ಶುಭಶ್ರೀ ದುರಂತದ ಬಳಿಕ ಚೆನ್ನೈನಲ್ಲಿ ಒಂದೇ ದಿನದಲ್ಲಿ ಹೋರ್ಡಿಂಗ್ಸ್ ಮಾಯ!
ಚೆನ್ನೈ, ಸೆ. 15: ಅಕ್ರಮವಾಗಿ ಹಾಕಲಾಗಿದ್ದ ಫ್ಲೆಕ್ಸ್ ಬಿದ್ದು ವಾಹನ ಚಲಾಯಿಸುತ್ತಿದ್ದ ಟೆಕ್ಕಿ ಶುಭಶ್ರೀ ದುರಂತ ಸಾವು ಕಂಡಿದ್ದಕ್ಕೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ 23 ವರ್ಷ ವಯಸ್ಸಿನ ಯುವ ಸಾಫ್ಟ್ ವೇರ್ ಸಾವಿನ ಕೊನೆ ಕ್ಷಣಗಳ ವಿಡಿಯೋ ನೋಡಿದ ಮೇಲೆ ನಾಗರಿಕರ ಕೆಂಗಣ್ಣಿಗೆ ಚೆನ್ನೈ ಕಾರ್ಪೋರೇಷನ್ ಗುರಿಯಾಗಿದೆ.
ಕೊನೆಗೂ ಎಚ್ಚೆತ್ತುಕೊಂಡ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಅಕ್ರಮ ಹೋರ್ಡಿಂಗ್, ಫ್ಲೆಕ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಒಂದೇ ದಿನದಂದು ಸುಮಾರು 3,400 ಅಕ್ರಮ ಹೋರ್ಡಿಂಗ್ ಗಳನ್ನು ನೆಲಕ್ಕುರುಳಿಸಿದೆ.
ಹೋರ್ಡಿಂಗ್ ವಿರುದ್ಧದ ಅಭಿಯಾನದ ಬಗ್ಗೆ ಮಾತನಾಡಿದ ಚೆನ್ನೈ ಮೇಯರ್ ಜಿ ಪ್ರಕಾಶ್, " ಅಕ್ರಮ ಹೋರ್ಡಿಂಗ್, ಫ್ಲೆಕ್ಸ್, ಡಿಜಿಟಲ್ ಆಡ್ ಹಾಕಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು, ಅಕ್ರಮ ಹೋರ್ಡಿಂಗ್ ಕಂಡು ಬಂದರೆ ತಕ್ಷಣವೇ ದೂರು ನೀಡಲು ಅನುಕೂಲವಾಗಲೆಂದು ನಾಗರಿಕರಿಗಾಗಿ ಪ್ರತ್ಯೇಕ ಸಹಾಯವಾಣಿ ಆರಂಭಿಸಲಾಗಿದೆ. ಅಕ್ರಮ ಹೋರ್ಡಿಂಗ್ ಹಾಕಿದವರಿಗೆ ಭಾರಿ ದಂಡ ಹಾಗೂ ಸೆರೆಮನೆ ವಾಸ ವಿಧಿಸಲಾಗುವುದು" ಎಂದಿದ್ದಾರೆ.

ತಿರುವೊತ್ರಿಯೂರ್, ಮನಲಿ, ಮಧಾವರಂ, ರಾಯಪುರಂ, ತೊಡಿಯಾರ್ ಪೇಟ್ ಪ್ರದೇಶದಲ್ಲಿರುವವರು 9445190205 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು, ತಿರು ವಿ ಕ ನಗರ್, ಅಂಬತ್ತೂರ್, ತೇನಾಂಪೇಟ್, ಅನ್ನಾನಗರ್, ಕೋಡಂಬಾಕ್ಕಂ ನಿವಾಸಿಗಳು 9445190698 ಸಂಖ್ಯೆಗೆ ಕರೆ ಮಾಡಬಹುದು. ಅಲಂದೂರ್, ಅಡ್ಯಾರ್, ಪೆರುಂಗುಡಿ, ಶೋಲಿಂಗನಲ್ಲೂರ್ 9445194802 ಫೋನ್ ಸಂಖ್ಯೆಗೆ ಕರೆ ಮಾಡಬಹುದು.

ಶುಭಶ್ರೀ ಸಾವಿಗೆ ಕಾರಣವಾದ ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಹೋರ್ಡಿಂಗ್ ಪ್ರಿಂಟ್ ಮಾಡಿದ್ದ ಪ್ರೆಸ್ ಬಂದ್ ಮಾಡಲಾಗಿದೆ. ಎಐಎಡಿಎಂಕೆ ನಾಯಕನೊಬ್ಬನ ಮಗನ ಮದುವೆಗೆ ಶುಭಕೋರಿದ್ದ ಹೋರ್ಡಿಂಗ್ ಇದಾಗಿತ್ತು. ಈ ಘಟನೆ ಬಳಿಕ ಎಐಎಡಿಎಂಕೆ ನಾಯಕ ಹಾಗೂ ಆತನ ಕುಟುಂಬ ನಾಪತ್ತೆಯಾಗಿದೆ.












Click it and Unblock the Notifications