ಭಾರತೀಯ ಜನತಾ ಪಾರ್ಟಿಯಲ್ಲ, ಅದು ಭ್ರಷ್ಟಾಚಾರದ ಜನತಾ ಪಾರ್ಟಿಯಾಗಿದೆ: ಕೆ.ಪಿ.ಬಚ್ಚೇಗೌಡ
ಬಿಜೆಪಿ ಭ್ರಷ್ಟಾಚಾರದ ಪಕ್ಷವಾಗಿದೆ ಎಂದು ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ, ಮಾರ್ಚ್, 08: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಪಕ್ಷದ ಮುಖಂಡರು ಗ್ರಾಮಗಳಿಗೆ ಭೇಟಿ ನೀಡಿದಾಗ ಜೊತೆ ಬರುವ ಕಾರ್ಯಕರ್ತರು ಹಾಗೂ ಸ್ಥಳಿಯ ಮುಖಂಡರ ವಿರುದ್ಧ ಪೊಲಿಸರನ್ನು ಎತ್ತಿಕಟ್ಟಿ ಬೆದರಿಕೆ ಹಾಕುತ್ತಿದ್ದಾರೆ. ಹೀಗೆ ನಿರ್ಭೀತಿಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅಡ್ಡಿಪಡಿಸುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಆರೋಪಿಸಿದರು. ಹಾಗೆಯೇ ಅದು ಭಾರತಿಯ ಜನತಾ ಪಾರ್ಟಿಯಲ್ಲ, ಭ್ರಷ್ಟಾಚಾರದ ಜನತಾ ಪಾರ್ಟಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿ ಮಂಡಿಕಲ್ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಮನೆ ಮನೆ ಭೇಟಿ ಕಾರ್ಯಕ್ರಮದ ಪ್ರಯುಕ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮತದಾರರನ್ನು ಭಯಪಡಿಸಲು ನೀವು ಏನೇ ಮಾಡಿದರೂ ಮತ ಕೇಂದ್ರದಲ್ಲಿ ಈ ಬಾರಿ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಜಿಲ್ಲಾಡಳಿತ ಸೇರಿದಂತೆ, ಇತರೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸಚಿವರ ಕೈ ಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಾ. ಕೆ.ಸುಧಾಕರ್ ಮಾಡುವ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸಿಲ್ಲವೆಂದು, ನಂದಿ ಗ್ರಾ.ಪಂಚಾಯತಿಯಲ್ಲಿ ಬೇರೆ ಪಕ್ಷದವರು ಪ್ಲೇಕ್ಸ್ ಹಾಕಿದ್ದರು. ಅದಕ್ಕೆ ಪಿಡಿಒಗಳನ್ನು ಅಮಾನತ್ತು ಮಾಡಿ ಹಿಟ್ಲರ್ನಂತೆ ಕೌರ್ಯ ಮೆರೆಯುವ ಮೂಲಕ ದರ್ಪ ತೋರುತ್ತಿದ್ದಾರೆ. ಹಾಗೆಯೇ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸೂಕ್ತ ರಸ್ತೆಗಳಿಲ್ಲ ಎಂದು ಆಕ್ರೋಶ
ಮಂಡಿಕಲ್ ವ್ಯಾಪ್ತಿಯ ಅನೇಕ ಗ್ರಾಮಗಳಿಗೆ ಭೇಟಿ ನೀಡಿದರೆ ಸಚಿವರ ಅಭಿವೃದ್ಧಿ ಬಟಾಬಯಲಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಅಡ್ಡಗಲ್, ಬೋಗಪರ್ತಿ, ಬಚ್ಚೇನಹಳ್ಳಿ, ರಾಮಗಾನಪರ್ತಿಗೆ ಸೂಕ್ತ ರಸ್ತೆಯಿಲ್ಲ. ಕುಡಿಯಲು ಕೆರೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಇದೇನಾ ಸಿಂಗಾಪುರ ಮಾದರಿಯ ಅಭಿವೃದ್ಧಿ ಎಂದು ಪ್ರಶ್ನಿಸಿದರು.

ರಸ್ತೆಗಳ ಹೆಸರೇಳಿಕೊಂಡು ವೋಟ್ ಕೇಳುತ್ತಿದ್ದಾರೆ
ಮೆಡಿಕಲ್ ಕಾಲೇಜು ಬಂದ ಮಾತ್ರಕ್ಕೆ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಇದರಿಂದ ಸ್ಥಳೀಯರಿಗೆ ಉದ್ಯೋಗವು ಸಿಗುವುದಿಲ್ಲ. ನಗರದ ಸಮಿಪವಿದ್ದಿದ್ದರೆ ಕ್ಷೇತ್ರದ ಜನರಿಗೆ ಅನುಕೂಲವಾಗುತ್ತಿತ್ತು. ನಾನು ಶಾಸಕನಾಗಿದ್ದಾಗ ಸಮಾನ್ಯ ಜನರಿಗೆ ಕೊಳವೆಬಾವಿ ಕೊರೆಸಲಾಗಿದ್ದು, ಮನೆ ಮನೆ ಭೇಟಿಯ ವೇಳೆ ಪಲಾನುಭವಿಗಳು ಧನ್ಯವಾದ ತಿಳಿಸುತ್ತಿದ್ದಾರೆ. ಗ್ರಾಮಗಳಲ್ಲಿ ರಸ್ತೆ ನಿರ್ಮಾಣ ಆಗಿದ್ದು, ನಾನು ಇವುಗಳ ಆಧಾರದ ಮೇಲೆ ವೋಟ್ ಕೇಳುತ್ತಿದ್ದೇನೆ ಎಂದರು.

ಮಾಡಳ್ ಅವರಿಂದ ಬ್ರಹ್ಮಾಂಡ ಭ್ರಷ್ಟಾಚಾರ
ಆದರೆ ಸಚಿವರು ಸಾಧನೆ ಮೇಲೆ ವೋಟ್ ಕೇಳುತ್ತಿಲ್ಲ. ಅವರು ಈ ನಡುವೆ ಕೊಡುತ್ತಿರುವ ಸ್ಟೌವ್, ಪಂಚೆ, ಸೀರೆ ಹೀಗೆ ಮುಂತಾದವುಗಳ ಮೇಲೆ ಮತ ಕೇಳುತ್ತಿದ್ದಾರೆ. ಆದ್ದರಿಂದ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ಜನ ಕಾತುರದಿಂದ ಕಾಯುತ್ತಿದ್ದಾರೆ. ಬಿಜೆಪಿ ಪಕ್ಷದ್ದು ಓಡೆದು ಆಳುವ ನೀತಿಯಾಗಿದೆ. ಅದು ಭಾರತಿಯ ಜನತಾ ಪಾರ್ಟಿಯಲ್ಲ, ಭ್ರಷ್ಟಚಾರದ ಜನತಾ ಪಾರ್ಟಿಯಾಗಿದೆ. ಇದಕ್ಕೆ ಉದಾಹರಣೆ ಮಾಡಳ್ ಅವರ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ.
ಇಂದು ಮಾಡಳ್ ವಿರೂಪಾಕ್ಷಪ್ಪನವರು ಅಡಿಕೆ ಮಾರಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿದೆ ಎನ್ನುತ್ತಾರೆ. ಹಾಗಾದರೆ ಆ ಭಾಗದ ನಮ್ಮ ಅಡಿಕೆ ಬೆಳೆಗಾರರೆಲ್ಲಾ ಕೋಟ್ಯಾಧೀಶರಾಗಬಹುತ್ತು. ಆದರೆ ಯಾಕೆ ಆಗಿಲ್ಲ? ಎಂದು ಪ್ರಶ್ನಿಸಿದರು. ಇಂತಹ ಅಕ್ರಮ ಸರ್ಕಾರ ಅಧಿಕಾರಕ್ಕೆ ಬರದಂತೆ ಮಾಡಲು ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.

ಜನಸಾಮಾನ್ಯರು ತುಂಬಾ ಕಷ್ಟದಲ್ಲಿದ್ದಾರೆ
ಮುಂದಿನ ದಿನಗಳಲ್ಲಿ ದ್ರಾಕ್ಷಿಗೆ ಬೆಂಬಲ ಬೆಲೆ, ಮೂರನೇ ಹಂತ ಶುದ್ಧೀಕರಣಕ್ಕೆ ಒತ್ತಾಯ ಮಾಡಲಾಗುವುದು. ಸುಮಾರು 100 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳ ಪಟ್ಟಿ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಬಂದ ಕೂಡಲೇ ಇದಕ್ಕೆ ಚಾಲನೆ ನೀಡಲಾಗುವುದು. ಜನಸಾಮಾನ್ಯರ ಜೀವನ ಕಷ್ಟವಾಗಿದೆ. ಅಡುಗೆ ಎಣ್ಣೆ, ಗ್ಯಾಸ್, ಇಂಧನ ದರ ಗಗನಕ್ಕೇರಿದೆ. ಇದರಿಂದ ಜನ ಬೇಸತ್ತು ಹೋಗಿದ್ದು, ಬಿಜೆಪಿ ಪಕ್ಷಕ್ಕೆ ಬುದ್ಧಿ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೇಳುವುದೊಂದು, ಮಾಡೋದು ಇನ್ನೊಂದು ಆಗಬಾರದು
ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ಮಾತನಾಡಿ, ಸ್ಥಳಿಯ ಶಾಸಕರು ಮೊದಲು ಹೇಳಿದ್ದನ್ನು ಮಾಡಲಿ. ಹೇಳುವುದು ಒಂದು, ಮಾಡೋದು ಇನ್ನೊಂದು ಆಗಬಾರದು. ಚಿಕ್ಕಬಳ್ಳಾಪುರವನ್ನು ಸಿಂಗಪೂರ ಮಾಡುವುದಾಗಿ ಹೇಳಿದ್ದೀರಿ. ಟಿವಿ, ಮೊಬೈಲ್ನಲ್ಲಿ ಸಿಂಗಾಪುರವನ್ನು ನೋಡುವಂತಾಗಿದೆ. ಈಗಾಗಲೇ ನಂದಿ, ಮಂಚೇನಹಳ್ಳಿ, ಮಂಡಿಕಲ್ ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಕರಗುತ್ತಿವೆ. ಕಲ್ಲು ಗಣಿಗಾರಿಕೆಯಿಂದ ದುಡ್ಡು ದೋಚುತ್ತಿದ್ದಾರೆ. ಈ ಮೂಲಕ ಜನರ ಆರೋಗ್ಯವನ್ನು ದೋಚುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ನಿವೇಶನ ನೀಡಲು ಸರಿಯಾಗಿ ಜಾಗ ಗುರುತಿಸಿಲ್ಲ. ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳಲ್ಲಿ ಬಡಾವಣೆಗಳನ್ನು ನಿರ್ಮಿಸಲು ಸರ್ಕಾರಿ ಅಧಿಕಾರಿಗಳು ರೈತರಿಗೆ ದಮ್ಕಿ ಹಾಕಿ ವಶಪಡಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೈತರಿಗೆ ಜೆಡಿಎಸ್ನಿಂದ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.

ಬೆದರಿಕೆ ಹಾಕುವುದು ಎಷ್ಟು ಸರಿ?
ಅಧಿಕಾರಿಗಳಿಗೆ ಕಾನೂನುಗಳು ಗೊತ್ತಿಲ್ಲವೆ? ಪಂಚಾಯತ್ ರಾಜ್ ಕಾಯ್ದೆ ಬಗ್ಗೆ ಅರಿವಿಲ್ಲವೆ?.
ಸಾಗುವಳಿ ಚೀಟಿಗಾಗಿ ಅರ್ಜಿ ಹಾಕಿಕೊಂಡಿರುವ ರೈತರಿಗೆ ದಾಖಲೆ ಕೊಡಿಸುವುದು ಬಿಟ್ಟು ಬೆದರಿಕೆ ಹಾಕುವುದು ಎಷ್ಟು ಸರಿ? ಇದನ್ನು ತಿದ್ದಿಕೊಳ್ಳದಿದ್ದರೆ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು. ಅಧಿಕಾರಿಗಳು ಮೊದಲು ದರಖಾಸ್ತು ಸಮಿತಿಗಳನ್ನು ರಚಿಸಿ ಅರ್ಜಿಗಳನ್ನು ವಿಲೇವಾರಿ ಮಾಡಲಿ. ಸಚಿವರ ಹೋಬಳಿಯಲ್ಲೇ ಕೆಲಸ ಆಗಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾಕಾಂತ್ ಮಾತನಾಡಿ, ಕೈವಾರ ತಾತಯ್ಯ ಜಯಂತಿ ಪ್ರಯುಕ್ತ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಭಾಷಣ ಮಾಡಿದ್ದಾರೆ. ಕೈವಾರ ತಾತಯ್ಯ ಜಯಂತಿಯಲ್ಲಿ ಭೂತದ ಭಯಲ್ಲಿ ಭಗವದ್ಗೀತೆ ಆಡಿದಂತಾಗಿದೆ ಎಂದರು. ಹಿಂದೆ ಗೊಲ್ಲ, ಎಸ್ಸಿ-ಎಸ್ಟಿ, ಕುರುಬ, ಬಲಿಜ ಸಮುದಾಯಗಳನ್ನು ಒಡೆದು ಆಳುವ ಮೂಲಕ ರಾಜಕೀಯ ಮಾಡಿದ್ದಾರೆ. ಪ್ರತಿ ಜಯಂತಿಯಲ್ಲೂ ಜಮೀನು ಮಂಜೂರು ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆಯೇ ಹೊರತು ಇದುವರೆಗೂ ಯಾವುದೂ ಈಡೇರಿಲ್ಲ ಎಂದರು.
ಸಮುದಾಯ ಭವನಗಳನ್ನು ನಿರ್ಮಾಣ ಮಾಡುವುದರಿಂದ ಹಿಡಿದು ಯಾವ ಸಮುದಾಯಗಳು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸಮುದಾಯಗಳು ಅಭಿವೃದ್ಧಿಯಾಗಲು ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಆ ಮೂಲಕ ಸ್ಬಾಭಿಮಾನ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡಲಿ. ಬಲಿಜ ಸಮುದಾಯವನ್ನು ಒಡೆಯುವ ಕೆಲಸ ಮಾಡಿದ್ದು ಸಚಿವ ಸುಧಕಾರ್ ಎಂದು ಆರೋಪಿಸಿದರು.
ಸಚಿವರು ಮಾಡಿಸಿದ ಲಾಠಿಚಾರ್ಜ್ನಿಂದ ಬಲಿಜ ಸಮುದಾಯದ ವಿನಯ್ ಎಂಬ ವ್ಯಕ್ತಿ ಮೃತಪಟ್ಟಿದ್ದ. ಆ ಕಹಿ ಘಟನೆಯು ಬಲಿಜ ಸಮುದಾಯದಲ್ಲಿ ಮಾಸಿ ಹೋಗಿಲ್ಲ. ಅವರಲ್ಲಿ ಆ ಆವೇಷ ಇನ್ನೂ ಕಡಿಮೆಯಾಗಿಲ್ಲ.
ಜೆಡಿಎಸ್ ಪಕ್ಷದ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೆ.ಆರ್.ರೆಡ್ಡಿ, ಮಂಜುನಾಥ್, ಶ್ರೀಧರ್, ವೆಂಕಟೇಶ್, ಕೃಷ್ಣೇಗೌಡ, ಗಿರಿಜಮ್ಮ, ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಸದಸ್ಯರು, ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಭಾಗವಹಿಸಿದ್ದರು.












Click it and Unblock the Notifications