Breaking: ಕೊಯಮತ್ತೂರು ಕ್ಷೇತ್ರದಿಂದ ಕಮಲ್ ಹಾಸನ್ ನಾಮಪತ್ರ
ಚೆನ್ನೈ, ಮಾರ್ಚ್ 15: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ಹಾಗೂ ಮಕ್ಕಳ ನೀಧಿಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ಸೋಮವಾರ ಅಧಿಕೃತವಾಗಿ ಅಖಾಡಕ್ಕೆ ಇಳಿಸಿದ್ದಾರೆ.
ತಮಿಳುನಾಡಿನ ದಕ್ಷಿಣ ಕೋಯಂತ್ತೂರು ವಿಧಾನಸಭಾ ಕ್ಷೇತ್ರದಿಂದ ಮಕ್ಕಳ ನೀಧಿಮಯ್ಯಂ ಪಕ್ಷದ ಅಭ್ಯರ್ಥಿಯಾಗಿ ಕಮಲ್ ಹಾಸನ್ ನಾಮಪತ್ರ ಸಲ್ಲಿದ್ದಾರೆ. ಅಖಿಲ ಭಾರತ ದ್ರಾವಿಡ ಮುನ್ನೇತ್ರ ಕಾಳಗಂ(ಎಐಎಡಿಎಂಕೆ) ಭದ್ರಕೋಟೆಯಲ್ಲಿ ಪಕ್ಷಕ್ಕೆ ನೆಲೆ ಒದಗಿಸಲು ಕಮಲ್ ಹಾಸನ್ ಮುಂದಾಗಿದ್ದಾರೆ.
ತಮಿಳುನಾಡಿನಲ್ಲಿ ನಟ ಕಮಲ್ ಹಾಸನ್ ಕಾರಿನ ಮೇಲೆ ಅಪರಿಚಿತರಿಂದ ದಾಳಿ ಯತ್ನ
ಕಳೆದ 2016ರಲ್ಲಿ ಇದೇ ಕೋಯಂತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎಐಎಡಿಎಂಕೆ ಪಕ್ಷದಿಂದ ಸ್ಪರ್ಧಿಸಿದ ಅರ್ಜುನನ್ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಯೂರ್ ಜಯಕುಮಾರ್ ವಿರುದ್ಧ ಜಯ ಸಾಧಿಸಿದ್ದ ಎಐಎಡಿಎಂಕೆ ಅಭ್ಯರ್ಥಿ ಅರ್ಜುನನ್ ಅವರು ಶೇ.38.94ರಷ್ಟು ಮತ ಗಳಿಸಿದ್ದರು.
ಕಮಲ್ ಹಾಸನ್ ನಾಮಪತ್ರ ಸಲ್ಲಿಕೆ ಮುನ್ನ ದಿನ ದಾಳಿ ಯತ್ನ:
ತಮಿಳುನಾಡು ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ನಟ ಹಾಗೂ ಮಕ್ಕಳ ನೀಧಿಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ಕಾರಿನ ಮೇಲೆ ಅಪರಿಚಿತರು ದಾಳಿ ನಡೆಸಿದ ಘಟನೆ ಭಾನುವಾರ ರಾತ್ರಿ 11.14ರ ವೇಳೆಗೆ ನಡೆದಿತ್ತು. ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಗಾಂಧಿ ರಸ್ತೆಯಲ್ಲಿ ಕಮಲ್ ಹಾಸನ್ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಅಡ್ಡಗಟ್ಟಿದ ಅಪರಿಚಿತರು ಕಾರಿನ ಗ್ಲಾಸ್ ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಕಾರಿಗೆ ಯಾವುದೇ ರೀತಿ ಧಕ್ಕೆ ಆಗಿಲ್ಲ. ಈ ಸಂಬಂಧ ಇನ್ನೂ ಎಫ್ಐಆರ್ ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
ರಾಜ್ಯದ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನವನ್ನು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಏಪ್ರಿಲ್.06ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ.02ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.