ಕ್ಲೀನ್ ಅಂಡ್ ಗ್ರೀನ್ ಚಿಕ್ಕಬಳ್ಳಾಪುರ ಅಭಿಯಾನ: ಸಾರ್ವಜನಿಕರಿಗೆ ಡಿಸಿ ಮಹತ್ವದ ಸೂಚನೆ!
ಚಿಕ್ಕಬಳ್ಳಾಪುರ, ಜುಲೈ 12: ಚಿಕ್ಕಬಳ್ಳಾಪುರ ವಿಜನ್ನ ಗ್ರೀನ್ ಅಂಡ್ ಕ್ಲೀನ್ ಪರಿಕಲ್ಪನೆಯ ಅಡಿ ಜಿಲ್ಲೆಯ ಎಲ್ಲ ನಗರಗಳಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರವೀಂದ್ರ ಅವರು ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಬಿ.ಬಿ ರಸ್ತೆಯಲ್ಲಿನ ಇಕ್ಕೆಲಗಳಲ್ಲಿ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸುವ ಮೂಲಕ ಗ್ರೀನ್ ಅಂಡ್ ಕ್ಲೀನ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ರವೀಂದ್ರ ಚಾಲನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದ ಅವರು, ಸರ್ಕಾರದ ವ್ಯವಸ್ಥೆಯಡಿ ಲಭ್ಯವಿರುವ ಮಾನವ ಸಂಪನ್ಮೂಲ ಹಾಗೂ ಯಾಂತ್ರಿಕ ಸವಲತ್ತನ್ನು ಬಳಸಿಕೊಂಡು ಜಿಲ್ಲೆಯಾದ್ಯಂತ ನಗರಗಳಲ್ಲಿ ಪ್ರಮುಖ ರಸ್ತೆಗಳನ್ನು ಗುರುತಿಸಿ 2 ಕಿಲೋ ಮೀಟರ್ ಉದ್ದದ ರಸ್ತೆಯನ್ನು ಸ್ವಚ್ಚತೆಗೊಳಿಸಲಾಗಿದೆ. ಇದೇ ರೀತಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿನ ರಸ್ತೆಗಳನ್ನು ಸ್ವಚ್ಛತೆಯನ್ನು ಮಾಡಲಾಗಿದೆ ಈ ಕಾರ್ಯ ಹೀಗೆ ಮುಂದುವರಿಯಲಿದೆ ಎಂದರು.
ಚರಂಡಿಗಳನ್ನು ಕಸದ ಬುಟ್ಟಿ ಮಾಡಬೇಡಿ
ನಗರ, ಗ್ರಾಮಗಳ ಸ್ಥಳೀಯಾಡಳಿತ ಸಂಸ್ಥೆಗಳ ತ್ಯಾಜ್ಯ ಸಂಗ್ರಹಣೆ ವಾಹನಗಳು ಬಂದಾಗ ತ್ಯಾಜ್ಯವನ್ನು ನೀಡಬೇಕು, ಯಾವುದೇ ಕಾರಣಕ್ಕೂ ನೀರು ಹೋಗಲಿಕ್ಕೆ ನಿರ್ಮಿಸಿರುವ ಚರಂಡಿಗಳಗೆ ಎಸೆದು ಕಸದ ಬುಟ್ಟಿಯಾಗಿಸಬಾರದು ಇದರಿಂದ ವಾತಾವರಣ ಮಲಿನಗೊಂಡು ರೋಗ ರುಜಿನಗಳಿಗೆ ಕಾರಣವಾಗುತ್ತದೆ. ಜೊತೆಗೆ ಮಳೆ ನೀರು ಮುಂದೆ ಸಾಗದೇ ರಸ್ತೆಗಳಿಗೆ ನುಗ್ಗಿ ಅಪಘಾತ ಉಂಟಾಗುವ ಸಾಧ್ಯತೆಗಳು ಇರುತ್ತವೆ ಎಂದರು.
ಕ್ಲೀನ್ ಅಂಡ್ ಗ್ರೀನ್ ಚಿಕ್ಕಬಳ್ಳಾಪುರಕ್ಕೆ ಸಾರ್ವಜನಿಕರ ಸಹಕಾರ ಅತೀ ಮುಖ್ಯವಾಗಿದೆ. ಪ್ಲಾಸ್ಟಿಕ್ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ. ತಮ್ಮ ಮನೆಯಲ್ಲಿ ಇರುವ ಪ್ಲಾಸ್ಟಿಕ್ಗಳನ್ನು ಕಸದ ಸ್ವಚ್ಛತಾ ವಾಹನಗಳಿಗೆ ನೀಡುವಂತೆ ಮನವಿ ಮಾಡಿದರು. ಈ ತಿಂಗಳಲ್ಲಿ 40 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಗುರಿ ಹೊಂದಿದ್ದೇವೆ ಎಂದರು.

ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವಾಗ ಹಾಗೂ ಹಳೆ ಕಟ್ಟಡಗಳನ್ನು ನಾಶ ಮಾಡುವಾಗ ಅಥವಾ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳುವಾಗ ಜನಿತವಾಗುವ ತ್ಯಾಜ್ಯವನ್ನು ನಗರದ ಹೊರವಲಯಗಳಲ್ಲಿ ಬಿಸಾಕುವ ಘಟನೆಗಳು ಅಲ್ಲಲ್ಲಿ ಕಂಡು ಬರುತ್ತವೆ. ಇಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ನಿಯಮಗಳ ರೀತಿ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ನಗರಸಭೆಯ ಪೌರಾಯುಕ್ತರಾದ ಪಂಪಾಶ್ರೀ, ಇಂಜಿನಿಯರ್ ಉಮಾಕಾಂತ್, ಪೌರ ಕಾರ್ಮಿಕರು ಹಾಗೂ ಚಿಕ್ಕಬಳ್ಳಾಪುರ ಸಾರ್ವಜನಿಕರು ಹಾಜರಿದ್ದರು.











Click it and Unblock the Notifications