ಚಿಂತಾಮಣಿ ದೇವಾಲಯ ವಿಷ ಪ್ರಕರಣ: ಮೂವರು ಮಹಿಳೆಯರ ಬಂಧನ
ಚಿಕ್ಕಬಳ್ಳಾಪುರ, ಜನವರಿ 29: ಚಿಂತಾಮಣಿ ಗಂಗಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಬಿ.ದಯಾನಂದ ಹೇಳಿದರು.
ಚಿಂತಾಮಣಿಯ ಗಂಗಮ್ಮ ದೇವಿ ದೇವಾಲಯ ಪ್ರಸಾದಕ್ಕೆ ವಿಷ ಬೆರೆಸಿ ಇಬ್ಬರು ಸಾವನ್ನಪ್ಪಿದ ಪ್ರಕರಣದ ಬಗ್ಗೆ ಅವರು ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದರು.
ಗಂಗಮ್ಮ ದೇವಾಲಯದ ವಿಷ ಪ್ರಸಾದ ದುರಂತ: ದ್ವೇಷ, ಅನೈತಿಕ ಸಂಬಂಧವೇ ಕಾರಣ?
ಪ್ರಸಾದಕ್ಕೆ ವಿಷ ಬೆರೆತಿದ್ದು ಆಕಸ್ಮಿಕ ಎಂದುಕೊಂಡಿದ್ದೆವು ಆದರೆ ಉದ್ದೇಶಪೂರ್ವಕವಾಗಿ ವಿಷ ಬೆರೆಸಲಾಗಿದೆ ಎಂಬುದು ತನಿಖೆ ನಂತರ ಗೊತ್ತಾಗಿದೆ. ಪ್ರಕರಣವನ್ನು ಬದಲಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪ್ರಕರಣ ಸಂಬಂಧ ಸಾಲೀಪೇಟಿ ಲಕ್ಷ್ಮಿ, ಅಮರಾವತಿ ಮತ್ತು ಚನ್ನಕೇಶವಪುರದ ಪಾರ್ವತಮ್ಮ ಎಂಬುವರನ್ನು ಬಂಧಿಸಲಾಗಿದೆ ಎಂದು ಐಜಿಪಿ ಅವರು ಮಾಹಿತಿ ನೀಡಿದರು.
ಗೌರಿ ಎಂಬುವರನ್ನು ಕೊಲೆ ಮಾಡುವ ಸಲುವಾಗಿ ಪ್ರಸಾದಕ್ಕೆ ವಿಷ ಬೆರೆಸಲಾಗಿತ್ತು. ಆದರೆ ಅವರ ಬದಲಿಗೆ ಅವರ ತಾಯಿ ಮತ್ತು ಮತ್ತೊಬ್ಬ ಮಹಿಳೆ ಮೃತರಾಗಿದ್ದಾರೆ ಅಲ್ಲದೆ ಹಲವರು ಅಸ್ಥವ್ಯಸ್ಥರಾದರು ಎಂದು ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.
ಘಟನೆಯ ಬಗ್ಗೆ ತನಿಖೆಯನ್ನು ಗೌರಿ ಅವರ ಹೇಳಿಕೆ ಆಧಾರದಲ್ಲಿಯೇ ಪ್ರಾರಂಭಿಸಲಾಗಿತ್ತು. ಗೌರಿ ಅವರ ಪತಿಗೂ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಲಕ್ಷ್ಮಿ ಎಂಬುವರಿಗೆ ಅಕ್ರಮ ಸಂಬಂಧ ಇತ್ತು. ಇದು ಗೌರಿ ಅವರಿಗೆ ತಿಳಿದು ಕೆಲವು ಬಾರಿ ಗಲಾಟೆಗಳು ಆಗಿದ್ದವು. ಅಕ್ರಮ ಸಂಬಂಧಕ್ಕೆ ಅಡ್ಡ ಬಂದಿದ್ದ ಗೌರಿಯನ್ನು ಕೊಲ್ಲಲು ಹೀಗೆ ಪ್ರಸಾದದಲ್ಲಿ ವಿಷ ಬೆರೆಸುವ ಯೋಜನೆ ರೂಪಿಸಲಾಗಿತ್ತು.
ಗಂಗಮ್ಮ ದೇವಿ ಪ್ರಸಾದ ದುರಂತ, ಮೃತರ ಸಂಖ್ಯೆ 2ಕ್ಕೆ ಏರಿಕೆ
ಲಕ್ಷ್ಮಿಯೇ ಈ ಪ್ರಕರಣದ ಪ್ರಮುಖ ಆರೋಪಿ ಆಗಿದ್ದು, ಗೌರಿಯನ್ನು ಕೊಲೆ ಮಾಡಲು ಈ ಮೊದಲು ಸಹ ಆಕೆ ಯತ್ನಿಸಿದ್ದರು. ಬುರ್ಖಾ ಧರಿಸಿ ಗೌರಿಗೆ ತಿನ್ನುವ ಪದಾರ್ಥ ನೀಡಿದ್ದರು ಆದರೆ ಆಗ ಅಸ್ವಸ್ಥರಾಗಿ ಗೌರಿ ಆಸ್ಪತ್ರೆ ಸೇರಿದ್ದರು. ನಂತರ ಮತ್ತೊಮ್ಮೆ ಬೂಂದಿಯಲ್ಲಿ ವಿಷ ಬೆರೆಸಿ ಕೊಟ್ಟಿದ್ದರು ಆಗಲೂ ಸಹ ಗೌರಿ ಮತ್ತು ಕುಟುಂಬದವರು ಆಸ್ಪತ್ರೆ ಸೇರಿದ್ದರೇ ವಿನಃ ಇನ್ನೇನೂ ಆಗಿರಲಿಲ್ಲ.
ಆದರೆ ಈ ಬಾರಿ ಗೌರಿಯನ್ನು ಕೊಲ್ಲಲೇಬೇಕೆಂದು ಅಕ್ಕಸಾಲಿಗರು ಬಳಸುವ ವಿಷಕಾರಿ ರಾಸಾಯನಿಕವನ್ನು ಕೇಸರಿಬಾತ್ಗೆ ಹಾಕಿ ಅದನ್ನು ಗೌರಿಗೆ ತಿನ್ನಿಸುವ ಯತ್ನ ಮಾಡಿದ್ದರು. ಈ ಬಾರಿ ಗೌರಿಗೆ ಪ್ರಸಾದ ನೀಡಲು ಲಕ್ಷ್ಮಿಯ ಮನೆಕೆಸಲದಾಕೆ ಅಮರಾವತಿಯನ್ನು ಬಳಸಿಕೊಂಡಿದ್ದಳು ಲಕ್ಷ್ಮಿ.
ಪ್ರಸಾದ ಸೇವಿಸಿ ಸಾವು ತಡೆಗೆ ಸರ್ಕಾರದಿಂದ ಮಾರ್ಗಸೂಚಿ: ಕುಮಾರಸ್ವಾಮಿ
ಅಮರಾವತಿಗೆ ದೇವಸ್ಥಾನದ ಬಳಿ ಗೌರಿಯನ್ನು ಹೂವು ಮಾರುವ ಪಾರ್ವತಮ್ಮ ತೋರಿಸಿದ್ದರು. ಗೌರಿಗೆ ಕೊಟ್ಟ ವಿಷಭರಿತ ಕೇಸರಿಬಾತನ್ನು ಗೌರಿಯು ತನ್ನ ತಾಯಿಗೆ ಕೊಟ್ಟಿದ್ದಾರೆ. ಇದರಿಂದ ಅವರ ತಾಯಿ ಮೃತಪಟ್ಟಿದ್ದಾರೆ. ಅಮರಾವತಿಯು ವಿಷ ಬೆರೆತ ಹಾಗೂ ವಿಷರಹಿತ ಕೇಸರಿಬಾತ್ ಡಬ್ಬಿಗಳನ್ನು ಅದಲುಬದಲು ಮಾಡಿದ್ದರಿಂದ ಬೇರೆ ಕೆಲವು ಭಕ್ತಾದಿಗಳು ಸಹ ಪ್ರಸಾದ ತಿಂದು ಅಸ್ವಸ್ಥರಾಗಿದ್ದಾರೆ. ಮಹಿಳೆ ಒಬ್ಬರು ಮೃತರೂ ಆಗಿದ್ದಾರೆ.
ಪ್ರಸ್ತುತ ಲಕ್ಷ್ಮಿ, ಅಮರಾವತಿ ಮತ್ತು ಹೂವು ಮಾರುವ ಪಾರ್ವತಮ್ಮ ಅವರನ್ನು ಬಂಧಿಸಲಾಗಿದೆ. ಕೊಲೆ ಯತ್ನದ ಹಿಂದೆ ಗೌರಿಯ ಪತಿ ಮೋಹನ್ ಪಾತ್ರ ಇದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.