. ಈ ಹಿಂದೆ ರೈತರು ಕೊಳವೆ ಬಾವಿ ಕೊರೆಸಿ, ಸಾಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು, ಆದರೆ ಎಚ್ಎನ್ ವ್ಯಾಲಿ ಮೂಲಕ ಕೆರೆಗಳಿಗೆ ನೀರು ತುಂಬಿಸಿದ ಪರಿಣಾಮ ಇಂದು ರತರು ಬಂಗಾರ ಬೆಳೆಯುತ್ತಿದ್ದಾರೆ, ಹೂವು, ತರಕಾರಿ, ಹಣ್ಣು ಬೆಳೆಯುತ್ತಿದ್ದಾರೆ. ರೈತರು ಬೆಳೆಯುವ ಉತ್ಪನ್ನಗಳಿಗೆ ಅಗತ್ಯವಿರುವ ಮಾರುಕಟ್ಟೆ ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆಯನ್ನು 100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಅಹಿಂದ ಉದ್ಧಾರ ಮಾಡಿಲ್ಲ
ಕಾಂಗ್ರೆಸ್ನವರು ಅಹಿಂದ ಜಪ ಮಾಡುತ್ತಿದ್ದಾರೆ, ಆದರೆ ಯಾರನ್ನೂ ಉದ್ಧಾರ ಮಾಡಿಲ್ಲ. ಅನೇಕ ವರ್ಷಗಳಿಂದ ಪರಿಶಿಷ್ಟ ಪಂಗಡದವರು ಮೀಸಲಾತಿ ಹೆಚ್ಚಳ ಕೇಳಿದರೆ ನೀಡಲಿಲ್ಲ. ಬಿಜೆಪಿ ಸರ್ಕಾರ ಶೇ.3 ಇದ್ದ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿದೆ. ಪರಿಶಿಷ್ಟ ಜಾತಿಯವರಿಗೆ ಶೇ.15 ರಿಂದ ಶೇ.17ಕ್ಕೆ ಮೀಸಲಾತಿ ಏರಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ, ಸಂವಿಧಾನ ತಿದ್ದುಪಡಿ, ಮೀಸಲಾತಿ ರದ್ದು ಮಾಡಲಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಕಳೆದ 9 ವರ್ಷದಿಂದ ಮೋದಿಯವರು ಪ್ರಧಾನಿಯಾಗಿದ್ದಾರೆ, ಸಂವಿಧಾನ ತಿದ್ದುಪಡಿ ಮಾಡಿದ್ದಾರಾ, ಇಲ್ಲವೇ ಮೀಸಲಾತಿ ಕಡಿಮೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
2ಎ ಮೀಸಲಾತಿಯಲ್ಲಿದ್ದ ಬಲಿಜ ಸಮುದಾಯವನ್ನು ಕಿತ್ತುಹಾಕಿದ ಖ್ಯಾತಿ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಆಗಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೆ ಸಲ್ಲುತ್ತದೆ. ಇಂದು ಯಾವ ಮುಖ ಇಟ್ಟುಕೊಂಡು ಮತ ಕೇಳಲು ಕಾಂಗ್ರೆಸ್ ಬರುತ್ತಿದೆ. ಯಡಿಯೂರಪ್ಪ ಅವರು ಬಲಿಜ ಸಮುದಾಯದ ಶಿಕ್ಷಣಕ್ಕೆ 2ಎ ಮೀಸಲಾತಿ ನೀಡಿದ್ದಾರೆ. ಈ ಸಮುದಾಯದ ಉದ್ಯೋಗಕ್ಕೆ 2ಸಿ ಮೀಸಲಾತಿ ನೀಡಿ, ಶೇ.2ರಷ್ಟು ಹೆಚ್ಚಿಸಲಾಗಿದೆ ಎಂದರು.












Click it and Unblock the Notifications