ವಿಧಾನಸೌಧ ಸ್ಫೋಟಕ್ಕೆ ಸಂಚು: ಪಾಕ್ ಉಗ್ರನ ಬಂಧನ

ಬೆಂಗಳೂರು ವಿಧಾನಸೌಧ ಸ್ಫೋಟಕ್ಕೆ ಸಂಚು ನಡೆದಿರುವ ಬಗ್ಗೆ ತಮಗೆ ಖಚಿತ ಮಾಹಿತಿ ದೊರೆಯುತ್ತಿದ್ದಂತೆ ಕೇಂದ್ರೀಯ ಜಾಗೃತದಳ ಹಾಗೂ ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಪಾಕಿಸ್ತಾನದ ಐಎಸ್ಐ ಅಧಿಕಾರಿಗಳ ಸಂಪರ್ಕ ಹೊಂದಿದ್ದ ಶ್ರೀಲಂಕಾ ಮೂಲದ ಜಾಹೀರ್ ಹುಸೇನ್ ಎಂಬ ಉಗ್ರನನ್ನು ಸೆರೆ ಹಿಡಿದಿದ್ದಾರೆ.
ಲಂಕಾ ಲಿಂಕ್!: ಬಂಧಿತ ಜಾಹೀರನನ್ನು ತೀವ್ರ ತನಿಖೆಗೆ ಗುರಿಪಡಿಸಿದಾಗ ಬೆಳಕಿಗೆ ಬಂದ ಮಾಹಿತಿಗಳು ನಿಜಕ್ಕೂ ಆಘಾತಕಾರಿಯಾಗಿವೆ. ಶ್ರೀಲಂಕಾದಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಗಳು ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳಲು ಇವನಿಗೆ ನೆರವು ನೀಡುತ್ತಿದ್ದರು ಎಂಬ ಅಂಶವನ್ನೂ ಜಾಹೀರ್ ಬಹಿರಂಗಪಡಿಸಿದ್ದಾನೆ.
ಅಧಿಕೃತ ಮಾಹಿತಿಗಳ ಪ್ರಕಾರ ಕೆಲ ದಿನಗಳಿಂದ ಉಗ್ರ ಜಾಹೀರ್ ತಮಿಳುನಾಡಿನಲ್ಲಿ ಯುವಕರನ್ನು ಬ್ರೈನ್ ವಾಶ್ ಮಾಡಿ ಸಂಘಟನೆಗೆ ಸೆಳೆದುಕೊಳ್ಳುವ ಪ್ರಯತ್ನದಲ್ಲಿದ್ದ. ಇದಕ್ಕೆ ಕೊಲೋಂಬೊದ ಪಾಕಿಸ್ತಾನ ರಾಯಭಾರಿ ಕಚೇರಿ ಅಧಿಕಾರಿಗಳ ಕುಮಕ್ಕುಕೂಡ ಇತ್ತು ಎಂಬ ಅಂಶ ಪೊಲೀಸರಿಗೆ ದಿಗ್ಬ್ರಮೆ ಉಂಟುಮಾಡಿದೆ
ಆತಂಕಕಾರಿ ಸಂಗತಿಯೆಂದರೆ 37 ವರ್ಷದ ಜಾಹೀರ್ ಹುಸೇನ್ ತಮಿಳುನಾಡಿನಲ್ಲಿ ಭಯೋತ್ಪಾದಕ ಸಂಘಟನೆಗೆ ಸದಸ್ಯರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದ. ಪಾಕಿಸ್ತಾನದ ಐಎಸ್ಐ ಉಗ್ರಗಾಮಿ ಸಂಘಟನೆ ಜಾಹೀರ್ ಹುಸೇನನಿಗೆ ಈ ಜವಾಬ್ದಾರಿ ವಹಿಸಿತ್ತು.
ಶ್ರೀಲಂಕಾ ಕೇಂದ್ರ ಪ್ರಾಂತ್ಯ ಕಾಂಡಿ ಪ್ರದೇಶದ ನಿವಾಸಿಯಾಗಿರುವ ಜಾಹೀರ್ ಹುಸೇನ್, ಸಂಘಟನೆಯ ಇತರ ಉಗ್ರರ ಜತೆಗೂಡಿ ಕರ್ನಾಟಕದ ಬೆಂಗಳೂರು ಹಾಗೂ ಚೆನ್ನೈ ನಗರಗಳಲ್ಲಿ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ವಾರಗಳ ಹಿಂದಷ್ಟೇ ಸಿಕ್ಕಿದ್ದ ಸುಳಿವಿನ ಮೇರೆಗೆ ತಮಿಳುನಾಡು ಪೊಲೀಸರು ಮತ್ತು ಕೇಂದ್ರೀಯ ಗುಪ್ತಚರ ಇಲಾಖೆ ಅಧಿಕಾರಿಗಳು ಶ್ರೀಲಂಕಾಕ್ಕೆ ಬರುವ ಎಲ್ಲಾ ವಿಮಾನಗಳ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡುವಂತೆ ಸೂಚಿಸಿದರು. ಅದೇ ಪ್ರಕಾರ ನಿನ್ನೆ ರಾತ್ರಿ ವಿಮಾನವೊಂದನ್ನು ಏರಲು ನಿಲ್ದಾಣಕ್ಕೆ ಆಗಮಿಸಿದಾಗ ಹುಸೇನನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.












Click it and Unblock the Notifications