ಬಿಎಸ್ವೈ ಸರಕಾರ ಅಧಿಕಾರಕ್ಕೆ ಬರಲು ಎಚ್ಡಿಕೆ ಕಾರಣ: ಸಿಎಂ ಪುತ್ರ ವಿಜಯೇಂದ್ರ ಹೇಳಿಕೆ
ಚಿಕ್ಕಬಳ್ಳಾಪುರ, ಜ 29: "ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರಣ" ಎಂದು ರಾಜ್ಯ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವಿಜಯೇಂದ್ರ, "ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೀರ್ತಿ ಏನಾದರೂ ಇದ್ದರೆ, ಅದು ಕುಮಾರಸ್ವಾಮಿಯವರಿಗೆ ಸಲ್ಲಬೇಕು" ಎಂದು ವಿಜಯೇಂದ್ರ ಹೇಳಿದ್ದಾರೆ.
"ನಾವಾಗಿಯೇ ಸರಕಾರ ರಚಿಸಲು ಏನೂ ಕಸರತ್ತು ನಡೆಸಿರಲಿಲ್ಲ. ಅವರು ಮಾಡಿದ ತಪ್ಪಿಂದಾಗಿ ನಮ್ಮ ಸರಕಾರ ಅಧಿಕಾರಕ್ಕೆ ಬಂತು. ಕುಮಾರಸ್ವಾಮಿಯವರ ಸರಕಾರದ ಕಾರ್ಯವೈಖರಿಯಿಂದ ಶಾಸಕರು ರಾಜೀನಾಮೆ ನೀಡಿದರು" ಎಂದು ವಿಜಯೇಂದ್ರ ನುಡಿದಿದ್ದಾರೆ.

"ಸಚಿವ ಸಂಪುಟ ವಿಸ್ತರಣೆಯ ನಂತರ ಸರಕಾರ ಉತ್ತಮ ಆಡಳಿತವನ್ನು ನೀಡುತ್ತದೆ. ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿಗಳು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲವಿಲ್ಲ" ಎಂದು ವಿಜಯೇಂದ್ರ ಸ್ಪಷ್ಟ ಪಡಿಸಿದ್ದಾರೆ.
"ಎಚ್ಡಿಕೆಯವರು ಈಗ ಮಿಣಿಮಿಣಿ ಕುಮಾರಸ್ವಾಮಿ ಎಂದು ಹೆಸರು ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಸುಭದ್ರ ಮತ್ತು ಜನಪರ ಸರಕಾರವನ್ನು ನಾವು ನೀಡುತ್ತೇವೆ" ಎನ್ನುವ ಭರವಸೆಯನ್ನು ಬಿ.ವೈ.ವಿಜಯೇಂದ್ರ ವ್ಯಕ್ತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ, ದೆಹಲಿಗೆ ತೆರಳಿ, ಇದೇ ಬರುವ ಶುಕ್ರವಾರದೊಳಗೆ (ಜ 31) ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications