'ಎರಡೆಲೆ ಚಿನ್ಹೆ' ನಮಗೆ ಕೊಡಿ, ಚುನಾವಣಾ ಆಯೋಗಕ್ಕೆ 3,10,000 ಅಫಿಡವಿಟ್!
ನವದೆಹಲಿ, ಜೂನ್ 12: ತಮಿಳುನಾಡು ರಾಜಕಾರಣವೇ ಹಾಗೆ ಅಲ್ಲಿ ನಗೆ ಉಕ್ಕುವ ಸನ್ನಿವೇಶಗಳಿಗೆ ಬರವೇ ಇಲ್ಲ. ಎಐಎಡಿಎಂಕೆಯ ಎರಡು ಬಣಗಳ ಜತೆ ಮಾತುಕತೆ ಮುರಿದು ಬೀಳುತ್ತಿದ್ದಂತೆ ಎರಡೆಲೆ ಚಿನ್ಹೆ ನಮಗೇ ಕೊಡಿ ಎಂದು ಮುಖ್ಯಮಂತ್ರಿ ಇ ಪಳನಿಸ್ವಾಮಿ ಬೆಂಬಲಿಗರು ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.
ಆದರೆ ಇದಕ್ಕೆ ಅವರು ಬಳಸಿರುವ ಮಾರ್ಗ ಮಾತ್ರ ನಗು ತರಿಸುತ್ತಿದೆ. ಬರೋಬ್ಬರಿ 3,10,000 ಅಫಿಡವಿಟ್ ಗಳನ್ನು 4 ಟ್ರಕ್ ಗಳಲ್ಲಿ ತುಂಬಿ ತಮಿಳುನಾಡು ಕಾನೂನು ಸಚಿವ ಸಿವಿ ಶಣ್ಮುಗನ್ ಚುನಾವಣಾ ಆಯೋಗದ ಕಚೇರಿಗೆ ಸೋಮವಾರ ಭೇಟಿ ನೀಡಿದ್ದಾರೆ. ಇವರ ಅಫಿಡವಿಟ್ ಗಳನ್ನು ನೋಡಿ ಚುನಾವಣಾ ಆಯೋಗದ ಅಧಿಕಾರಿಗಳು ಸುಸ್ತು ಬೀಳುವುದೊಂದು ಬಾಕಿ.

ಈ ಅಫಿಡವಿಟ್ ಗಳಲ್ಲಿ ಇ ಪಳನಿಸ್ವಾಮಿಗೆ ಬೆಂಬಲ ಸೂಚಿಸಿ ಕಾರ್ಯಕರ್ತರು ಹಾಕಿರುವ ಸಹಿಗಳಿವೆ ಎನ್ನಲಾಗಿದೆ. ಮಾತ್ರವಲ್ಲ ತಮಗೆ 123 ಶಾಸಕರ ಬೆಂಬಲವಿದೆ ಎಂದು ಪಳನಿಸ್ವಾಮಿ ಪ್ರತಿಪಾದಿಸಿದ್ದಾರೆ.
ವಿಲೀನ ಪ್ರಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ತಾವು ರಚಿಸಿದ್ದ ಸಮಿತಿಯನ್ನು ವಿಸರ್ಜನೆ ಮಾಡುತ್ತಿದ್ದಂತೆ ಪಳನಿಸ್ವಾಮಿ ಬಣದ ಸದಸ್ಯರು ಈ ನಡೆ ಅನುಸರಿಸಿದ್ದಾರೆ.
ನಮಗೆ ಪಕ್ಷದ ಕಾರ್ಯಕರ್ತರ ಬೆಂಬಲವಿದೆ. ನಾವು ಎರಡೆಲೆ ಗುರುತು ಪಡೆದೇ ಪಡೆಯುತ್ತೇವೆ ಎಂದು ಪಳನಿಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications