ಚೆನ್ನೈನಲ್ಲಿ ಒಟ್ಟು ಸಿಕ್ಕಿದ್ದು 170 ಕೋಟಿ ನಗದು, 130 ಕೆಜಿ ಚಿನ್ನ
ಚೆನ್ನೈನಲ್ಲಿ ಡಿಸೆಂಬರ್ 8ರಂದು ನಡೆದ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಒಟ್ಟಾರೆ ಸಿಕ್ಕಿದ್ದು 170 ಕೋಟಿ ನಗದು ಹಾಗೂ 130 ಕೆ.ಜಿ. ಚಿನ್ನ.
ಚೆನ್ನೈ, ಡಿಸೆಂಬರ್ 9: ಗುರುವಾರ ಚೆನ್ನೈನ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸಿಕ್ಕಿದ್ದು ಒಟ್ಟು 170 ಕೋಟಿ ನಗದು, 130 ಕೆಜಿ ಚಿನ್ನ ಎಂದು ಶುಕ್ರವಾರ ಘೋಷಣೆ ಮಾಡಲಾಗಿದೆ. ನಗದು ಮೊತ್ತದಲ್ಲಿ ಹೊಸ ಹಾಗೂ ಹಳೇ ನೋಟು ಎರಡೂ ಸಿಕ್ಕಿವೆ.
ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಮಂಡಳಿ ಸದ್ಯರೊಬ್ಬರ ಮನೆ-ಕಚೇರಿ ಮೇಲೆ ಕೂಡ ದಾಳಿ ನಡೆದಿದೆ. ಒಟ್ಟು ಮೂವರ ಮನೆ-ಕಚೇರಿ ಮೇಲೆ ದಾಳಿ ನಡೆದಿತ್ತು. ಶೇಖರ್ ರೆಡ್ಡಿ ಎಂಬುವರು ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನ ರಾಜಕಾರಣಿಗಳು, ಅಧಿಕಾರಿಗಳಿಗೆ ಹತ್ತಿರದವರು. ಶ್ರೀನಿವಾಸ್ ರೆಡ್ಡಿ, ಪ್ರೇಮ್ ಇತರ ಇಬ್ಬರು.[ಚೆನ್ನೈನಲ್ಲಿ ಐಟಿ ದಾಳಿ, 100 ಕೆ.ಜಿ. ಚಿನ್ನ, 90 ಕೋಟಿ ನಗದು ವಶಕ್ಕೆ]
ಈ ಮೂವರು ನೋಟು ಬದಲಾವಣೆಯ ಜಾಲದ ಭಾಗವಾಗಿದ್ದರು. ಈ ಎಲ್ಲ ಮೊತ್ತ ಹಾಗೂ ಚಿನ್ನವು ಎಂಟು ವಿವಿಧ ಸ್ಥಳಗಳಲ್ಲಿ ನಡೆದ ದಾಳಿ ವೇಳೆ ಸಿಕ್ಕಿವೆ. ಈ ಮೂವರಿಗೆ ಸೇರಿದ ಕಚೇರಿ, ಮನೆ, ಮಳಿಗೆಗಳ ಮೇಲೆ ಗುರುವಾರ ದಾಳಿ ನಡೆದಿತ್ತು. ಶೇಖರ್ ರೆಡ್ಡಿಗೆ ಜಾಲದೊಂದಿಗೆ ನಂಟಿದೆ ಎಂದು ಸಾಬೀತಾದರೆ ಟಿಟಿಡಿಯಿಂದ ತೆಗೆದುಹಾಕಲಾಗುವುದು ಎಂದು ಆಂಧ್ರ ಸರಕಾರದ ಮೂಲಗಳು ತಿಳಿಸಿವೆ.[ಕೋಟ್ಯಂತರ ರುಪಾಯಿ ನೋಟು ಬದಲಾವಣೆ ದಂಧೆ ನಡೆದದ್ದು ಹೀಗೆ]
ಮೊದಲಿಗೆ 90 ಕೋಟಿ ಹಣ ಹಾಗೂ 100 ಕೆಜಿ ಚಿನ್ನ ಸಿಕ್ಕಿದೆ ಎಂದು ತಿಳಿಸಲಾಗಿತ್ತು. ಮತ್ತೆ ಲೆಕ್ಕ ಹಾಕುವಾಗ ಆ ಅಂಕಿ ಹೆಚ್ಚಾಗಿದೆ. ನೋಟು ರದ್ದು ನಿರ್ಧಾರ ಪ್ರಕಟಿಸಿದ ಒಂದು ತಿಂಗಳಿಗೆ ಈ ದಾಳಿ ನಡೆದಿದೆ. ಈ ವರೆಗಿನ ಆದಾಯ ತೆರಿಗೆ ಇಲಾಖೆಯ ಅತಿ ದೊಡ್ಡ ದಾಳಿ ಇದಾಗಿದೆ.