ಜಯಲಲಿತಾ ಸಾವಿನ ವಿಚಾರದ ಸ್ಫೋಟಕ ಮಾಹಿತಿ ಹೊರಹಾಕಿದ ಸಚಿವ
ಚೆನ್ನೈ, ಸೆಪ್ಟೆಂಬರ್ 23: ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಬಗ್ಗೆ ಎಐಎಡಿಎಂಕೆ ನಾಯಕರು ನೀಡುತ್ತಿದ್ದ ಹೇಳಿಕೆಗಳೆಲ್ಲವೂ ಸುಳ್ಳು ಎಂದು ತಮಿಳುನಾಡಿನ ಅರಣ್ಯ ಸಚಿವ ಸಿ. ಶ್ರೀನಿವಾಸನ್ ಅವರ ಮಾತು ಈಗ ಚರ್ಚೆಗೆ ಗ್ರಾಸವಾಗಿದೆ. ಜಯಲಲಿತಾ ಅವರು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾಗ ನಾವು ಸುಳ್ಳು ಹೇಳಿದ್ದೆವು. ಇದಕ್ಕಾಗಿ ನಾನು ತಮಿಳುನಾಡಿನ ಜನತೆಯ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ಮಧುರೈನಲ್ಲಿ ಶುಕ್ರವಾರ ರಾತ್ರಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಶ್ರೀನಿವಾಸನ್, ''ಜಯಲಿಲಿತಾ ಅವರು ಆಸ್ಪತ್ರೆಯಲ್ಲಿದ್ದಾಗ ಎಐಎಡಿಎಂಕೆ ನಾಯಕರು ಅವರ ಆರೋಗ್ಯದ ಬಗ್ಗೆ ನೀಡುತ್ತಿದ್ದ ಹೇಳಿಕೆಗಳೆಲ್ಲವೂ ಸುಳ್ಳು. ಜಯಲಲಿತಾ ಅವರು ಇಂದು ಇಡ್ಲಿ ಸೇವಿಸಿದರು. ಕಾಫಿ ಕುಡಿದರು. ತಮ್ಮನ್ನು ಭೇಟಿ ಮಾಡಲು ಬಂದಿದ್ದ ನಾಯಕರೊಡನೆ ಮಾತನಾಡಿದರು ಎಂಬುದೆಲ್ಲಾ ಸುಳ್ಳು. ಅಸಲಿನ ವಿಚಾರವೇನೆಂದರೆ, ಎಐಎಡಿಎಂಕೆಯ ಯಾವೊಬ್ಬ ನಾಯಕರೂ ಆ ಸಂದರ್ಭದಲ್ಲಿ ಜಯಲಲಿತಾ ಅವರನ್ನು ಭೇಟಿ ಆಗಿರಲೇ ಇಲ್ಲ'' ಎಂದು ಅವರು ತಿಳಿಸಿದರು.
ಕಳೆದ ವರ್ಷ ಸೆಪ್ಟೆಂಬರ್ 22ರಂದು ನಿರ್ಜಲೀಕರಣದ ಕಾರಣ ನೀಡಿ ಜಯಲಲಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರನ್ನು ನೋಡಲು ಯಾರಿಗೂ ಅವಕಾಶ ಕಲ್ಪಿಸಿರಲಿಲ್ಲ. ಅವರ ಅಂತಿಮ ಕ್ಷಣದವರೆಗೂ ಅವರನ್ನು ನೋಡಲು ಯಾರಿಗೂ ಬಿಟ್ಟಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ್ದ ಯಾವುದೇ ರಾಜಕೀಯ ನಾಯಕರು, ವಿಐಪಿಗಳನ್ನು ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಸ್ಪೆಷಲ್ ವಾರ್ಡ್ ವರೆಗೆ ಹೋಗಲು ಅವಕಾಶ ನೀಡಲೇ ಇಲ್ಲ ಎಂದು ತಿಳಿಸಿದ್ದಾರೆ.
ಮಧುರೈನಲ್ಲಿನ ಸಮಾರಂಭದಲ್ಲಿ ಸಚಿವ ಶ್ರೀನಿವಾಸ್ ನೀಡಿದ ಹೇಳಿಕೆಯ ಸಾರಾಂಶ ಇಲ್ಲಿದೆ.
ಯಾರೂ ಜಯಲಲಿತಾ ಅವರನ್ನು ಭೇಟಿ ಮಾಡಿಲ್ಲ
ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಎಐಎಡಿಎಂಕೆಯ ನಾಯಕರು ನೀಡಿದ ಎಲ್ಲಾ ಹೇಳಿಕೆಗಳೂ ಸುಳ್ಳೇ ಸುಳ್ಳು. ಸೆ. 22ರಂದು ಅವರು ಆಸ್ಪತ್ರೆಗೆ ದಾಖಲಾದಾಗಿನಿಂದ ಅವರು ಮೃತಪಟ್ಟರೆಂದು ವೈದ್ಯರು ಘೋಷಿಸಿದ 5ನೇ ಡಿಸೆಂಬರ್ 2016ರವರೆಗೆ ಯಾವ ಎಐಎಡಿಎಂಕೆ ನಾಯಕರೂ ಅವರನ್ನು ಭೇಟಿ ಆಗಿಯೇ ಇಲ್ಲ.
ಇಲ್ಲಿ ಮಾತ್ರ ಅಮ್ಮನ ಆರೋಗ್ಯದ ಮಾಹಿತಿ ಸಿಗುತ್ತಿತ್ತು!
ಆಸ್ಪತ್ರೆಗೆ ಭೇಟಿ ನೀಡಲು ಬರುತ್ತಿದ್ದ ಎಲ್ಲಾ ನಾಯಕರನ್ನು ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರತಾಪ್ ರೆಡ್ಡಿ ಅವರ ಕೊಠಡಿಯಲ್ಲಿ ಕೂರಿಸಲಾಗುತ್ತಿತ್ತು. ರಾಷ್ಟ್ರ ನಾಯಕರೇ ಬರಲಿ, ರಾಜ್ಯ ನಾಯಕರೇ ಬರಲಿ. ಈ ಎಲ್ಲರನ್ನೂ ಅಲ್ಲಿ ಕೂರಿಸಲಾಗುತ್ತಿತ್ತು. ಅಲ್ಲಿಯೇ 'ಅಮ್ಮ'ನ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಕಳುಹಿಸಲಾಗುತ್ತಿತ್ತು.
ಚರ್ವಿತ ಚರ್ವಣ ಪ್ರಕಟಣೆಗಳು ಇರುತ್ತಿದ್ದವಷ್ಟೇ!
ಆಸ್ಪತ್ರೆಯಲ್ಲಿ 'ಅಮ್ಮ' ಇರುವವರೆಗೂ ಸರ್ಕಾರದಿಂದಾಗಲೀ , ಆಸ್ಪತ್ರೆಯಿಂದಾಗಲೀ ಅವರ ಆರೋಗ್ಯದ ಬಗ್ಗೆ ವಿಶೇಷವಾದ ಪ್ರಕಟಣೆಗಳು ಏನೂ ಇರುತ್ತಿರಲಿಲ್ಲ. ಅದೇನೇ ಪ್ರಕಟಣೆ ನೀಡಿದರೂ, ಜಯಲಲತಾ ಅವರ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶೀಘ್ರದಲ್ಲೇ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ ಎಂಬ ಹೇಳಿಕೆಗಳು ಬರುತ್ತಿದ್ದವಷ್ಟೆ.
ಶಶಿಕಲಾ ಅವರಿಗೆ ಮಾತ್ರ ನೇರ ಪ್ರವೇಶ
ನಿಮಗೆ ತಿಳಿದಿರಲಿ. ಜಯಲಲಿತಾ ಅವರು ದಾಖಲಾಗಿದ್ದ ವಾರ್ಡ್ ಗೆ ನೇರವಾಗಿ ಪ್ರವೇಶ ಪಡೆಯುತ್ತಿದ್ದುದು ಶಶಿಕಲಾ ಮಾತ್ರ. ಆದರೆ, ಇದನ್ನು ಶಶಿಕಲಾ ಅವರ ಸಂಬಂಧಿ ಟಿಟಿವಿ ದಿನಕರನ್ ಅವರು ನಿರಾಕರಿಸಿದ್ದರು. ಆದರೆ, ಶಶಿಕಲಾ ಅವರಿಗೆ ಮಾತ್ರ ಜಯಲಲಿತಾ ಇದ್ದ ವಾರ್ಡ್ ಗೆ ನೇರವಾಗಿ ಹೋಗಲು ಅವಕಾಶ ಇದ್ದಿದ್ದು ನಿಜ.
ತನಿಖೆ ಆರಂಭವಾಗಿಲ್ಲ: ಸ್ಟಾಲಿನ್
ಏತನ್ಮಧ್ಯೆ, ಡಿಎಂಕೆ ನಾಯಕ ಸ್ಟಾಲಿನ್ ಅವರು ಶನಿವಾರ (ಸೆ. 23) ಹೇಳಿಕೆ ನೀಡಿ, ತಮಿಳುನಾಡು ಸರ್ಕಾರ ಜಯಲಲಿತಾ ಅವರ ಸಾವಿನ ತನಿಖೆ ನಡೆಸಲು ಕೆಲವು ದಿನಗಳ ಹಿಂದೆ ತನಿಖಾ ಆಯೋಗವನ್ನು ರಚಿಸಿದೆ. ಆದರೆ, ತನಿಖೆಯೇ ಇನ್ನು ಆರಂಭವಾಗಿಲ್ಲ ಎಂದು ಟೀಕಿಸಿದ್ದಾರೆ.