'ವಿಚಾರಣೆ ಎದುರಿಸಿ': ದಯಾನಿಧಿ ಮಾರನ್ಗೆ ಸುಪ್ರೀಂ ಸೂಚನೆ
ಚೆನ್ನೈ, ಜುಲೈ 30: ಮನೆಯಲ್ಲಿಯೇ ಅಕ್ರಮವಾಗಿ ದೂರವಾಣಿ ವಿನಿಮಯ ಕೇಂದ್ರ ನಿರ್ಮಿಸಿಕೊಂಡಿದ್ದ ಆರೋಪ ಎದುರಿಸುತ್ತಿರುವ ದೂರಸಂಪರ್ಕ ಖಾತೆಯ ಮಾಜಿ ಸಚಿವ ದಯಾನಿಧಿ ಮಾರನ್ ಅವರು ವಿಚಾರಣೆ ಎದುರಿಸಲೇಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಸೂಚಿಸಿದೆ.
2004-06ರ ಅವಧಿಯಲ್ಲಿ ದೂರಸಂಪರ್ಕ ಖಾತೆ ಸಚಿವರಾಗಿದ್ದ ದಯಾನಿಧಿ ಮಾರನ್, ಚೆನ್ನೈನ ತಮ್ಮ ನಿವಾಸದಲ್ಲಿ ಅಕ್ರಮವಾಗಿ ದೂರವಾಣಿ ವಿನಿಮಯ ಕೇಂದ್ರ ಸ್ಥಾಪಿಸಿದ್ದರು. ಇದರಿಂದ ಸರ್ಕಾರಕ್ಕೆ 1.78 ಕೋಟಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ರಾಜ್ಯದಲ್ಲಿನ ಬಿಎಸ್ಎನ್ಎಲ್ ಅಧಿಕಾರಿಗಳ ನೆರವಿನಿಂದ 300 ಹೈಸ್ಪೀಡ್ ದೂರವಾಣಿ ಸಂಪರ್ಕಗಳ ವಿನಿಮಯ ಕೇಂದ್ರ ಸ್ಥಾಪಿಸಿಕೊಂಡಿದ್ದ ಮಾರನ್, ಅದನ್ನು ತಮ್ಮ ಮಾಲೀಕತ್ವದ ಸನ್ ಟಿವಿಯ ವ್ಯಾವಹಾರಿಕ ಚಟುವಟಿಕೆಗಳು ಹಾಗೂ ಮಾಹಿತಿ ರವಾನೆಗಾಗಿ ಬಳಸಿಕೊಂಡಿದ್ದರು.

ನಿಮ್ಮ ಸಹೋದರನ ಟಿವಿ ವಾಹಿನಿಗೆ ದೂರವಾಣಿ ಸಂಪರ್ಕವನ್ನು ಅಕ್ರಮವಾಗಿ ಬಳಸಿಕೊಂಡಿದ್ದೀರಿ ಎಂದು ಆರೋಪಿಸಲಾಗಿದೆ. ನೀವು ವಿಚಾರಣೆ ಎದುರಿಸಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿತು.
ದಯಾನಿಧಿ ಮತ್ತು ಕಲಾನಿಧಿ ಮಾರನ್ ಸಹೋದರರ ವಿರುದ್ಧದ ಆರೋಪವನ್ನು ಸಿಬಿಐ ಕೋರ್ಟ್ ಮಾರ್ಚ್ನಲ್ಲಿ ಕೈಬಿಟ್ಟಿತ್ತು. ಆದರೆ, ಇದನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತ್ತು. ಮದ್ರಾಸ್ ಹೈಕೋರ್ಟ್ನ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.












Click it and Unblock the Notifications