Get Updates
Get notified of breaking news, exclusive insights, and must-see stories!

Chikkaballapur: ಎತ್ತಿನಹೊಳೆ ಯೋಜನೆ ಅಡಿಗಲ್ಲು ಕಾರ್ಯಕ್ರಮಕ್ಕೆ ದಶಕ ಪೂರ್ಣ ಹರಿಯಲಿಲ್ಲ ಹನಿ ನೀರು

ಚಿಕ್ಕಬಳ್ಳಾಪುರ ಮಾರ್ಚ್ 6: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವುದೇ ಶಾಶ್ವತ ನದಿ ನಾಳೆಗಲಿಲ್ಲದ ಬಯಲು ಸೀಮೆ ಪ್ರದೇಶವಾಗಿದೆ. ಈ ಭಾಗದ ಜನರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಅಂದಿನ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಎತ್ತಿನಹೊಳೆ ಯೋಜನೆಗೆ ಅಡಿಗಲ್ಲು ಹಾಕಿ ಬರೋಬ್ಬರಿ 10 ವರ್ಷಗಳು ಪೂರ್ಣಗೊಂಡಿದೆ. ಆದರೆ ಇಂದಿಗೂ ಒಂದು ಹನಿ ನೀರು ಸಹ ಹೊಳೆಯಲ್ಲಿ ಹರಿಯಲಿಲ್ಲ ಎಂಬ ದುಃಖ ಹಾಗೂ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಹೌದು ಅದು 2014ರ ಮಾ.3ರಂದು ಸೋಮವಾರ ಬೃಹತ್ ಜನಸ್ತೋಮದ ನಡುವೆ ನಗರದ ಹೊರವಲಯದಲ್ಲಿರುವ ಬಿಜಿಎಸ್ ವರ್ಲ್ಡ್ ಶಾಲೆಯ ಆವರಣದಲ್ಲಿ ಮುಖ್ಯಮಂತ್ರಿ -ಸಿದ್ದರಾಮಯ್ಯ ಎತ್ತಿನಹೊಳೆ ನೀರಾವರಿ -ಯೋಜನೆಗೆ ಅಡಿಗಲ್ಲು ಹಾಕುತ್ತಿದ್ದರೆ, ಬಯಲು ಸೀಮೆಯ ಜಿಲ್ಲೆಗಳ ರೈತರು ಮತ್ತು ನಾಗರಿಕರ ಮನಸ್ಸಿನಲ್ಲಿ ನವೋಲ್ಲಾಸ, ಪುಳಕ. ಮಹತ್ವದ ಯೋಜನೆಯೊಂದು ಬಯಲು ಸೀಮೆಯ ಜನತೆಗೆ ಅನುಷ್ಠಾನಕ್ಕೆ ಬರುತ್ತಿರುವ ಖುಷಿ ಕಂಡು ಬಂದಿತ್ತು.

Chikkaballapur Ettinhola Yojane not a drop of water has flowed

ಮನೆಗೆ ಬಂದವರಿಗೆ ನೀರು, ಊಟ ಕೊಟ್ಟು ಉಪಚರಿಸುವುದು ನಮ್ಮ ಭಾರತೀಯ ಸಂಸ್ಕೃತಿ. ಹೀಗಿರುವಾಗ ಯೋಗ್ಯವಲ್ಲದ ನೀರನ್ನು ಕುಡಿದು ಸಂಕಷ್ಟಕ್ಕೆ ಸಿಲುಕಿರುವವರ ದಾಹವನ್ನು ನೀಗಿಸಲು ಮುಂದಾದಾಗ ವಿರೋಧಿಸುವುದು ಸರಿಯಲ್ಲ , ಕೆಲವರು ದಾರಿ ತಪ್ಪಿಸುವ ಸಲುವಾಗಿಯೇ ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧ ಸುಳ್ಳು ಮಾತುಗಳನ್ನಾಡುತ್ತಿದ್ದಾರೆ. ಇದನ್ನು ಯಾರೂ ನಂಬುವ ಅವಶ್ಯಕತೆಯಿಲ್ಲ. ಜನರಿಗೆ ಸುಳ್ಳು ಭರವಸೆಯನ್ನು ನೀಡುವ ಸಲುವಾಗಿ 13 ಸಾವಿರ ಕೋಟಿ ಹುಣಸೇ ಹಣ್ಣು ತೊಳೆದಂತೆ ವ್ಯರ್ಥ ಮಾಡಲು ನಮಗೆ ತಲೆ ಕೆಟ್ಟಿಲ್ಲ ಎಂದು 2014ರ ಮಾರ್ಚ್.3ರಂದು ನಡೆದ ಕಾರ್ಯಕ್ರಮದಲ್ಲಿ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸುತ್ತಿದ್ದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹೇಳಿದ್ದ ಮಾತುಗಳಿವು.

ಹೌದು ಎತ್ತಿನಹೊಳೆ ಯೋಜನೆ ಜಾರಿಯಿಂದ ಯಾವುದೇ ಭಾಗಕ್ಕೆ ಧಕ್ಕೆಯಾಗುವುದಿಲ್ಲ. ಅಲ್ಲದೇ ನೂರಕ್ಕೆ ನೂರರಷ್ಟು 24 ಟಿಎಂಸಿ ನೀರು ಈ ಯೋಜನೆಯಿಂದ ಸಿಕ್ಕೇ ಸಿಗುತ್ತದೆ. ಇದನ್ನು ಖ್ಯಾತ ಭಾರತೀಯ ವಿಜ್ಞಾನ ಸಂಸ್ಥೆಯ ಜಲತಜ್ಞರಿಂದ ವೈಜ್ಞಾನಿಕವಾಗಿ ಖಾತ್ರಿ ಪಡಿಸಿಕೊಳ್ಳಲಾಗಿದೆ ಎಂದು ಅಂದಿನ ಎತ್ತಿನಹೊಳೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಯ ಕುರಿತು ನೀಡಿದ್ದ ಸ್ಪಷ್ಟಣೆಯ ಮಾತುಗಳನ್ನು ಮತ್ತೊಮ್ಮೆ ನೆನಪಿಸಿಕೊಂಡಾಗ ಯೋಜನೆಯ ವಿಳಂಭಕ್ಕೆ ಕಾರಣವಾದರೂ ಏನು ಎಂಬ ಗೊಂದಲ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಅಂದಿನ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವರುಗಳಾದ ಚಿಕ್ಕಬಳ್ಳಾಪುರ ಸಂಸದ ಎಂ. ವಿರಪ್ಪ ಮೊಯಿಲಿ, ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಹಲವು ಸಚಿವರು, ಬಯಲು ಸೀಮೆಯ ಜನಪ್ರತಿನಿದಿಗಳು, ರೈತ ಮುಖಂಡರು, ಸಾವಿರಾರು ಜನಸಾಮಾನ್ಯರು ಅಂದು ನಡೆದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಪಾಲ್ಗೊಂಡಿದ್ದರು.

ಅಂದು ವಿರೋಧ ವ್ಯಕ್ತವಾಗಿತ್ತು:

ರಾಜ್ಯದ ಪ್ರಮುಖ ನೀರಾವರಿ ಯೋಜನೆ ಎನಿಸಿದ್ದ ಎತ್ತಿನಹೊಳೆ ಯೋಜನೆಗೆ ಚಾಲನೆಯನ್ನು ನೀಡುವ ದಿನ ಎತ್ತಿನಹೊಳೆ ಯೋಜನೆಯ ಕಾಮಗಾರಿ ಪ್ರಾರಂಭ ಪ್ರಾರಂಭವಾಗಬೇಕಿದ್ದ ಕರಾವಳಿ ಭಾಗದಲ್ಲಿ ರೈತರು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದು ಅವೈಜ್ಞಾನಿಕ ಯೋಜನೆ, ಪರಮಶಿವಯ್ಯ ವರದಿಯನ್ನು ಜಾರಿಗೊಳಿಸಿ ಎಂದು ಆಗ್ರಹಿಸುತ್ತಿದ್ದ ಮುಖಂಡರನ್ನು ಅಂದು ಬೆಳಿಗ್ಗೆಯೆ ಪೊಲೀಸರು ಬಂಧಿಸುವ ಮೂಲಕ ಕಾರ್ಯಕ್ರಮಕ್ಕೆ ಯಾವುದೇ ಅಡಚಣೆಯಾಗದಂತೆ ಯೋಜನೆಗೆ ಅಡಿಗಲ್ಲು ಹಾಕುವ ಕಾರ್ಯಕ್ರಮವನ್ನು ನಿರ್ವಿಜ್ಞವಾಗಿ ನಡೆಸಲಾಗಿತ್ತು.

ಈ ಎಲ್ಲಾ ಪರ ವಿರೋಧಗಳ ನಡುವೆ ನಡೆದ ಶಂಕುಸ್ಥಾಪನೆಯು ಬಯಲು ಸೀಮೆಯ ಜನರಲ್ಲಿ ಸಂಭ್ರಮವನ್ನು ತಂದಿತ್ತು ಹಲವು ದಶಕಗಳಿಂದ ಬರದ ಹಣೆಪಟ್ಟಿಯನ್ನು ಹೊತ್ತ ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರಕ್ಕೆ 'ಎತ್ತಿನಹೊಳ' ಹಸಿರಾಗಿ ಕಂಡಿತ್ತು, ಈ ಭಾಗದ ಜನರ ನೀರಿನ ಬವಣೆ ಕೆಲವೇ ವರ್ಷಗಳಲ್ಲಿ ಹರಿಯಲಿದೆ ಎನ್ನುವ ಉತ್ಸಾಹದಲ್ಲಿ ಅಂದು ನಾಯಕರು ಭಾಷಣವನ್ನು ಮಾಡಿದ್ದರು.

ಆದರೆ ಯೋಜನೆಗೆ ಅಡಿಗಲ್ಲು ಹಾಕಿ ಬರೋಬ್ಬರಿ 10 ವರ್ಷಗಳು ಕಳೆದು ಹೋದರೂ ಇಂದಿಗೂ ಯೋಜನೆಯಡಿ ಈ ಜಿಲ್ಲೆಗಳಿಗೆ ಹನಿ ನೀರು ಸಹ ಬಂದಿಲ್ಲ, ಇದುವರೆಗೂ ಕಾಮಗಾರಿಗಾಗಿ ಪೈಪ್‌ಲೈನ್ ತೋಡುತ್ತಲೇ ಇದ್ದಾರೆ. ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಲೇ ಇವೆ. ಒಟ್ಟಾರೆ ಯೋಜನೆ 2024ರಲ್ಲೂ ಚಾಲ್ತಿಯಲ್ಲಿದೆ! ಯೋಜನೆಗೆ ವೇಗ ಸಿಗುವ ಯಾವ ಲಕ್ಷಣವೂ ಕಾಣಸಿಗುತ್ತಿಲ್ಲ.

ಯೋಜನೆಗಾಗಿ 2012 ರಲ್ಲಿ ಅಂದಾಜು ಪಟ್ಟಿ ಸಿದ್ದಪಡಿಸಿ ರೂಪಾಯಿ 8,323.50 ಕೋಟಿ ವೆಚ್ಚದ ಯೋಜನಾ ಅಂದಾಜಿಗೆ ಅನುಮೋದನೆ ನೀಡಲಾಗಿತ್ತು. 2014ರಲ್ಲಿ ಯೋಜನಾ ವೆಚ್ಚವನ್ನು 12,912.30 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಎತ್ತಿನಹೊಳೆ ಯೋಜನೆ ಕಾಮಗಾರಿಗಾಗಿ ಈಗ ಬರೋಬ್ಬರಿ 24,000 ಕೋಟಿಗೆ ಮುಟ್ಟಿದೆ.

ಎತ್ತಿನಹೊಳೆ ಯೋಜನೆಯ ಪಕ್ಷಿಮಾಭೀಮುಖವಾಗಿ ಹರಿಯುವ ಎತ್ತಿನಹೊಳೆ 24.01 ಟಿಎಂಸಿ ನೀರನ್ನು ತಿರುಗಿಸಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ 29 ತಾಲ್ಲೂಕುಗಳ 38 ಪಟ್ಟಣ ಪ್ರದೇಶ ವ್ಯಾಪ್ತಿಯ 6657 ಗ್ರಾಮಗಳ ಜನತೆಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ.

ಜಿಲ್ಲೆಗೆ ಎತ್ತಿನಹೊಳೆ ನೀರು ಪ್ರವೇಶಿಸಲಿರುವ ಹೆಬ್ಬಾಗಿಲೇ ಗೌರಿಬಿದನೂರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ 'ಎತ್ತಿನಹೊಳೆ ಯೋಜನೆಯ ಎರಡನೇ ಹಂತದ 260 ಕಿ. ಮಿ ಉದ್ದದ ಗುರುತ್ವ ಕಾಲುವ ಟಿ.ಜಿ. ಹಳ್ಳಿ-ರಾಮನಗರ ಫೀಡರ್. ಮಧುಗಿರಿ ಫೀಡರ್ ಹಾಗೂ ಗೌರಿಬಿದನೂರು ಫಿಡರ್ ಕಾಲುವೆ ಕಾಮಗರಿಗಳನ್ನು ಪೂರ್ಣಗೊಳಿಸಿ, ಮುಂದಿನ ವರ್ಷದ ಮುಂಗಾರು ಹಂಗಾಮಿನಲ್ಲಿ ನೀರು ಪೂರೈಕೆಗೆ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಿಸಿದ್ದರು. ಆದರೆ ಗೌರಿಬಿದನೂರು ಭಾಗದಲ್ಲಿ ಪೈಪ್ ಆಳವಡಿಸುವ ಕಾಮಗಾರಿಯಷ್ಟೇ ನಡೆಯುತ್ತಿದೆ.

ಶಾಸಕ ಕೆಎಚ್ ಪುಟ್ಟಸ್ವಾಮಿಗೌಡ 2024 ರ ಮುಕ್ತಾಯಕ್ಕೆ ಇಲ್ಲವೇ 2025ರ ಆರಂಭದ ವೇಳೆಗೆ ಗೌರಿಬಿದನೂರು ತಾಲೂಕಿಗೆ ಎತ್ತಿನಹೊಳೆ ನೀರು ಹರಿಯನಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ.

ಎತ್ತಿನಹೊಳೆ ಯೋಜನೆಯ ರೂವಾರಿ ಎಂದು ಹೇಳಿಕೊಳ್ಳುವ ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ 2026ಕ್ಕೆ ಜಿಲ್ಲೆಗೆ ಎತ್ತಿನಹೊಳೆ ನೀರು ಬರಲಿದೆ ಎಂದು ಹೇಳಿ ಕೊಳ್ಳುತ್ತಾ ಯೋಜನೆ ಅಡಿಗಲ್ಲು ಕಾರ್ಯಕ್ರಮ ನಡೆದಾಗಿನಿಂದ ಎದುರಾಗುತ್ತಿರುವ 3ನೇ ಲೋಕಸಭಾ ಚುನಾವಣೆಯಲ್ಲೂ ಇನ್ನು ಎರಡು ವರ್ಷದಲ್ಲಿ ನೀರು ಹರಿಯಲಿದೆ ಎನ್ನುವ ಭರವಸೆಯನ್ನೇ ನೀಡುತ್ತಿದ್ದಾರೆ.

ಚುನಾವಣೆ ಗಾಳ:

ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳ ಮಾತುಗಳಲ್ಲಿ ಎತ್ತಿನಹೊಳೆ ಜೋರಾಗಿಯೇ ಹರಿಯುತ್ತದೆ. ಲೋಕಸಭೆ, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗೆ ಎತ್ತಿನಹೊಳೆ ಯೋಜನೆಯು ಮತದಾರರನ್ನು ಓಲೈಕೆ ಮಾಡಿಕೊಳ್ಳಲು ಇದೊಂದು ಚುನಾವಣಾ ದಾಳವಾಗಿ ಬಳಕೆಯಾಗುತ್ತಿದೆ.

ಪ್ರತಿ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಗೆ ಆಗಮಿಸುವ ಆಡಳಿತ ಪಕ್ಷದ ವಿರೋಧ ಪಕ್ಷಗಳ ನಾಯಕರ ಮಾತುಗಳಲ್ಲಿ ಪದೇ ಪದೇ ಎತ್ತಿನಹೊಳೆ ಯೋಜನೆ ಇಣುಕುತ್ತಿದೆ. ಯೋಜನೆಯ ಕ್ರೆಡಿಟ್‌ಗಾಗಿ ನಾಯಕರ ನಡುವೆ ವಾಕ್ಸಮರಗಳು ತಾರಕಕ್ಕೇರುತ್ತದೆ.

ಈ ವರ್ಷ ಎತ್ತಿನಹೊಳೆ ನೀರು ಜಿಲ್ಲೆಗೆ ಹರಿಯುತ್ತದೆ ಎಂದು ರಾಜಕೀಯ ಪಕ್ಷಗಳ ಪ್ರತಿಯೊಬ್ಬ ನಾಯಕರು ಪ್ರತಿ ವರ್ಷವೂ ಸಿದ್ದ ಉತ್ತರವನ್ನು ಮತದಾರ ಪ್ರಭುಗಳಿಗೆ ಹೇಳುತ್ತಲೇ ಯೋಜನೆ ಜಾರಿಯಾಗಿ 10 ವರ್ಷಗಳು ಪೂರ್ತಿಯಾಗಿದೆ. ಹೀಗೆ ಯೋಜನಾ ವೆಚ್ಚ ಹೆಚ್ಚಳ, ನೀರು ಹರಿಯುವ ಬಗ್ಗೆ ಪರ ವಿರೋಧದ ವಾಕ್ಸಮರದ ನಡುವೆಯೇ ಮತ್ತೊಂದು ಲೋಕಸಭೆ ಚುನಾವಣೆಗೆ ವಿಷಯವಸ್ತುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಯೋಜನೆ ವಿಳಂಭದ ಕುರಿತು ಮಾತನಾಡಿದ್ದು, 2014ರ ಮಾರ್ಚ್ 3ರಂದು ಯೋಜನೆಗೆ ಅಡಿಗಲ್ಲು ಕಾರ್ಯಕ್ರಮdallಎರಡೇ ವರ್ಷಗಳಲ್ಲಿ ನಮಗೆ ಶುದ್ದ ಕುಡಿಯುವ ನೀರು ಕೊಡುವ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ ಎಂದು ನಂಬಿಸಿ ಎತ್ತಿನಹೊಳೆ ಯೋಜನೆಗೆ ಅಡಿಗಲ್ಲು ಹಾಕಿದರು. ಇಂದಿಗೆ ಎರಡು ಲೋಕಸಭಾ ಅವಧಿ ಮುಕ್ತಾಯವಾಗಿದೆ. ಬರೋಬ್ಬರಿ ಹತ್ತು ವರ್ಷಗಳು ಪೂರ್ತಿಯಾಗಿವೆ. ಎತ್ತಿನಹೊಳೆ ಯೋಜನೆಯು ಸಧ್ಯದ ಮಟ್ಟಿಗೆ ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಹರಿಯುವ ಯಾವ ಭರವಸೆಗಳು ಇಲ್ಲ, ಆದರೆ ರಾಜಕಾರಣಿಗಳು ಮತ್ತು ಗುತ್ತಿಗೆದಾರರಿಗೆ ಇದರಿಂದ ಪೂರ್ಣ ಪ್ರಮಾಣದಲ್ಲಿ ಲಾಭವಾಗಿದೆ ಎನ್ನುತ್ತಾರೆ. ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ.

ಯೋಜನೆಗೆ ಎರಡು ಕಡೆ ಕಾರ್ಯಕ್ರಮ:-

ವಿವಾದಿತ ಎತ್ತಿನಹೊಳೆ ಯೋಜನೆಗೆ 2014ರ ಮಾರ್ಚ್.3 ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದು ಎತ್ತಿನಹೊಳೆ ಯೋಜನೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಬಂದ್ ಆಚರಿಸಿದರೆ, ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಕಪ್ಪು ಪಟ್ಟಿ ಹಾಗೂ ಖಾಲಿ ಪೈಪುಗಳನ್ನು ಪ್ರದರ್ಶಿಸಿ, ಯೋಜನೆಯಿಂದ 24 ಟಿಎಂಸಿ ನೀರು ಲಭ್ಯವಿಲ್ಲ, ಕೇವಲ 6 ಟಿಎಂಸಿ ನೀರಷ್ಟೇ ಲಭ್ಯವಿದೆ, ಸರಕಾರ ಸುಳ್ಳು ಹೇಳುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಈ ವೇಳೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+