ಟಿಸಿಎಸ್ ಟೆಕ್ಕಿ ಹತ್ಯೆ, ನಾಲ್ವರ ಬಂಧನ, ಯುಎವಿ ಬಳಕೆ
ಚೆನ್ನೈ, ಫೆ.25: ನಾಪತ್ತೆಯಾಗಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಸಂಸ್ಥೆ ಮಹಿಳಾ ಉದ್ಯೋಗಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣ ತಮಿಳುನಾಡಿನ ಅಸೆಂಬ್ಲಿಯಲ್ಲೂ ಭಾರಿ ಗದ್ದಲ ಉಂಟು ಮಾಡಿದೆ.
ಚೆನ್ನೈ ನಗರದಲ್ಲಿ ಕಳೆದ ಶನಿವಾರ 23 ವರ್ಷದ ಮಹಿಳಾ ಉದ್ಯೋಗಿ ಉಮಾ ಮಹೇಶ್ವರಿ ಅವರ ಶವ ಪತ್ತೆಯಾಗಿತ್ತು, ಪ್ರಾಥಮಿಕ ತನಿಖೆ ನಂತರ ಕೊಲೆ ನಡೆದಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದ್ದರು. ಆದರೆ, ಈ ಬಗ್ಗೆ ತನಿಖೆ ವಿಳಂಬವಾಗುತ್ತಿದೆ ಎಂದು ಮೃತ ಉಮಾ ಅವರ ತಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ವಿಷಯ ಮುಖ್ಯಮಂತ್ರಿ ಜಯಲಲಿತಾ ಅವರ ಕಿವಿಗೂ ಬಿದ್ದಿತು.
ನಂತರ ಅಸೆಂಬ್ಲಿಯಲ್ಲಿ ಈ ಬಗ್ಗೆ ಚರ್ಚೆಯಾಗಿ ವಿಶೇಷ ತಂಡ ರಚಿಸಲಾಯಿತು. ಚೆನ್ನೈನ ಕ್ರೈಂ ಬ್ರ್ಯಾಂಚ್ ಪೊಲೀಸರು ವಿಶೇಷ ಮುತುವರ್ಜಿ ವಹಿಸಿ 6 ತಂಡಗಳನ್ನು ರಚಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆ ಸಂದರ್ಭದಲ್ಲಿ ಇಡೀ ದೇಶದಲ್ಲೇ ಪ್ರಪ್ರಥಮ ಬಾರಿಗೆ Unmanned Aerial Vehicle (UAV) ಸಾಧನವನ್ನು ಬಳಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಮಂಗಳವಾರ(ಫೆ.25) ನಾಲ್ವರು ಶಂಕಿತರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ವಿವರ ಮುಂದೆ...

ಚೆನ್ನೈ ಪೊಲೀಸರಿಂದ ಯುಎವಿ ಸಾಧನ ಬಳಕೆ
ಹಿಂದಿ ಚಿತ್ರ 3 ಈಡಿಯಟ್ಸ್ ಚಿತ್ರವನ್ನು ನೋಡಿದವರಿಗೆ Unmanned Aerial Vehicle (UAV) ಸಾಧನ ಬಗ್ಗೆ ಸ್ಥೂಲ ಚಿತ್ರಣ ಸಿಗುತ್ತದೆ. ಅಮೀರ್ ಖಾನ್ ಕ್ಯಾಂಪಸ್ಸಿನಲ್ಲಿ ಇದೇ ರೀತಿ ಸಾಧನ ಬಳಸುವಾಗ ಸಹಪಾಠಿಯೊಬ್ಬ ನೇಣುಬಿಗಿದುಕೊಂಡಿರುವುದು ಕಾಣಿಸುತ್ತದೆ.
ಇಲ್ಲಿ ಚೆನ್ನೈನ ಸಿಬಿ-ಸಿಐಡಿ ತಂಡ ಇದೇ ಸಾಧನ ಬಳಸಿ ಚೆನ್ನೈನ ಐಟಿ ಕಾರಿಡಾರ್ ನಲ್ಲಿ ಸುತ್ತಾಡಿ ಮಹತ್ವದ ಸುಳಿವು ಪತ್ತೆ ಮಾಡಿದ್ದಾರೆ. 1.5 ಕೆಜಿ ತೂಕದ ಯುಎಇ ಸಾಧನ ಬಳಸಿದ ನಂತರ ಸುಧಾರಿತ 10 ಕೆಜಿ ತೂಕದ ಮತ್ತೊಂದು ಸಾಧನ ಬಳಸಲಾಗಿದೆ ಎಂದು ತಿಳಿದು ಬಂದಿದೆ. ಸುಮಾರು 1 ಚದರ ಕಿ.ಮೀ ವ್ಯಾಪ್ತಿ ತನಕ ಹುಡುಕಾಟ ನಡೆಸಲಾಯಿತು. ಸತತ 6 ಗಂಟೆಗಳ ಕಾಲ ಸುಳಿವಿಗಾಗಿ ಸರ್ಚ್ ಆಪರೇಷನ್ ಜಾರಿಯಲ್ಲಿತ್ತು ಎಂದು ಪೊಲೀಸರಿಗಾಗಿ ಸಾಧನವನ್ನು ಚಾಲನೆ ಮಾಡಿದ ಎಂಐಟಿ ವಿದ್ಯಾರ್ಥಿ ಹೇಳಿದ್ದಾನೆ.

ಟಿಸಿಎಸ್ ಸಹದ್ಯೋಗಿಗಳ ವಿಚಾರಣೆ
ಟಿಸಿಎಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಮಾ ಅವರ ಸಾವಿನ ನಂತರ ಐಟಿ ಕಾರಿಡಾರ್ ನ ಟೆಕ್ಕಿಗಳಲ್ಲಿ ಭಯ, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಚೆನ್ನೈ ಪೊಲೀಸ್ ಕ್ರೈಂ ಬ್ರ್ಯಾಂಚ್ ಸಿಬಿ-ಸಿಐಡಿ ತಂಡ ಉಮಾ ಅವರ ಸಹದ್ಯೋಗಿಗಳನ್ನು ವಿಚಾರಣೆ ನಡೆಸಿದ ಬಳಿಕ, ಉಮಾ ಅವರ ಸಹದ್ಯೋಗಿ ಒಬ್ಬನನ್ನು ಪ್ರಮುಖ ಶಂಕಿತನಾಗಿ ಪರಿಗಣಿಸಿದ್ದಾರೆ. ಆತನ ಮೊಬೈಲ್ ನಿಂದ ಫೆ.13(ಉಮಾ ನಾಪತ್ತೆಯಾದ ದಿನ) ರಂದು ಉಮಾಗೆ ಮೆಸೇಜ್ ಹೋಗಿದೆ. ಅವಶ್ಯ ಬಿದ್ದರೆ ಟಿಸಿಎಸ್ ನ ಅನೇಕ ಉದ್ಯೋಗಿಗಳನ್ನು ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಬೇಕಾಗುತ್ತದೆ. ವಿಚಾರಣೆ ಜಾರಿಯಲ್ಲಿದ್ದು, ಇನ್ನಷ್ಟು ಶಂಕಿತರು ಸಿಗುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.

ಉಮಾ ಮೊಬೈಲ್ ಫೋನ್ ಗಾಗಿ ಹುಡುಕಾಟ
ಟೆಕ್ಕಿ ಉಮಾ ನಿಗೂಢ ಸಾವಿನ ಪ್ರಕರಣದಲ್ಲಿ ಮೊಬೈಲ್ ಫೋನ್ ಮಹತ್ವದ ಪಾತ್ರವಹಿಸುವ ಸಾಧ್ಯತೆಯಿದೆ. ಫೆ.13 ರಂದು ಸಹದ್ಯೋಗಿಯ ಮೆಸೇಜ್ ಬಂದ ಮೇಲೆ ಆಕೆ ಕಚೇರಿಯಿಂದ ಹೊರ ಬಿದ್ದಿದ್ದಾಳೆ ಹಾಗೂ ಮೊಬೈಲ್ ಸ್ವಿಚ್ ಆಫ್ ಆಗಿದೆ, ಆಕೆ ನಾಪತ್ತೆಯಾಗಿದ್ದಾಳೆ. ಫೆ.23 ರಂದು ಉಮಾ ಶವದ ಬಳಿ ಮೊಬೈಲ್ ಫೋನ್ ಪತ್ತೆಯಾಗಿಲ್ಲ.
ಆಕೆ ಮೊಬೈಲ್ ಗೆ ಕೊನೆಯ ಬಾರಿಗ ಬಂದಿರುವ ಸಂದೇಶ ಹಾಗೂ ಕರೆಯ ಮಾಹಿತಿ ಪಡೆದುಕೊಂಡು ಸೈಬರ್ ಪೊಲೀಸರ ನೆರವನ್ನು ಸಿಬಿ-ಸಿಐಡಿ ತಂಡ ಪಡೆದುಕೊಳ್ಳುತ್ತಿದೆ. ಆದರೆ, ಆಕೆ ಮೊಬೈಲ್ ಫೋನ್ ಸಿಕ್ಕರೆ ಅನೇಕ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ.

ಇದೇ ರೀತಿ ಟೆಕ್ಕಿಗಳ ದುರಂತ ಅಂತ್ಯಗಳು
ಟಿಸಿಎಸ್ ಸಾಫ್ಟ್ ವೇರ್ ಇಂಜಿನಿಯರ್ ಏಸ್ತರ್ ಅನೂಹ್ಯ (23) ಅವರ ಅರೆ ಬೆಂದ ದೇಹವು ಮುಂಬೈನ ಈಸ್ಟರ್ನ್ ಎಕ್ಸ್ ಪ್ರೆಸ್ ಹೈವೆ ಬಳಿ ಕಂಜೂರಮಾರ್ಗ್ ನಲ್ಲಿ ನಿರ್ಜನ ಪ್ರದೇಶದಲ್ಲಿ ದೊರೆತ್ತಿತ್ತು. [ವಿವರ ಇಲ್ಲಿದೆ]
* ಕೆಲಸದ ಒತ್ತಡ ಹೆಚ್ಚಾಗುತ್ತಿದ್ದಂತೆ ಮಾನಸಿಕವಾಗಿ ಹೆಚ್ಚಾಗಿ ಬಳಲುತ್ತಿದ್ದ 32 ವರ್ಷದ ಮೃದಲ್ ಸ್ನೇಹಿ ಎಂಬ ಟಿಸಿಎಸ್ ಟೆಕ್ಕಿಯೊಬ್ಬ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಕೆಲ ದಿನಗಳಲ್ಲೆ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. [ವಿವರ ಇಲ್ಲಿ ಓದಿ]* ಆಂಧ್ರಪ್ರದೇಶ ಮೂಲದ ನೀಲಿಮಾ ಯೆರುವಾ (27) ಎಂಬ ಇನ್ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆಗೆ ಸೇರಿದ ಉದ್ಯೋಗಿಯೊಬ್ಬರು ಕ್ಯಾಂಪಸ್ ನಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದರು.ಚೆನ್ನೈನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಸಿರುಚ್ಚೇರಿಯಲ್ಲಿರುವ ಐಟಿ ಪಾರ್ಕ್ ನಲ್ಲಿ ಟಿಸಿಎಸ್ ಸಂಸ್ಥೆ ಕಚೇರಿ ಹೊಂದಿದೆ. ಉಮಾ ಅವರ ಸಾವಿನಿಂದ ಸಹಜವಾಗಿ ಅವರ ಸಹದ್ಯೋಗಿಗಳಿಗೂ ಆತಂಕ, ದುಃಖ, ನೋವು ಉಂಟಾಗಿದೆ
ಎಚ್ಚೆತ್ತುಕೊಂಡ ತಮಿಳುನಾಡು ಸರ್ಕಾರ
ಫೆ.13ರಂದು ನಾಪತ್ತೆಯಾಗಿದ್ದ ಸೇಲಂ ಮೂಲದ ಉಮಾ ಬಗ್ಗೆ ಆಕೆ ತಂದೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ, ಫೆ.23 ರಂದು SIPCOT ಐಟಿ ಪಾರ್ಕ್ ಬಳಿ ಆಕೆ ಶವವಾಗಿ ಪತ್ತೆಯಾಗಿದ್ದಳು. ತನಿಖೆ ಆಮೆಗತಿಯಲ್ಲಿ ಸಾಗಿತ್ತು., ವಿಷಯ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾಗೆ ತಲುಪಿ ಪ್ರಕರಣವನ್ನು ಸಿಬಿ-ಸಿಐಡಿಗೆ ವಹಿಸಿದರು.
ತನಿಖೆ ವಿಳಂಬವಾಗಿರುವುದನ್ನು ಒಪ್ಪಿಕೊಂಡಿರುವ ರೇಂಜ್ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಸತ್ಯಮೂರ್ತಿ, ಒಬ್ಬ ಇನ್ಸ್ ಪೆಕ್ಟರ್ ಅಮಾನತು ಮಾಡಿದ್ದೇವೆ. ತನಿಖೆ ಚುರುಕುಗೊಳಿಸದಿರುವುದು ಕರ್ತವ್ಯ ಲೋಪವಾಗಿದೆ. 6 ವಿಶೇಷ ತಂಡ ಸಿಬಿ-ಸಿಐಡಿ ಜತೆಗೆ ಸಹಕರಿಸುತ್ತಿದೆ. ಎಂದಿದ್ದಾರೆ.

ಟಿಸಿಎಸ್ ಸಂಸ್ಥೆಯಿಂದ ಪೂರ್ಣ ಸಹಕಾರ
* ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸರ್ಸ್ ಉಮಾ ಸಾವಿನ ಪ್ರಕರಣದ ತನಿಖೆಗೆ ಪೂರ್ಣವಾಗಿ ಸಹಕರಿಸುತ್ತಿದೆ. 'she was a good team player and was liked by all". "She was reliable and dependible," ಎಂದು ಟಿಸಿಎಸ್ HR ಹಾಗೂ ಕಂಪನಿ ಮುಖ್ಯಸ್ಥರು ಪೊಲೀಸರಿಗೆ ಉಮಾ ಬಗ್ಗೆ ಪ್ರಮಾಣಪತ್ರ ನೀಡಲಾಗಿದೆ.
* ಫೆ.24 ರಂದು SIPCOT ನಲ್ಲಿ ಸುಮಾರು 500ಕ್ಕೂ ಅಧಿಕ ಐಟಿ ಉದ್ಯೋಗಿಗಳು ಐಟಿ ಪಾರ್ಕ್ ಮುಂದೆ ಮೌನ ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
* ಉಮಾ ಸಾವಿನ ಪ್ರಕರಣದಲ್ಲಿ ಸುಳಿವು ನೀಡುವ ವ್ಯಕ್ತಿಗೆ ಸರ್ಕಾರ 2 ಲಕ್ಷ ರು ಬಹುಮಾನ ಘೋಷಿಸಿದೆ.
* ಉಮಾ ಅವರ ಅಟಾಪ್ಸಿ ವರದಿ ಬಂದಿದ್ದು ದೇಹದ ನಾಲ್ಕು ಕಡೆಗಳಲ್ಲಿ ಗಾಯಗಳಾಗಿರುವುದು ಪತ್ತೆಯಾಗಿದೆ.












Click it and Unblock the Notifications