ಚುನಾವಣಾ ಪೂರ್ವ ಸಮೀಕ್ಷೆಗಳದ್ದು ಸುಳ್ಳು ಪ್ರಚಾರ; ತಮಿಳುನಾಡು ಸಿಎಂ
ಚೆನ್ನೈ, ಮಾರ್ಚ್ 31: "ಚುನಾವಣಾ ಪೂರ್ವ ಸಮೀಕ್ಷೆಗಳು ಸುಳ್ಳು ಪ್ರಚಾರಗಳು" ಎಂದು ಹೇಳಿರುವ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳದಂತೆ ತಮ್ಮ ಪಕ್ಷದ ಸದಸ್ಯರಿಗೆ ತಿಳಿಸಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ 2021ರ ಕುರಿತು ಈಚೆಗೆ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಅದರಲ್ಲಿ ಬಹುಪಾಲು ಸಮೀಕ್ಷೆಗಳು, ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ ಗೆಲುವು ಸಾಧಿಸಲಿವೆ. ಬಿಜೆಪಿ-ಎಐಎಡಿಎಂಕೆ ಮೈತ್ರಿ ಸೋಲನುಭವಿಸಲಿದೆ ಎಂದು ಹೇಳಿದ್ದವು. ಈ ಹಿನ್ನೆಲೆಯಲ್ಲಿ ಸಿಎಂ ಪಳನಿಸ್ವಾಮಿ ತಮ್ಮ ಪಕ್ಷದ ಸದಸ್ಯರಿಗೆ ಈ ಮಾತನ್ನು ಹೇಳಿದ್ದಾರೆ.

ಎಐಎಡಿಎಂಕೆ ಪಕ್ಷದ ಕಾರ್ಯಕರ್ತರಿಗೆ ತಮ್ಮ ಮಾತುಗಳ ಮೂಲಕ ಸ್ಥೈರ್ಯ ತುಂಬಿದ್ದು, "ಈ ಹಿಂದಿನ ಚುನಾವಣೋತ್ತರ ಸಮಿಕ್ಷೆಗಳೂ ಸುಳ್ಳಾಗಿದ್ದವು. ಈ ರೀತಿಯ ಸುದ್ದಿ, ಮಾಹಿತಿಗಳಿಂದ ಪಕ್ಷದ ಸದಸ್ಯರು ಸ್ಥೈರ್ಯ ಕಳೆದುಕೊಳ್ಳಬಾರದು. ಇವೆಲ್ಲಾ ಸುಳ್ಳು ಪ್ರಚಾರಗಳಷ್ಟೆ" ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಏಪ್ರಿಲ್ 6ರಂದು 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ರಾಜ್ಯದಲ್ಲಿ ಎಐಎಡಿಎಂಕೆ- ಬಿಜೆಪಿ ಮೈತ್ರಿಯಲ್ಲಿದ್ದು, ಕಾಂಗ್ರೆಸ್-ಡಿಎಂಕೆ ಮೈತ್ರಿಯಲ್ಲಿದೆ.
ಈ ಯುಪಿಎ ಮೈತ್ರಿ 158 ಕ್ಷೇತ್ರಗಳಿಂದ ಗೆಲುವು ಸಾಧಿಸುತ್ತದೆ. ಎನ್ಡಿಎ 65 ಕ್ಷೇತ್ರಗಳನ್ನು ಕಳೆದುಕೊಳ್ಳುವ ಮೂಲಕ ಸೋಲನ್ನನುಭವಿಸುತ್ತದೆ ಎಂದು ಈಚೆಗಿನ ಟೈಮ್ ನೌ ಸಿ ವೋಟರ್ ಸಮೀಕ್ಷೆ ತಿಳಿಸಿತ್ತು.












Click it and Unblock the Notifications