ಅಧಿಕಾರಿಯಾಗಿದ್ದಾಗ ಭದ್ರತೆ ಒದಗಿಸುತ್ತಿದ್ದ ಅಣ್ಣಾಮಲೈ ಅವರಿಗೇ ಈಗ ವೈ ಪ್ಲಸ್ ಭದ್ರತೆ!
ಚೆನ್ನೈ, ಫೆಬ್ರವರಿ 4: ವರ್ಷದ ಹಿಂದಷ್ಟೇ ಜನಸಾಮಾನ್ಯರು, ರಾಜಕಾರಣಿಗಳಿಗೆ ಭದ್ರತೆ ಒದಗಿಸುತ್ತಿದ್ದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷ ಕೆ. ಅಣ್ಣಾಮಲೈ ಅವರಿಗೇ ಭದ್ರತೆ ಸೌಲಭ್ಯ ಕಲ್ಪಿಸುವಂತಾಗಿದೆ.
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಅದರ ಬೆನ್ನಲ್ಲೇ ಅಣ್ಣಾಮಲೈ ಅವರಿಗೆ ಜೀವ ಬೆದರಿಕೆ ಇದೆ ಎಂಬ ಗುಪ್ತಚರ ಮಾಹಿತಿಗಳು ಬಂದ ಹಿನ್ನೆಲೆಯಲ್ಲಿ ವೈ+ ಭದ್ರತೆಯನ್ನು ಒದಗಿಸಲಾಗಿದೆ. ತಮಿಳುನಾಡು ಪೊಲೀಸರ ಭದ್ರತಾ ಪರಾಮರ್ಶನಾ ಸಮಿತಿಯು, ನಿರ್ದಿಷ್ಟ ಬೆದರಿಕೆಗಳ ಮಾಹಿತಿಗಳನ್ನು ಪಡೆದ ಬಳಿಕ ಭದ್ರತಾ ಸೌಕರ್ಯಗಳನ್ನು ಹೆಚ್ಚಿಸಲು ನಿರ್ಧರಿಸಿದೆ.
ತೀವ್ರಗಾಮಿ ಅಂಶಗಳಿಂದ ಕೆಲವು ಬೆದರಿಕೆಗಳು ಇವೆ ಎಂದು ಪೊಲೀಸರು ತಮಗೆ ಮಾಹಿತಿ ನೀಡಿರುವುದಾಗಿ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವೆಬ್ಸೈಟ್ ವರದಿ ಮಾಡಿದೆ. ಮುಂದೆ ಓದಿ.

ಪಿಎಫ್ಐ, ಮಾವೋವಾದಿ ಬೆದರಿಕೆ
'ಕಳೆದ ಕೆಲವು ತಿಂಗಳಿನಿಂದ ನನಗೆ ಕೆಲವು ನಿರ್ದಿಷ್ಟ ಎಚ್ಚರಿಕೆಗಳು ಆಗಾಗ್ಗೆ ಬರುತ್ತಿವೆ. ಈಗ ಅವರು ನನಗೆ ಭದ್ರತೆಯ ಸೌಲಭ್ಯ ಒದಗಿಸಿದ್ದಾರೆ' ಎಂದು ಅಣ್ಣಾಮಲೈ ತಿಳಿಸಿದ್ದಾರೆ. ಅಣ್ಣಾಮಲೈ ಅವರಿಗೆ ಪಿಎಫ್ಐ ಮತ್ತು ಮಾವೋವಾದಿ ಗುಂಪುಗಳಿಂದ ಬೆದರಿಕೆ ಇದೆ ಎಂದು ವರದಿಯಾಗಿದೆ.

ಭದ್ರತಾ ತಂಡದಲ್ಲಿ ಎಷ್ಟು ಮಂದಿ?
ವೈ+ ಭದ್ರತಾ ಸೌಲಭ್ಯದೊಂದಿಗೆ ಅಣ್ಣಾಮಲೈ ಅವರಿಗೆ 11 ಕಮಾಂಡೋಗಳನ್ನು ಭದ್ರತಾ ತಂಡದಲ್ಲಿ ನೀಡಲಾಗುತ್ತದೆ. ಜತೆಗೆ ಇಬ್ಬರು ಗನ್ ಮ್ಯಾನ್ಗಳು (ಸರದಿಯಲ್ಲಿ ನಾಲ್ಕು ಮಂದಿ) ಸಂಚಾರ ಭದ್ರತೆಯಾಗಿ ಇರಲಿದ್ದಾರೆ. ಹಾಗೆಯೇ ಒಬ್ಬರು (ಹೆಚ್ಚುವರಿ ನಾಲ್ವರು ಸರದಿಯಲ್ಲಿ) ಅವರ ನಿವಾಸದಲ್ಲಿ ಭದ್ರತೆ ಒದಗಿಸಲು ನಿಯೋಜನೆಗೊಳ್ಳಲಿದ್ದಾರೆ.

ಏಕೆ ಬೆದರಿಕೆ ಇದೆಯೋ ಗೊತ್ತಿಲ್ಲ
'ಭದ್ರತಾ ಸೌಲಭ್ಯದ ಕುರಿತಂತೆ ನನಗೆ ಸ್ಥಳೀಯ ಪೊಲೀಸರಿಂದ ಕರೆ ಬಂದಿತ್ತು. ನನ್ನ ಜೀವಕ್ಕೆ ಬೆದರಿಕೆ ಏಕೆ ಇದೆ ಎಂಬುದು ನನಗೆ ನಿಜಕ್ಕೂ ಅಚ್ಚರಿಯಾಗುತ್ತಿದೆ. ನಾನು ಯಾವುದೇ ಧರ್ಮ ಅಥವಾ ನಂಬಿಕೆ ವಿರುದ್ಧ ಮಾತನಾಡಿಲ್ಲ. ಎಲ್ಲರನ್ನೂ ನನ್ನೊಂದಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇನೆ' ಎಂದು ಅಣ್ಣಾಮಲೈ ಹೇಳಿದ್ದಾರೆ.

ಜಿಲ್ಲಾಡಳಿತದ ಹೊಣೆ
ಅಣ್ಣಾಮಲೈ ಅವರು ಉಳಿದುಕೊಳ್ಳುವ ಸ್ಥಳದಲ್ಲಿ ಐವರು ಪೊಲೀಸ್ ಸಿಬ್ಬಂದಿ ಅಗತ್ಯ ಭದ್ರತೆ ಕಲ್ಪಿಸುತ್ತಾರೆ. ಒಬ್ಬ ಸಮವಸ್ತ್ರ ಮತ್ತೊಬ್ಬರು ಮಫ್ತಿಯಲ್ಲಿ ಸೇರಿದಂತೆ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳು ಅಣ್ಣಾಮಲೈ ಎಲ್ಲಿಯೇ ಹೋದರೂ ಭದ್ರತೆಗೆ ಇರಲಿದ್ದಾರೆ. ಹಾಗೆಯೇ ಅವರು ಯಾವ ಸ್ಥಳಕ್ಕೆ ಹೋದರೂ ಅಲ್ಲಿನ ಜಿಲ್ಲಾಡಳಿತ ಸೂಕ್ತ ಭದ್ರತಾ ವ್ಯವಸ್ಥೆ ನೀಡಬೇಕಾಗುತ್ತದೆ.












Click it and Unblock the Notifications