ಮತಾಂತರ ಪ್ರಶ್ನಿಸಿದ್ದಕ್ಕೆ ಕೊಲೆ: ಮತ್ತೊಬ್ಬ ಆರೋಪಿಯ ಬಂಧನ
ಚೆನ್ನೈ, ಜೂನ್ 27: ಫೆಬ್ರವರಿ 5ರಂದು ಪಿಎಫ್ಐ ಮತ್ತು ಎಸ್ಡಿಪಿಐ ಕಾರ್ಯಕರ್ತರಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಕೊಲೆಯಾಗಿದ್ದ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಮುಖಂಡ ವಿ. ರಾಮಲಿಂಗಂ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ.
ರಾಮಲಿಂಗಂ ಅವರೊಂದಿಗೆ ಜಗಳ ಕಾದು ಹಲ್ಲೆ ನಡೆಸಿದ 'ದವಾ ತಂಡ'ದ ಮುಖ್ಯಸ್ಥನಾಗಿದ್ದ ಮೈದಾನ್ ಅಹ್ಮದ್ ಶಾಲಿ (50) ಅಪರಾಧ ಸಂಚಿನ ಆರೋಪದಲ್ಲಿ ಬಂಧಿತನಾಗಿದ್ದಾನೆ.
ಶಾಲಿಯನ್ನು ಎರ್ನಾಕುಲಂನಲ್ಲಿರುವ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಚೆನ್ನೈಗೆ ಕರೆದೊಯ್ದು ಅಲ್ಲಿನ ಎನ್ಐಎ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತದೆ ಎಂದು ಎನ್ಐಎ ಪತ್ರಿಕಾ ಹೇಳಿಕೆ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ, ತಿರುಚಿಯ ನಿವಾಸಿ ಮೊಹಮ್ಮದ್ ಫಾರೂಕ್ ಎಂಬಾತನನ್ನು ಬಂಧಿಸಿತ್ತು.
ತಿರುಬುವನಂನ ತೂಂಡಿವಿಣಗಂ-ಪೆಟ್ಟಾಯಿಯ ನಿವಾಸಿ ರಾಮಲಿಂಗಂ (42) ಫೆಬ್ರವರಿ 5ರ ರಾತ್ರಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಅವರನ್ನು ಅಡ್ಡಗಟ್ಟಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಎಸ್ಡಿಪಿಐ ಸದಸ್ಯರು ಬರ್ಬರವಾಗಿ ಹಲ್ಲೆ ನಡೆಸಿ ಅವರ ಕೈಗಳನ್ನು ಕತ್ತರಿಸಿ ಹಾಕಿದ್ದರು. ಶಾಲಿ ಮತ್ತು ಇತರರು ಭಯೋತ್ಪಾದನಾ ಕೃತ್ಯ ಎಸಗುವ ಸಂಚು ನಡೆಸಿದ್ದರು ಎಂದು ಎನ್ಐಎ ಹೇಳಿದೆ.
ತೀವ್ರ ಗಾಯಗೊಂಡಿದ್ದ ರಾಮಲಿಂಗಂ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸುವ ವೇಳೆಗೆ ಮೃತಪಟ್ಟಿದ್ದರು.
ಈ ಘಟನೆಗೂ ಮುನ್ನ ರಾಮಲಿಂಗಂ ಅವರು ಮುಸ್ಲಿಂ ವ್ಯಕ್ತಿಗಳ ಗುಂಪಿನೊಂದಿಗೆ ವಾದ ಮಾಡುತ್ತಿರುವ ವಿಡಿಯೋ ಹತ್ಯೆಯ ಬಳಿಕ ವೈರಲ್ ಆಗಿತ್ತು. ಇದರಿಂದ ಈ ಗಲಾಟೆಯೇ ಹತ್ಯೆಗೆ ಕಾರಣ ಇರಬಹುದು ಎಂಬ ಶಂಕೆಯೊಂದಿಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಇದು ಮತಾಂತರಕ್ಕೆ ಸಂಬಂಧಿಸಿದ ಘಟನೆ ಎಂಬುದು ತಿಳಿದುಬಂದಿತ್ತು.
Pattali Makkal Katchi (PMK) leader V Ramalingam murder case: NIA arrested accused Myden Ahmed Shali, yesterday, he was head of the dawah team that had entered into an altercation with Ramalingam on 5th Feb 2019. Ahmed Shali will be produced before NIA Special Court, Ernakulam. pic.twitter.com/AeJ6zgfiwx
— ANI (@ANI) 27 June 2019
ಮುಸ್ಲಿಮರ ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ಗುಂಪೊಂದು ಧಾರ್ಮಿಕ ಆಚರಣೆ ಹಾಗೂ ಅಲ್ಲಾಹುವಿನ ಶ್ರೇಷ್ಠತೆ ಬಗ್ಗೆ ಪ್ರಚಾರ ಮಾಡುತ್ತಿತ್ತು. ಈ ನಡುವೆ ಅದು ದಲಿತ ಸಮುದಾಯದವರು ಅಧಿಕ ಸಂಖ್ಯೆಯಲ್ಲಿರುವ ಬೀದಿಯಲ್ಲಿ ಪ್ರಚಾರ ನಡೆಸಲು ಬಂದಿತ್ತು.
ಆ ಪ್ರದೇಶದವರಾದ ರಾಮಲಿಂಗಂ ಅವರು ಧರ್ಮ ಪ್ರಚಾರದ ನಡೆಯನ್ನು ಪ್ರಶ್ನಿಸಿದ್ದರು. ಆಗ ಇಬ್ಬರ ನಡುವೆಯೂ ವಾಗ್ವಾದ ನಡೆದಿತ್ತು. ಮಧ್ಯಾಹ್ನ ಮುಸ್ಲಿಂ ಮುಖಂಡರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಆದರೆ, ಅದೇ ದಿನ ರಾತ್ರಿ ರಾಮಲಿಂಗಂ ಅವರನ್ನು ಅಡ್ಡಗಟ್ಟಿದ್ದ ಗುಂಪು ಅಮಾನವೀಯವಾಗಿ ಅವರ ಕೈಗಳನ್ನು ಕತ್ತರಿಸಿ ಕೊಲೆ ಮಾಡಿತ್ತು ಎಂದು ಆರೋಪಿಸಲಾಗಿದೆ.
ಈ ಪ್ರಕರಣ ಸಂಬಂಧ ತಮಿಳುನಾಡು ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಲಾಗಿತ್ತು.












Click it and Unblock the Notifications