ರಾಜಕೀಯಕ್ಕೆ ಇಳಿಯುವ ಮೊದಲೇ ಅದರಿಂದ ದೂರ ಸರಿಯುತ್ತಾರಾ ರಜನಿಕಾಂತ್?
ಚೆನ್ನೈ, ಅಕ್ಟೋಬರ್ 29: ರಾಜಕೀಯ ರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಬಯಸಿರುವ ನಟ ರಜನಿಕಾಂತ್ ಅವರಿಗೆ ಕೊರೊನಾ ವೈರಸ್ ಸೋಂಕಿನ ಸನ್ನಿವೇಶ ಹಿನ್ನಡೆಯುಂಟುಮಾಡಿದೆ. ರಾಜಕೀಯ ಸೇರ್ಪಡೆಯ ವಿಚಾರದ ಬಗ್ಗೆ ಮರುಚಿಂತನೆ ನಡೆಸುವ ಸುಳಿವನ್ನು ಅವರು ನೀಡಿದ್ದಾರೆ.
ರಜನಿ ರಾಜಕೀಯ ಪ್ರವೇಶ ತಮಿಳುನಾಡಿನಲ್ಲಿ ಮಾತ್ರವಲ್ಲದೆ, ರಾಷ್ಟ್ರೀಯ ಮಟ್ಟದಲ್ಲಿ ಸುದೀರ್ಘ ಸಮಯದಿಂದ ಚರ್ಚೆಯಾಗುತ್ತಿದೆ. ರಾಜಕೀಯ ಚಟುವಟಿಕೆ ಕುರಿತು ಸೂಕ್ತ ಸಮಯದಲ್ಲಿ ಪ್ರಕಟಣೆ ನೀಡುವುದಾಗಿ ರಜನಿ ತಿಳಿಸಿದ್ದಾರೆ.
ಸುಮಾರು ಎರಡು ದಶಕಗಳಿಂದ ರಜನಿ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ರಜನಿ ಸಕ್ರಿಯ ರಾಜಕೀಯಕ್ಕೆ ಕಾಲಿರಿಸಲಿದ್ದು, ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎನ್ನಲಾಗಿತ್ತು. ಆದರೆ ರಂಗ ಪ್ರವೇಶಿಸುವ ಮುನ್ನವೇ ಅವರು ಅದರಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಹೇಳಲಾಗಿದೆ.

ಕೋವಿಡ್ನ ಈ ಸನ್ನಿವೇಶದಲ್ಲಿ ಸಾರ್ವಜನಿಕ ಓಡಾಟದಿಂದ ದೂರವಿದ್ದು, ಆರೋಗ್ಯದ ಕಡೆಗೆ ಗಮನ ಹರಿಸುವಂತೆ ವೈದ್ಯರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ರಜನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ರಜನಿಕಾಂತ್ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಹರಿದಾಡುತ್ತಿದೆ. ಈ ಪತ್ರ ಬರೆದಿರುವುದು ತಾವಲ್ಲ. ಆದರೆ ಅದರಲ್ಲಿ ತಮ್ಮ ಆರೋಗ್ಯ ಹಾಗೂ ವೈದ್ಯರು ನೀಡಿರುವ ಸಲಹೆ ಕುರಿತು ಇರುವ ಮಾಹಿತಿ ಸತ್ಯ ಎಂದು ಸ್ವತಃ ರಜನಿ ಸ್ಪಷ್ಟಪಡಿಸಿದ್ದಾರೆ.
'ರಜನಿ ಮಕ್ಕಳ್ ಮಂಡ್ರಮ್ ಬಗ್ಗೆ ನಾನು ಚರ್ಚೆ ನಡೆಸಿ ಸೂಕ್ತ ಸಮಯದಲ್ಲಿ ನನ್ನ ರಾಜಕೀಯ ನಿಲುವನ್ನು ಪ್ರಕಟಿಸಲಿದ್ದೇನೆ' ಎಂದು ರಜನಿ ತಿಳಿಸಿದ್ದಾರೆ.
ರಜನಿ ಅವರ ಮೂತ್ರಪಿಂಡದಲ್ಲಿ ಸಮಸ್ಯೆ ಇರುವುದರಿಂದ ಅವರು ಹೆಚ್ಚು ಓಡಾಡುವುದು ಸೂಕ್ತವಲ್ಲ ಮತ್ತು ಕೋವಿಡ್ನಿಂದ ತೀವ್ರ ಅಪಾಯವಾಗಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ. 'ನಾನು ನನ್ನ ಬಗ್ಗೆ ಹೆಚ್ಚು ಯೋಚನೆಪಡುತ್ತಿಲ್ಲ. ಆದರೆ ನನ್ನ ಸುತ್ತಲೂ ಇರುವವರ ಬಗ್ಗೆ ಚಿಂತೆ ಹೊಂದಿದ್ದೇನೆ' ಎಂದು ರಜನಿ ಹೆಸರಲ್ಲಿ ಓಡಾಡುತ್ತಿರುವ ಪತ್ರದಲ್ಲಿ ಬರೆಯಲಾಗಿದೆ.












Click it and Unblock the Notifications