ಅರ್ನಬ್ಗೆ ದಾಳಿ ಬಗ್ಗೆ ಗೌಪ್ಯ ಮಾಹಿತಿ ಸಿಗಲು ಮೋದಿಯೇ ಕಾರಣ; ರಾಹುಲ್ ಗಾಂಧಿ
ಚೆನ್ನೈ, ಜನವರಿ 25: ರಿಪಬ್ಲಿಕ್ ಟಿ.ವಿ. ಮಾಲೀಕ ಅರ್ನಬ್ ಗೋಸ್ವಾಮಿಗೆ ಪುಲ್ವಾಮಾ ದಾಳಿ ಕುರಿತು ಮೊದಲೇ ಮಾಹಿತಿ ಸೋರಿಕೆಯಾಗಲು ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯ ಪ್ರಚಾರದ ಸಲುವಾಗಿ ರಾಹುಲ್ ಗಾಂಧಿ ತಮಿಳುನಾಡಿಗೆ ಮೂರು ದಿನದ ಪ್ರವಾಸದಲ್ಲಿದ್ದಾರೆ.
ತಮ್ಮ ಪ್ರವಾಸದ ಅಂತಿಮ ದಿನವಾದ ಸೋಮವಾರ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಒಳಗೊಂಡಂತೆ ಐವರಿಗೆ ಮಾತ್ರ ದೇಶದ ಸೇನಾ ಯೋಜನೆಗಳ ಕುರಿತು ರಹಸ್ಯ ಮಾಹಿತಿ ಇರುತ್ತದೆ. ಪುಲ್ವಾಮಾ ದಾಳಿ ಕುರಿತು ಈ ಐದು ಜನರಲ್ಲಿ ಮಾತ್ರ ಮಾಹಿತಿ ಇರಬೇಕಿತ್ತು. ಆದರೆ ದಾಳಿ ನಡೆಯುವ ಮೂರು ದಿನಗಳ ಹಿಂದೆಯೇ ಒಬ್ಬ ಪತ್ರಕರ್ತನಿಗೆ ಈ ಮಾಹಿತಿ ಸಿಗುತ್ತದೆ ಎಂದರೆ ಏನರ್ಥ?" ಎಂದು ಪ್ರಶ್ನಿಸಿದ್ದಾರೆ.

"ಪ್ರಧಾನಿ, ರಕ್ಷಣಾ ಸಚಿವ, ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ವಾಯುಪಡೆಯ ಮುಖ್ಯಸ್ಥ, ಗೃಹ ಸಚಿವರಿಗೆ ಈ ರಹಸ್ಯ ಮಾಹಿತಿ ಇರುತ್ತದೆ. ಇವರ ಹೊರತಾಗಿ ಯಾರಿಗೂ ತಿಳಿಯುವಂತಿಲ್ಲ. ಇಷ್ಟಾದರೂ ಮಾಹಿತಿ ಸೋರಿಕೆಯಾಗಿದೆ. ಆದರೆ ಈ ಬಗ್ಗೆ ಅರ್ನಬ್ ಗೋಸ್ವಾಮಿ ವಿರುದ್ಧ ಏಕೆ ತನಿಖೆ ಆರಂಭಿಸಿಲ್ಲ ಎನ್ನುವುದೇ ದೊಡ್ಡ ಪ್ರಶ್ನೆ. ಇದಕ್ಕೆ ಕಾರಣ, ಈ ಐವರಲ್ಲಿ ಒಬ್ಬರು ಈ ವಿಷಯವನ್ನು ಅರ್ನಬ್ ಗೆ ತಿಳಿಸಿರುವುದು" ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಕೂಡಲೇ ತನಿಖೆ ಆರಂಭಿಸಲಿ, ಈ ಐವರಲ್ಲಿ ಯಾರು ಈ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದರು ಎಂಬುದೂ ಹೊರಬರಲಿ ಎಂದು ಆಗ್ರಹಿಸಿದರು.
ಈಚೆಗೆ ರಿಪಬ್ಲಿಕ್ ಟಿ.ವಿ. ಮಾಲೀಕ ಅರ್ನಬ್ ಗೋಸ್ವಾಮಿ ಹಾಗೂ ಬಾರ್ಕ್ ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಅವರ ನಡುವಿನ ವಾಟ್ಸಾಪ್ ಚಾಟ್ ಸೋರಿಕೆಯಾಗಿದ್ದು, ಅದರಲ್ಲಿ ವೈಮಾನಿಕ ದಾಳಿ ಮಾದರಿಯ ದೊಡ್ಡ ದಾಳಿ ನಡೆಯಬಹುದು ಎಂದು ಅರ್ನಬ್ ಉಲ್ಲೇಖಿಸಿದ್ದರು.












Click it and Unblock the Notifications