ಕನ್ನಡಿಗರಿಗೆ ಸಿಹಿಸುದ್ದಿ; ಚಿಕ್ಕಬಳ್ಳಾಪುರದಲ್ಲಿ ನಾಲ್ವರು ಸೋಂಕಿತರು ಗುಣಮುಖ
ಚಿಕ್ಕಬಳ್ಳಾಪುರ, ಏಪ್ರಿಲ್.12: ದೇಶಕ್ಕೆ ಕೊರೊನಾ ವೈರಸ್ ಸೋಂಕು ಲಗ್ಗೆಯಿಟ್ಟ ಸಂದರ್ಭದಲ್ಲಿ ಕರ್ನಾಟಕದಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದ ಜನರನ್ನು ಆತಂಕಕ್ಕೆ ದೂಡಿದ್ದು ಅಕ್ಷರಶಃ ಸತ್ಯ ಸಂಗತಿ. ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ಇದೀಗ ಹತೋಟಿಗೆ ಬಂದಿದೆ.
ರಾಜ್ಯದಲ್ಲಿ ಲಾಕ್ ಡೌನ್ ಗೆ ಸಾರ್ವಜನಿಕರು ಸ್ಪಂದಿಸುತ್ತಿರುವ ಹಿನ್ನೆಲೆ ಕೊರೊನಾ ಸೋಂಕಿತರ ಸಂಖ್ಯೆಯೂ ಇಳಿಮುಖವಾಗಿದ್ದು, ಇದರ ಮಧ್ಯೆ ಮತ್ತೊಂದು ಸಿಹಿಸುದ್ದಿ ಹೊರ ಬಂದಿದೆ. 12 ಮಂದಿ ಕೊರೊನಾ ಸೋಂಕಿತರಿದ್ದ ಚಿಕ್ಕಬಳ್ಳಾಪುರದಲ್ಲಿ ನಾಲ್ವರ ಆರೋಗ್ಯ ಸುಧಾರಿಸಿದೆ.
ಜಿಲ್ಲೆಯಲ್ಲಿ ನಾಲ್ವರು ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದು ಭಾನುವಾರ ನಾಲ್ಕು ಮಂದಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಸಾಲುಗಟ್ಟಿ ನಿಂತ ವೈದ್ಯರು ಚಪ್ಪಾಳೆ ತಟ್ಟುತ್ತಾ ಫಲಪುಷ್ಪವನ್ನು ನೀಡಿ ಸಂತಸದಿಂದ ಬಿಳ್ಕೊಡುಗೆ ನೀಡಿದರು.

ಒಬ್ಬ ಮಹಿಳೆ ಮೂವರು ಪುರುಷರ ಆರೋಗ್ಯ ಚೇತರಿಕೆ:
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬ ಮಹಿಳೆ ಹಾಗೂ ಮೂವರು ಪುರುಷರು ಸೇರಿದಂತೆ ನಾಲ್ವರು ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಹಿನ್ನೆಲೆ ನಾಲ್ವರನ್ನು ಡಿಸ್ಚಾರ್ಜ್ ಮಾಡಿದ್ದು, ನಿರಂತರ ಸೇವೆ ಮಾಡಿ ತಮ್ಮ ಜೀವ ಉಳಿಸಿದ ವೈದ್ಯರ ತಂಡಕ್ಕೆ ನಾಲ್ವರು ಕೃತಜ್ಞತೆ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 12 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಇದುವರೆಗೂ ಮಾರಕ ಸೋಂಕಿಗೆ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಇದೀಗ ನಾಲ್ವರು ಗುಣಮುಖರಾಗಿದ್ದು ಉಳಿದವರಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ಉಳಿದ ಸೋಂಕಿತರ ಆರೋಗ್ಯದಲ್ಲಿಯೂ ಚೇತರಿಕೆ ಕಂಡು ಬಂದಿದ್ದು ಆದಷ್ಟು ಬೇಗ ಎಲ್ಲರನ್ನೂ ಡಿಸ್ಚಾರ್ಜ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಆರೋಗ್ಯ ಅಧಿಕಾರಿಗಳ ಕಾರ್ಯವೈಖರಿಯನ್ನು ಜಿಲ್ಲಾಧಿಕಾರಿಗಳು ಶ್ಲಾಘಿಸಿದ್ದಾರೆ.












Click it and Unblock the Notifications