Ashwamedha Bus: ಕೆಎಸ್ಆರ್ಟಿಸಿಗೆ ಅಶ್ವಮೇಧ ಬಲ- ಚಿಕ್ಕಬಳ್ಳಾಪುರ ವಿಭಾಗಕ್ಕೆ 35 ಬಸ್- ಕಿಮೀಗೆ 55ರೂ. ಆದಾಯ
ಚಿಕ್ಕಬಳ್ಳಾಪುರ ಜೂನ್ 3: ಶಕ್ತಿ ಯೋಜನೆ ಜಾರಿ ಬಳಿಕ ಸಾರಿಗೆ ಬಸ್ಗಳಲ್ಲಿ ಮಹಿಳೆಯರ ಓಡಾಟವೂ ಜಾಸ್ತಿಯಾಗಿದೆ. ಆದರೆ ಬಸ್ಗಳ ಕೊರತೆಯಿಂದ ಜನ ಪರದಾಡುವಂತಾಗಿತ್ತು. ಈ ಸಮಸ್ಯೆ ನಿವಾರಣೆಗೆ ಕೆಎಸ್ಆರ್ಟಿಸಿಗೆ ಹೊಸದಾಗಿ ಕಲ್ಪಿಸಿದ ಅಶ್ವಮೇಧ ಸಾರಿಗೆ ವ್ಯವಸ್ಥೆ ತುಸು ನಿರಾಳವಾಗಿಸಿದೆ.
ಹೌದು ಶಕ್ತಿ ಯೋಜನೆ ಬಳಿಕ ಕೆಎಸ್ಆರ್ಟಿಸಿ ಬಸ್ಗಳಿಗೆ ಸಾಕಷ್ಟು ಬೇಡಿಕೆ ಹೆಚ್ಚಾಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಬಸ್ ಸಂಚಾರ ಸೌಲಭ್ಯ ಕಲ್ಪಿಸಲು ಸರಕಾರ ಹೊಸ ಬಸ್ 6 ಗಳನ್ನು ಒದಗಿಸುವ ಮೂಲಕ ಕೆಎಸ್ಆರ್ ಟಿಸಿಗೆ ಬಲ ನೀಡಿದೆ.

ಅದರಲ್ಲೂ ಹೊಸ ವಿನ್ಯಾಸದ, ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವ ನಾನಾ ಸ್ಟಾಪ್ ಅಶ್ವಮೇಧ ಹೆಸರಿನ ಹೊಸ ಬಸ್ಗಳನ್ನು ಎಲ್ಲ ಕೆಎಸ್ ಆರ್ ಟಿಸಿ ವಿಭಾಗಗಳಿಗೂ ಆದ್ಯತೆ ಮೇರೆಗೆ ನೀಡಲಾಗಿದೆ.
ಚಿಕ್ಕಬಳ್ಳಾಪುರ ವಿಭಾಗಕ್ಕೂ 35 ಹೊಸ ಅಶ್ವಮೇಧ ಬಸ್ಗಳನ್ನು ಮಂಜೂರು ಮಾಡಲಾಗಿದೆ. ಈ ಹೊಸ ಬಸ್ಗಳನ್ನು ಪಾಯಿಂಟ್ ಟು ಪಾಯಿಂಟ್ ಕೇಂದ್ರಗಳತ್ತ ಸಂಚಾರಕ್ಕೆ ಬಿಡಲಾಗಿದೆ. ಅದರಲ್ಲೂ ಬೆಂಗಳೂರು ನಗರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿ, ಶಿಡ್ಲಘಟ್ಟ ಮಾರ್ಗಗಳಿಗೆ ಬಿಡಲಾಗುತ್ತಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಸ್ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇತರೆ ಬಸ್ಗಳಿಗೆ ಹೋಲಿಸಿದರೆ ಇದರಲ್ಲಿ ಉತ್ತಮ ಆದಾಯ ಕೂಡ ಬರುತ್ತಿದ್ದು, ನೇರವಾದ ಪ್ರಯಾಣ ಇರುವುದರಿಂದ ಸಾರ್ವ ಜನಿಕರಿಗೂ ಅನುಕೂಲವಾಗುತ್ತಿದೆ. ಇದರಿಂದ ಈ ರೀತಿಯ ಬಸ್ ಮತ್ತೊಂದಿಷ್ಟು ಬೇಕಿದೆ ಎಂಬ ಕೂಗು ಕೂಡ ಕೇಳಿಬರುತ್ತಿದೆ.
ಉತ್ತಮ ಆದಾಯ:
ಕೆಎಸ್ಆರ್ಟಿಸಿ ಬಸ್ಗಳಿಗೆ ಹೋಲಿಸಿದರೆ ಅಶ್ವಮೇಧ ಬಸ್ಗಳಲ್ಲಿ ಉತ್ತಮ ಆದಾಯ ಬರುತ್ತಿದೆ. ಪ್ರತಿದಿನ ಆಯಾ ರೂಟ್ಗಳ ಆಧಾರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಆಶ್ವಮೇಧ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
ಬೆಳಗ್ಗೆ, ಸಂಜೆ ವೇಳೆ ಹೆಚ್ಚು ಬೇಡಿಕೆ:-
ಕೆಎಸ್ಆರ್ಟಿಸಿ ಬಸ್ಗಳಿಗೆ ಇದೀಗ ಎಲ್ಲ ವೇಳೆಯಲ್ಲೂ ಬೇಡಿಕೆ ಇದೆ. ಅದರಲ್ಲೂ ಬೆಳಗ್ಗೆ ಹಾಗೂ ಸಂಜೆ ವೇಳೆಯಂತೂ ಜಿಲ್ಲಾಕೇಂದ್ರ, ತಾಲೂಕು ಕೇಂದ್ರಗಳಿಗೆ ಒಂದೇ ಬಾರಿಗೆ ಮೂರ್ನಾಲ್ಕು ಬಸ್ಗಳಿಗೆ ಆಗುವಷ್ಟು ಪ್ರಯಾಣಿಕರು ಇರುತ್ತಾರೆ.
ಬೆಂಗಳೂರು ಮೆಜೆಸ್ಟಿಕ್ ನಿಂದ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಹಾಗೂ ಇನ್ನಿತರೇ ತಾಲೂಕು ಕೇಂದ್ರಗಳಿಗೆ ಹೋಗಲು ಒಂದೇ ವೇಳೆಯಲ್ಲೇ ಎರಡೂರು ಬಸ್ಗಳೂ ಹೊರಟರೂ ಅಷ್ಟು ಬಸ್ಗಳೂ ಭರ್ತಿ ಆಗಿರುತ್ತವೆ. ಆ ಮಟ್ಟಕ್ಕೆ ಬಸ್ಗಳಿಗೆ ಬೇಡಿಕೆ ಇದೆ. ಶಕ್ತಿ ಯೋಜನೆ ಒಂದೆಡೆಯಾದರೆ ಅದೇ ವೇಳೆಯಲ್ಲಿ ಸರಕಾರಿ ಕಚೇರಿ, ಶಾಲಾ, ಕಾಲೇಜು, ವ್ಯಾಪಾರ, ವಹಿವಾಟಿಗೆ ತೆರಳುವ ಮಂದಿ ಹೆಚ್ಚಿರುತ್ತಾರೆ. ಹೀಗಾಗಿ ರಶ್ ಹೆಚ್ಚು.
ಉತ್ತಮ ಆದಾಯ :-
ಸಾಮಾನ್ಯವಾಗಿ ಕೆಎಸ್ಆರ್ಟಿಸಿಯ ಇತರೆ ಬಸ್ಗಳಲ್ಲಿ ಪ್ರತಿ ಕಿಮೀನ ಆದಾಯ 30- 40ರೂ. ಇರುತ್ತದೆ. ಆದರೆ. ಅಶ್ವಮೇಧದ ಆದಾಯ ಸರಾಸರಿ 50ರೂ. ಗಳಿಗಿಂತ ಹೆಚ್ಚಾಗಿದೆ. ಅದರಲ್ಲಿ ದೊಡ್ಡಬಳ್ಳಾಪುರ- ಕಾವೇರಿ ಭವನ ಮಾರ್ಗದಲ್ಲಿ ಪ್ರತಿ ಕಿಮೀಗೆ 47.65 ರೂ. ಶಿಡ್ಲಘಟ್ಟ - ಬೆಂಗಳೂರು ಮಾರ್ಗದಲ್ಲಿ ಪ್ರತಿ ಕಿಮ್ಮಿಗೆ 49.82 ರೂ, ಗೌರಿಬಿದನೂರು ಬೆಂಗಳೂರು ಮಾರ್ಗದಲ್ಲಿ 55.03ರೂ, ಬಾಗೇಪಲ್ಲಿ - ಬೆಂಗಳೂರು ಮಾರ್ಗದಲ್ಲಿ 58.53ರೂ, ಚಿಂತಾಮಣಿ- ಬೆಂಗಳೂರು. ಮಾರ್ಗದಲ್ಲಿ 56.36ರೂ, ಚಿಕ್ಕಬಳ್ಳಾಪುರದಿಂದ ಬೆಂಗಳೂರು ಮಾರ್ಗದಲ್ಲಿ 60.27 ರೂ ನಷ್ಟು ಪ್ರತಿ ಕಿಮೀಗೆ ಆದಾಯ ಬರುತ್ತಿದ್ದು, ಮತ್ತಷ್ಟು ಆದಾಯ ಹೆಚ್ಚಾಗುವ ನಿರೀಕ್ಷೆ ಕೂಡವಿದೆ.
ನಿಲ್ದಾಣದಿಂದ ನಿಲ್ದಾಣದವರೆಗೂ ವೇಗದೂತ:-
ಸಾಮಾನ್ಯ ವಾಗಿ ಸರಕಾರಿ ಬಸ್ಗಳು ಹೆಚ್ಚಿನ ಕಡೆಗಳಲ್ಲಿ ಸ್ಟಾಪ್ಗಳನ್ನು ನೀಡಿ ಅಲ್ಲಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಇಳಿಸುವ ಕೆಲಸವಾಗುತ್ತದೆ. ಇದರಿಂದ ಪ್ರಯಾಣದ ಸಮಯ ಹೆಚ್ಚಳವಾಗುತ್ತದೆ. ಆದರೆ, ಅಶ್ವಮೇಧ ಬಸ್ಗಳ ವಿಷಯಕ್ಕೆ ಬಂದರೆ ಇದು ಪಾಯಿಂಟ್ ಟು ಪಾಯಿಂಟ್ ಎಕ್ಸ್ಪ್ರೆಸ್ ಆಗಿದೆ.
ಇದು ತೆರಳುವ ಮಾರ್ಗದಲ್ಲಿನ ಪ್ರಮುಖ ಕಡೆಗಳಲ್ಲಿ 1-2 ಸ್ಟಾಪ್ಗಳನ್ನು ನೀಡುವುದನ್ನು ಬಿಟ್ಟರೆ ಬಹುತೇಕ ಇದು ನೇರವಾಗಿ ಅಂತಿಮ ನಿಲ್ದಾಣ ತಲುಪುತ್ತದೆ. ಇದರಿಂದ ಪ್ರಯಾಣಿಕರಿಗೆ ಪ್ರಯಾಣದ ಆವಧಿಯಲ್ಲಿ ಕಡಿಮೆ ಯಾಗುತ್ತಿದ್ದು, ದೂರದ ಪ್ರಯಾಣಕ್ಕೆ ಇದರ ಬಳಕೆ ಹೆಚ್ಚಳವಾಗುತ್ತಿದೆ.
ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಆರಂಭವಾದ ದಿನದಿಂದ ಸಾರಿಗೆ ಬಸ್ಗಳು ತುಂಬಿ ತುಳುಕುತ್ತಿವೆ. ನಿತ್ಯ ಪ್ರಯಾಣಿಕರ ಗೋಳಾಟ, ನಿರ್ವಾಹಕರ ಪರದಾಟ, ಗೊಂದಲ-ಗಲಾಟೆಗಳು ಸಾರಿಗೆ ಸಂಸ್ಥೆಗೆ ತಲೆನೋವು ತರಿಸಿದೆ. ಈ ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಸರಕಾರದ ಅಶ್ವಮೇಧ, ಇದರಿಂದ ಶಕ್ತಿ ಯೋಜನೆಯ ಒತ್ತಡಕ್ಕೆ ಪರಿಹಾರ ಸಿಕ್ಕಂತಾಗಿದೆ.
ಗ್ರಾಮೀಣ ಭಾಗಕ್ಕೆ ನೀಗದ ಸಮಸ್ಯೆ:-
ನಗರ ಪ್ರದೇಶಗಳ ಮಾರ್ಗಕ್ಕೆ ಹೊಸ ಬಸ್ಗಳು ಸಂಚರಿಸಿ, ಗ್ರಾಮೀಣ ಭಾಗಕ್ಕೆ ಹಳೇ ಬಸ್ಗಳನ್ನು ಬಿಡಲಾಗುತ್ತಿದೆ. ಇದು ಸರಿಯಲ್ಲ ಎಂಬ ಆಕ್ಷೇಪವೂ ಇದೆ. ಇದೆಲ್ಲವನ್ನೂ ಅಧಿಕಾರಿಗಳು ನೀಗಿಸಲು ಕ್ರಮ ವಹಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಗ್ರಾಮೀಣ ಭಾಗದ ಜನರ ಸಮಸ್ಯೆಗಿಲ್ಲ ಮುಕ್ತಿ :-
ಹೊಸ ಬಸ್ಗಳು ಬಂದಿದ್ದರೂ ಗ್ರಾಮೀಣ ಭಾಗಕ್ಕೆ ಬಸ್ಗಳ ಕೊರತೆ ನೀಗಿಲ್ಲಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ. ತಾಲೂಕು ಕೇಂದ್ರಗಳಿಂದ ಜಿಲ್ಲಾಕೇಂದ್ರಕ್ಕೆ, ಜಿಲ್ಲಾಕೇಂದ್ರದಿಂದ ತಾಲೂಕುಗಳಿಗೆ ಹೆಚ್ಚಿನ ಬಸ್ಗಳಿದ್ದರೂ ಗ್ರಾಮೀಣ ಭಾಗಕ್ಕೆ ಹೆಚ್ಚು ಆದ್ಯತೆ ನೀಡುತ್ತಿಲ್ಲ. ಬೆಳಗ್ಗೆ ಹಾಗೂ ಸಂಜೆ ವೇಳೆ ಗ್ರಾಮೀಣ ಭಾಗಕ್ಕೂ ಹೆಚ್ಚಿನ ಬಸ್ಗಳ ಸಂಚಾರಕ್ಕೆ ಕ್ರಮ ವಹಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯ.
ಅಶ್ವಮೇಧ ಬಸ್ ವಿಶೇಷತೆಗಳೇನು?
*ವಿಶಾಲವಾದ ಹಿಂದಿನ ಹಾಗೂ ಮುಂದಿನ ಗ್ಲಾಸ್ಗಳನ್ನು ಈ ಬಸ್ ಹೊಂದಿದೆ. ಗುಣಮಟ್ಟದ ಕುಷನ್ ಹಾಗೂ ರೆಕ್ಸಿನ್ ಒಳಗೊಂಡ, 52 ಸೀಟ್ ವ್ಯವಸ್ಥೆ ಇದೆ. ಮೊಬೈಲ್ ಚಾರ್ಜ್ ಮಾಡಲು 6 ಪಾಯಿಂಟ್ ಅಳವಡಿಕೆ ಮಾಡಲಾಗಿದೆ. ಸಾಮಾನ್ಯ ಸಾರಿಗೆ ಬಸ್ಗಿಂತ ದೊಡ್ಡದಾದ ವಿಂಡೋ ಪ್ರೇಮ್ ಹಾಗೂ ಗ್ಲಾಸ್ ಇರುತ್ತದೆ.
*ಪ್ರಯಾಣಿಕರು ನಿಂತಾಗ ಆಧಾರಕ್ಕೆ ಎರಡು ಸಾಲು ಗ್ರಾಬ್ ರೈಲ್ ಇದೆ. ಬಸ್ ಹಿಂದೆ ಹಾಗೂ ಮುಂದೆ ಎಲ್ಇಡಿ ಮಾರ್ಗಫಲಕ ಇದೆ. ಬಸ್ ಮುಂದೆ ಹಾಗೂ ಹಿಂದೆ ಎರಡು ಹೈ ಕ್ವಾಲಿಟಿ ಕ್ಯಾಮೆರಾ ಅಳವಡಿಸಲಾಗಿದೆ. ಜಿಪಿಎಸ್ ಟ್ಯಾಕಿಂಗ್ ಹಾಗೂ ಪ್ರಯಾಣಿಕರಿಗಾಗಿ ಪ್ಯಾನಿಕ್ ಬಟನ್ ಇದ್ದು ಮುಂದಿನ ನಿಲ್ದಾಣ ಮಾಹಿತಿ ನೀಡುವ ಧ್ವನಿವರ್ಧಕ ಇದೆ.
*ಘಾಟ್ನ ತಿರುವುಗಳಲ್ಲಿ ಸ್ವಯಂಚಾಲಿತ ಬ್ರೇಕ್ ಕಂಟ್ರೋಲ್ ವ್ಯವಸ್ಥೆ ಮಾಡಲಾಗಿದೆ. ಪಾಯಿಂಟ್ ಟು ಪಾಯಿಂಟ್ ಎಕ್ಸಪ್ರೆಸ್ ಅಶ್ವಮೇಧ ಬಸ್ಗಳ ಎತ್ತರ 3.42 ಮೀಟರ್ ಹೊಂದಿದೆ. ಮುಂಬದಿ ಹಾಗೂ ಹಿಂಬದಿಯಲ್ಲಿ ತಲಾ 1ಕ್ಯಾಮೆರಾ ಆಳವಡಿಸಲಾಗಿದೆ.
*ಎಲೆಕ್ಟ್ರಾನಿಕ್ ವಾಹನ ಸ್ಥಿರತೆ ನಿಯಂತ್ರಣ ಉಪಕರಣಕೂಡ ಅಳವಡಿಕೆ ಮಾಡಲಾಗಿದೆ. ಇದಲ್ಲದೇ ಈ ಬಸ್ಗಳಲ್ಲಿ ವಾಹನಕ್ಕೆ ಟ್ರ್ಯಾಕಿಂಗ್ ಉಪಕರಣ, ಪ್ಯಾನಿಕ್ ಬಟನ್ಗಳು ಮತ್ತು ಬಸ್ ನಿಲ್ದಾಣಗಳ ಮಾಹಿತಿ ನೀಡುವ (ಧ್ವನಿವರ್ದಕ) ಯಂತ್ರಗಳನ್ನು ಅಳವಡಿಸಿದ್ದು, ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಕರವಾಗಿದೆ.
*ರಾಜ್ಯ ಸರಕಾರದ ವಿಶೇಷ ಹಾಗೂ ವಿನುತನವಾದ ಅಶ್ವಮೆಧ ಬಸ್ ಗಳನ್ನು ಚಿಕ್ಕಬಳ್ಳಾಪುರ ಕೆಎಸ್ಆರ್ ಟಿಸಿ ವಿಭಾಗಕ್ಕೆ ಒಟ್ಟು 35 ಅಶ್ವಮೇಧ ಬಸ್ ಗಳನ್ನು ನೀಡಲಾಗಿದೆ. ಪ್ರಯಾಣಿಕರಿಂದ ಈ ಬಸ್ ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಆದಾಯವು ಸಹ ಉತ್ತಮ ಸ್ಥಿತಿಯಲ್ಲಿದೆ ಎಂದು ಚಿಕ್ಕಬಳ್ಳಾಪುರ ವಿಭಾಗೀಯ ಸಾರಿಗೆ ಅಧಿಕಾರಿ ಮಂಜುನಾಥ್ ಹೇಳಿದರು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications