ಮೆಟ್ಟೂರು ಜಲಾಶಯದಿಂದ ನೀರು ಬಿಟ್ಟ ತಮಿಳುನಾಡು
ಚೆನ್ನೈ, ಸೆ.20: ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕಕ್ಕೆ ಮೇಲುಸ್ತುವಾರಿ ಸಮಿತಿ ಆದೇಶಿಸಿದೆ. ಅಂತಿಮ ತೀರ್ಪು ಇನ್ನೂ ಹೊರಬಿದ್ದಿಲ್ಲ. ಆದರೆ, ಈಗಾಗಲೇ ಕೆಆರ್ ಎಸ್ ನಿಂದ ಹತ್ತಾರು ಟಿಎಂಸಿ ಅಡಿಗಟ್ಟಲೇ ನೀರು ಮೆಟ್ಟೂರು ಡ್ಯಾಂ ತಲುಪಿದೆ. ಇದರ ಪರಿಣಾಮವಾಗಿ ತಮಿಳುನಾಡಿನ ರೈತರಿಗೆ ಯಥೇಚ್ಛವಾಗಿ ನೀರು ಸಿಗುತ್ತಿದೆ.
ಸೆಪ್ಟೆಂಬರ್ 6 ರಿಂದ ಕರ್ನಾಟಕದ ಕೃಷ್ಣರಾಜಸಾಗರ, ಕಬಿನಿ ಅಣೆಕಟ್ಟಿನಿಂದ ಮೆಟ್ಟೂರು ಅಣೆಕಟ್ಟಿಗೆ ಕಾವೇರಿ ನೀರು ಹರಿಸಲು ಕರ್ನಾಟಕ ಸರ್ಕಾರ ಮುಂದಾದ ಬಳಿಕ ತಮಿಳುನಾಡು ಸರ್ಕಾರ ಈಗ ಅಲ್ಲಿನ ರೈತರಿಗೆ ನೀರನ್ನು ಒದಗಿಸಿದೆ. ಸ್ಟ್ಯಾನ್ಲಿ ಜಲಾಶಯದಿಂದ ಮಂಗಳವಾರ ನೀರು ಹರಿದಿದೆ. [ಸೆ. 21ರಿಂದ 30ರ ವರೆಗೆ ಕಾವೇರಿ ನೀರು ಬಿಡಿ: ಶಶಿಶೇಖರ್]

ಸಾಮಾನ್ಯವಾಗಿ ಜೂನ್ 12 ರಂದು ಪ್ರತಿ ವರ್ಷ ನೀರು ಹರಿಸಲಾಗುತ್ತಿತ್ತು. ಆದರೆ, ಈ ಬಾರಿ ನೀರಿನ ಕೊರತೆ, ಬರಗಾಲದ ಹಿನ್ನಲೆಯಲ್ಲಿ ನೀರು ಬಿಡುವುದು ತಡವಾಗಿದೆ. ಮೆಟ್ಟೂರು ಜಲಾಶಯದಿಂದ ಗದ್ದೆಗಳಿಗೆ ನೀರು ಹರಿಸುವ ಕಾರ್ಯಕ್ರಮದಲ್ಲಿ ಐವರು ಸಚಿವರು ಪಾಲ್ಗೊಂಡಿದ್ದರು. ಎಡಪ್ಪಡಿ ಕೆ ಪಳನಿಸ್ವಾಮಿ, ಪಿ ತಂಗಮಣಿ, ವಿ ಸರೋಜಾ, ಕೆಸಿ ಕರ್ಪನ್ನನ್, ಎಂಆರ್ ವಿಜಯಭಾಸ್ಕರ್ ಅವರು ಗೇಟ್ ಓಪನ್ ಮಾಡಿದರು.
1934ರಿಂದ ಕಾರ್ಯನಿರ್ವಹಿಸುತ್ತಿರುವ ಮೆಟ್ಟೂರು ಜಲಾಶಯ 83ನೇ ವಾರ್ಷಿಕ ನೀರು ಹರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ರೈತರಿಗೆ ಹರ್ಷ ತಂದಿದೆ. ಮೆಟ್ಟೂರು ಡ್ಯಾಂನಿಂದ ಮೊದಲಿಗೆ 2,000 ಕ್ಯೂಸೆಕ್ಸ್ ನೀರು ಹರಿಸಲಾಯಿತು ನಂತರ ಸಂಜೆ ವೇಳೆಗೆ 12,000 ಕ್ಯೂಸೆಕ್ಸ್ ಬಿಡಲಾಗುತ್ತದೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.
ಮಂಗಳವಾರ ಅಣೆಕಟ್ಟಿನಲ್ಲಿ 87.88 ಅಡಿ ನೀರಿನ ಮಟ್ಟವಿತ್ತು. 120 ಅಡಿ ಗರಿಷ್ಠ ಮಟ್ಟ ಹೊಂದಿದೆ. ಸ್ಟೋರೆಜ್ ಪ್ರಮಾಣ 50.39 ಟಿಎಂಸಿ(ಪೂರ್ತಿ ಪ್ರಮಾಣ 93.47 ಟಿಎಂಸಿ). ಒಳ ಹರಿವು 10,092 ಕ್ಯೂಸೆಕ್ಸ್ ನಷ್ಟಿದೆ.











Click it and Unblock the Notifications