ಸಿಬಿಐ ವಶದಲ್ಲಿದ್ದ 45 ಕೋಟಿ ಮೌಲ್ಯದ 103 ಕೆ.ಜಿ. ತೂಕದ ಚಿನ್ನ ನಾಪತ್ತೆ!
ಚೆನ್ನೈ, ಡಿಸೆಂಬರ್ 12: ತಮಿಳುನಾಡಿನಲ್ಲಿ ಸಿಬಿಐ ದಾಳಿ ನಡೆಸಿ ತನ್ನ ವಶಕ್ಕೆ ಪಡೆದುಕೊಂಡಿದ್ದ ಸುಮಾರು 45 ಕೋಟಿ ರೂ ಮೌಲ್ಯದ 103 ಕೆಜಿಗೂ ಅಧಿಕ ತೂಕದ ಚಿನ್ನ ನಾಪತ್ತೆಯಾಗಿದೆ. ಸಿಬಿಐನ 'ಸುರಕ್ಷಿತ ವಶ'ದಿಂದ ಬೃಹತ್ ಪ್ರಮಾಣದ ಚಿನ್ನ ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ಬಗ್ಗೆ ತಮಿಳುನಾಡು ಸಿಬಿ-ಸಿಐಡಿ ತನಿಖೆಗಾಗಿ ಮದ್ರಾಸ್ ಹೈಕೋರ್ಟ್ ಶುಕ್ರವಾರ ಆದೇಶಿಸಿದ ಬಳಿಕವೇ ಈ ಘಟನೆ ಬಹಿರಂಗವಾಗಿದೆ.
2012ರಲ್ಲಿ ಚೆನ್ನೈನಲ್ಲಿನ ಸುರಾನಾ ಕಾರ್ಪೊರೇಷನ್ ಲಿಮಿಟೆಡ್ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದಾಗ 400.5 ಕೆಜಿ ತೂಕದ ಚಿನ್ನದ ಗಟ್ಟಿಗಳು ಮತ್ತು ಆಭರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಸುರಾನಾದ ಸೇಫ್ ಲಾಕರ್ ಮತ್ತು ವಾಲ್ಟ್ಗಳಲ್ಲಿ ಇವುಗಳನ್ನು ಇರಿಸಿದ್ದ ಸಿಬಿಐ, ಅದಕ್ಕೆ ಬೀಗ ಹಾಕಿ ಸೀಲ್ ಮಾಡಿತ್ತು.
ಸಿಬಿಐ ಪ್ರಕರಣಗಳಿಗಾಗಿ ಇರುವ ಚೆನ್ನೈನ ಪ್ರಿನ್ಸಿಪಲ್ ವಿಶೇಷ ನ್ಯಾಯಾಲಯಕ್ಕೆ ಇದರ ಎಲ್ಲ 72 ಕೀಗಳನ್ನು ಒಪ್ಪಿಸಲಾಗಿತ್ತು ಎಂದು ಸಿಬಿಐ ತಿಳಿಸಿದೆ. ಚಿನ್ನ ಮುಟ್ಟುಗೋಲು ಸಮಯದಲ್ಲಿ ಗಟ್ಟಿಗಳನ್ನು ಜತೆಗೂಡಿ ತೂಕ ಮಾಡಲಾಗಿತ್ತು. ಆದರೆ ಅದನ್ನು ಸುರಾನಾ ಮತ್ತು ಎಸ್ಬಿಐ ನಡುವಿನ ಸಾಲವನ್ನು ಪಾವತಿಸುವ ಕಾರ್ಯಕ್ಕೆ ನೇಮಿಸಲಾದ ಮಧ್ಯಸ್ಥಿಕೆದಾರರಿಗೆ ಹಸ್ತಾಂತರಿಸುವಾಗ ವೈಯಕ್ತಿಕವಾಗಿ ತೂಕ ನಡೆಸಲಾಗಿದೆ. ಈ ಸಂದರ್ಭದಲ್ಲಿಯೇ ಅವ್ಯವಹಾರ ನಡೆದಿರಬಹುದು ಎಂದು ಸಿಬಿಐ ಆರೋಪಿಸಿದೆ.

ಸಿಬಿಐನ ಈ ಹೇಳಿಕೆಯನ್ನು ಒಪ್ಪಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಪ್ರಕಾಶ್ ಅವರು ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದು, ಎಸ್ಪಿ ಶ್ರೇಣಿಯ ಅಧಿಕಾರಿಯು ಆರು ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸಿದರೆ ತನ್ನ ಪ್ರತಿಷ್ಠೆ ಕುಸಿಯುತ್ತದೆ ಎಂದು ಸಿಬಿಐ ಹೇಳಿತು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಪ್ರಕಾಶ್, 'ಇಂತಹ ಹಸ್ತಕ್ಷೇಪಕ್ಕೆ ಕಾನೂನು ಅವಕಾಶ ನೀಡುವುದಿಲ್ಲ. ಎಲ್ಲ ಪೊಲೀಸರನ್ನೂ ನಂಬಬೇಕು. ಇಲ್ಲದಿದ್ದರೆ ಸಿಬಿಐಗೆ ವಿಶೇಷ ಕೋಡುಗಳಿವೆ, ಸ್ಥಳೀಯ ಪೊಲೀಸರಿಗೆ ಕೇವಲ ಬಾಲ ಮಾತ್ರ ಇದೆ ಎಂಬ ಹೇಳಿಕೆಗಳು ಸುಳ್ಳಾಗುವುದಿಲ್ಲ' ಎಂದರು.












Click it and Unblock the Notifications