ಮತ್ತೆ ಮತ್ತೆ ನೋವು ಕೊಡಬೇಡಿ: ಅಭಿಮಾನಿಗಳಿಗೆ ರಜನಿಕಾಂತ್ ಮನವಿ
ಚೆನ್ನೈ, ಜನವರಿ 11: ಅನಾರೋಗ್ಯಕ್ಕೆ ಒಳಗಾದ ಕಾರಣ ತಮ್ಮ ರಾಜಕೀಯ ಪ್ರವೇಶದ ನಿರ್ಧಾರವನ್ನು ಹಠಾತ್ ಕೈಬಿಟ್ಟಿರುವ ನಟ ರಜನಿಕಾಂತ್, ಪ್ರತಿಭಟನೆಗಳ ಮೂಲಕ ತಮ್ಮ ಮೇಲೆ ಒತ್ತಡ ಹೇರದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಜತೆಗೆ ತಮಗೆ ಮತ್ತೆ ಮತ್ತೆ ನೋವು ನೀಡಿಬೇಡಿ ಎಂದು ಕೋರಿದ್ದಾರೆ.
ಹೈದರಾಬಾದ್ನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಕಳೆದ ತಿಂಗಳು ತೆರಳಿದ್ದ ಅವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಅವರು ತಮ್ಮ ಹೊಸ ರಾಜಕೀಯ ಪಕ್ಷದ ಸ್ಥಾಪನೆಯನ್ನು ಮಾಡಬೇಕಿತ್ತು. ಆದರೆ ವೈದ್ಯರ ಸಲಹೆ ಮೇರೆಗೆ ಅವರು ರಾಜಕೀಯಕ್ಕೆ ಇಳಿಯುವ ಮೊದಲೇ ಅದರಿಂದ ನಿವೃತ್ತಿ ಪಡೆದಿದ್ದಾರೆ. ಅವರು ರಾಜಕಾರಣಕ್ಕೆ ಬರಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಇದರಿಂದ ನಿರಾಶೆಯಾಗಿದೆ.
ರಾಜಕೀಯದಿಂದ ದೂರ ಉಳಿಯುವ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಅಭಿಮಾನಿಗಳು ಭಾನುವಾರ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ರಜನಿಕಾಂತ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ.

'ನನಗೆ ರಾಜಕೀಯ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ವಿವರವಾಗಿ ತಿಳಿಸಿದ್ದೇನೆ. ನನ್ನ ನಿರ್ಧಾರವನ್ನು ನಿಮಗೆ ಹೇಳಿದ್ದೇನೆ. ಅಂತಹ ಘಟನೆಗಳನ್ನು ಆಯೋಜಿಸುವ ಮೂಲಕ ರಾಜಕೀಯಕ್ಕೆ ಪ್ರವೇಶಿಸುವಂತೆ ಒತ್ತಾಯಿಸುವ ಮೂಲಕ ದಯವಿಟ್ಟು ನನಗೆ ಮತ್ತೆ ಮತ್ತೆ ಒತ್ತಡ ಹೇರಬೇಡಿ' ಎಂದು ರಜನಿಕಾಂತ್ ಕೋರಿದ್ದಾರೆ.
'ನನ್ನ ಕೆಲವು ಅಭಿಮಾನಿಗಳು, ರಜನಿ ಮಕ್ಕಳ್ ಮಂಡ್ರಮ್ನ ಉಚ್ಚಾಟಿತ ಪದಾಧಿಕಾರಿಗಳ ಜತೆಗೂಡಿ ನಾಯಕತ್ವದ ಸೂಚನೆಗಳನ್ನು ಧಿಕ್ಕರಿಸಿ ಚೆನ್ನೈನಲ್ಲಿ ಕಾರ್ಯಕ್ರಮ ನಡೆಸಿದ್ದಾರೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications