ಅದು ಸ್ವತಂತ್ರ ಕಾಶ್ಮೀರ, ಸೇನೆ ಅನ್ನೋದು ಓಲ್ಡ್ ಫ್ಯಾಷನ್: ಕಮಲ್ ಹಾಸನ್ ವಿವಾದ
Recommended Video

ಚೆನ್ನೈ, ಫೆಬ್ರವರಿ 18: ನಟ, ರಾಜಕಾರಣಿ ಕಮಲ ಹಾಸನ್ ಕಾಶ್ಮೀರ ಮತ್ತು ಸೇನೆಯ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಮಲ್, ಕಾಶ್ಮೀರದಲ್ಲಿ ಜನಮತಾಭಿಪ್ರಾಯ ಸಂಗ್ರಹಿಸಲು ಕೇಂದ್ರ ಸರ್ಕಾರ ಏಕೆ ಹೆದರುತ್ತಿದೆ ಎಂದು ಪ್ರಶ್ನಿಸಿದರು. ಅಲ್ಲದೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು 'ಆಜಾದ್ ಕಾಶ್ಮೀರ' ಎಂದು ಕರೆದಿದ್ದಾರೆ.
'ಸೈನಿಕರು ಕಾಶ್ಮೀರಕ್ಕೆ ಸಾಯಲು ಹೋಗುತ್ತಿದ್ದಾರೆ ಎಂದು ಜನರು ಹೇಳಿದಾಗ ನನಗೆ ದುಃಖವಾಗುತ್ತದೆ. ಸೇನೆ ಎನ್ನುವುದೇ ಒಂದು ಹಳೆಯ ಫ್ಯಾಷನ್. ಜಗತ್ತು ಹೇಗೆಲ್ಲ ಬದಲಾಗಿದೆ, ಮನುಷ್ಯರು ತಮ್ಮ ಆಹಾರಕ್ಕಾಗಿ ಒಬ್ಬರನ್ನೊಬ್ಬರು ಕೊಲ್ಲುವುದಿಲ್ಲ ಎಂದು ನಾವು ಹೇಗೆ ನಿರ್ಧರಿಸಿದ್ದೇವೆಯೋ ಹಾಗೆಯೇ ಹೊಡೆದಾಡುವ ಸಮಯವೂ ಬರಲಿದೆ' ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ರಾಜಕಾರಣಿಗಳು ಸೂಕ್ತವಾಗಿ ವರ್ತಿಸಿದರೆ ಯಾವ ಸೈನಿಕನೂ ಸಾಯುವುದಿಲ್ಲ, ಗಡಿ ನಿಯಂತ್ರಣ ರೇಖೆಯು ನಿಯಂತ್ರಣದಲ್ಲಿಯೇ ಇರುತ್ತದೆ ಎಂದಿದ್ದಾರೆ.
ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ 40ಕ್ಕೂ ಅಧಿಕ ಸೈನಿಕರು ಮೃತಪಟ್ಟ ಘಟನೆಯಿಂದ ಭಾರತ ಶೋಕಸಾಗರದಲ್ಲಿ ಮುಳುಗಿದೆ. ಇಂತಹ ಸಂದರ್ಭದಲ್ಲಿ ಕಮಲ್ ಹಾಸನ್ ನೀಡಿದ ಹೇಳಿಕೆ ಅನೇಕರ ಭಾವನೆಗಳನ್ನು ಕೆರಳಿಸಿದೆ.

ಜನಮತಾಭಿಪ್ರಾಯಕ್ಕೆ ಹೆದರಿಕೆಯೇ?
ತಾವು 'ಮಯ್ಯಂ' ನಿಯತಕಾಲಿಕೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಕಾಶ್ಮೀರದ ಭವಿಷ್ಯದ ಬಗ್ಗೆ ಬರೆದಿದ್ದ ಲೇಖನವನ್ನು ಕಮಲ್ ನೆನಪಿಸಿಕೊಂಡಿದ್ದಾರೆ. 'ಇಂದು ನಾನು ಶೋಕಿಸುತ್ತೇನೆ, ಏಕೆಂದರೆ ಇದು ಮುಂದೆ ಸಂಭವಿಸುತ್ತದೆ ಎಂದು ಭವಿಷ್ಯ ನುಡಿದಿದ್ದೆ. ದುರದೃಷ್ಟವಶಾತ್ ನಾನು ಬೇರೆ ಏನನ್ನಾದರು ನುಡಿಯಬೇಕಿತ್ತು. ಜನಮತಾಭಿಪ್ರಾಯ ನಡೆಸಿ ಜನರನ್ನು ಮಾತನಾಡುವಂತೆ ಮಾಡಿ. ಅದನ್ನು ಏಕೆ ಅವರು (ಭಾರತ) ಮಾಡಿಲ್ಲ. ಅವರು ಯಾವುದಕ್ಕೆ ಹೆದರುತ್ತಿದ್ದಾರೆ? ಅವರು ದೇಶವನ್ನು ವಿಭಜಿಸಲು ಬಯಸಿದ್ದಾರಷ್ಟೇ. ಅವರನ್ನು ಮತ್ತೆ ಏಕೆ ಕೇಳಲಿಲ್ಲ? ಅವರು ಅದನ್ನೀಗ ಮಾಡುವುದಿಲ್ಲ. ಈಗ ಕಾಶ್ಮೀರ ಭಾರತಕ್ಕೆ ಸೇರಿದೆ. ಇದೇ ಪರಿಸ್ಥಿತಿ ಗಡಿಯುದ್ದಕ್ಕೂ ಇದೆ' ಎಂದು ಹೇಳಿದ್ದಾರೆ.
| Array |
ಭಾರತ ಹಾಗೆ ವರ್ತಿಸಬಾರದು
ಜಿಹಾದಿಗಳ ಫೋಟೊಗಳನ್ನು ಹಿಡಿದು ಆಜಾದ್ ಕಾಶ್ಮೀರದ ಹೀರೋಗಳೆಂದು ಬಿಂಬಿಸುವುದು ಮೂರ್ಖತನದ ಕೆಲಸ ಎಂದ ಕಮಲ್, ಅದೇ ರೀತಿ ಭಾರತ ಕೂಡ ಹಾಗೆಯೇ ಮೂರ್ಖತನದಿಂದ ವರ್ತಿಸುತ್ತಿದೆ. ಇದು ಸರಿಯಲ್ಲ. ಭಾರತವು ಉತ್ತಮ ದೇಶ ಎಂಬುದನ್ನು ಸಾಬೀತುಪಡಿಸಬೇಕಿದ್ದರೆ ನಾವು ಹಾಗೆ ವರ್ತಿಸಬಾರದು. ಅಲ್ಲಿ ರಾಜಕೀಯ ಆರಂಭವಾಗುತ್ತದೆ, ಹೊಸ ರಾಜಕೀಯ ಸಂಸ್ಕೃತಿ ಆರಂಭವಾಗುತ್ತದೆ ಎಂದು ಹೇಳಿದ್ದಾರೆ.
|
ಯಾವ ಸೈನಿಕನೂ ಸಾಯಬೇಕಿಲ್ಲ
'ಸೈನಿಕರು ಏಕೆ ಸಾಯುತ್ತಾರೆ? ನಮ್ಮ ಮನೆ ವಾಚ್ಮನ್ಗಳು ಏಕೆ ಸಾಯಬೇಕು? ಎರಡೂ ಕಡೆಯ ರಾಜಕಾರಣಿಗಳು ಸರಿಯಾಗಿ ನಡೆದುಕೊಂಡರೆ ಯಾವ ಸೈನಿಕರೂ ಸಾಯಬೇಕಿಲ್ಲ. ಗಡಿ ನಿಯಂತ್ರಣ ರೇಖೆಯು ನಿಯಂತ್ರಣದಲ್ಲಿಯೇ ಇರುತ್ತದೆ' ಎಂದಿದ್ದಾರೆ.

ಪಕ್ಷದ ಸ್ಪಷ್ಟೀಕರಣ
ಕಮಲ್ ಹಾಸನ್ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆಯೇ ಅವರ ಮಕ್ಕಳ ನೀಧಿ ಮೈಯಂ ಪಕ್ಷ ಸ್ಪಷ್ಟೀಕರಣ ನೀಡಿದೆ. ನಮ್ಮ ಪಕ್ಷದ ಅಧ್ಯಕ್ಷರು ನೀಡಿರುವ ಹೇಳಿಕೆ ಮೂರು ದಶಕಗಳ ಹಿಂದೆ ದೇಶದ ಇತಿಹಾಸದ ಆಗಿನ ಸ್ಥಿತಿಯನ್ನು ಆಧರಿಸಿ ನಿಯತಕಾಲಿಕೆಯೊಂದರಲ್ಲಿ ಬರೆದ ಲೇಖನದ ಅಂಶವಿದು. ಇದು ಇಂದಿಗೆ ಪ್ರಸ್ತುತವಾಗಿಲ್ಲ. ಇಂದಿನ ಅವರ ಸ್ಥಾನಮಾನ ಮತ್ತು ಪಕ್ಷದ ಸ್ಥಾನಮಾನಕ್ಕೆ ಸಂಬಂಧಿಸಿದ್ದಲ್ಲ. ನಮ್ಮ ಅಧ್ಯಕ್ಷರು ಮತ್ತು ನಮ್ಮ ಪಕ್ಷ ಈ ದುಃಖದ ಸಂದರ್ಭದಲ್ಲಿ ಸೇನಾಪಡೆಗಳ ಹೆಗಲಿಗೆ ಹೆಗಲಾಗಿರುತ್ತದೆ ಎಂದಿದೆ.












Click it and Unblock the Notifications