ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣ ವಚನ
ಚೆನ್ನೈ, ಡಿಸೆಂಬರ್ 06: ತಮಿಳುನಾಡಿನ 'ಅಮ್ಮ' ಜಯಲಲಿತಾ ಅವರ ನಿಧನದ ಬಳಿಕ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವ ಅವಕಾಶ ಮತ್ತೆ ಓ ಪನ್ನೀರ್ ಸೆಲ್ವಂ ಅವರಿಗೆ ಸಿಕ್ಕಿದೆ. ಸೆಲ್ವಂ ಅವರು ಸೋಮವಾರ ಮಧ್ಯರಾತ್ರಿ ನಂತರ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]
ಇದಕ್ಕೂ ಮುನ್ನ ನಡೆದ ಎಐಎಡಿಎಂಕೆ ಶಾಸಕಾಂಗ ಸಭೆಯಲ್ಲಿ ಪನ್ನೀರ್ ಸೆಲ್ವಂ ಅವರನ್ನು ನೂತನ ಶಾಸಕಾಂಗ ನಾಯಕ ಹಾಗೂ ಸಿಎಂಯಾಗಿ ಆಯ್ಕೆಮಾಡಲಾಯಿತು.[ತಮಿಳುನಾಡಿನ 'ಅಮ್ಮ' ಜೆ ಜಯಲಲಿತಾ ವಿಧಿವಶ]
ಅಪೋಲೋ ಆಸ್ಪತ್ರೆಯಲ್ಲಿ ಸೋಮವಾರ 11.30ಕ್ಕೆ ಹೃದಯಾಘಾತದಿಂದ ಜಯಲಲಿತಾ ಅವರು ಮೃತಪಟ್ಟ ಬಳಿಕ ರಾಜ್ಯದ ಆಡಳಿತ ವ್ಯವಸ್ಥೆಯನ್ನು ತಕ್ಷಣವೇ ವಹಿಸಿಕೊಂಡಿದ್ದಾರೆ. ರಾಜ್ಯಪಾಲ ವಿದ್ಯಾಸಾಗರ್ ಅವರು ನೂತನ ಸಿಎಂ ಪನ್ನೀರ್ ಸೆಲ್ವಂ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸೆಲ್ವಂ ಅವರ ಜತೆಗೆ 15 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. [2014: ಕಣ್ಣೀರಿಟ್ಟು ಸಿಎಂ ಆದ ಪನ್ನೀರ್ ಸೆಲ್ವಂ]

ಓಪಿಎಸ್ ಎಂದು ಕರೆಯಲ್ಪಡುವ ಸೆಲ್ವಂ ಅವರು ಮುಖ್ಯಮಂತ್ರಿ ಅಲ್ಲದೆ ಲೋಕೋಪಯೋಗಿ ಸಚಿವ, ವಿತ್ತ ಸಚಿವ, ಶಾಸಕಾಂಗ ಪಕ್ಷದ ನಾಯಕ, ವಿರೋಧ ಪಕ್ಷದ ನಾಯಕರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.ಇಂದಿಗೂ ಊರಿಗೆ ತೆರಳಿದಾಗ ರಾಜಕೀಯ ಮರೆಯುವ ಸೆಲ್ವಂ ಕೃಷಿಕರಾಗಿ, ಚಹಾ ಅಂಗಡಿ ಮಾಲೀಕರಾಗಿ ನಿಮಗೆ ಕಾಣ ಸಿಗುತ್ತಾರೆ.[ಸ್ವಾಮಿನಿಷ್ಠೆಯ ಪ್ರತೀಕ ಪನ್ನೀರ್ ಸೆಲ್ವಂ ವ್ಯಕ್ತಿಚಿತ್ರ]
2001ರಲ್ಲಿ ತಾನ್ಸಿ ಭೂ ಹಗರಣ ಪ್ರಕರಣದಲ್ಲಿ ಸೆ.21, 2001ರಂದು ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರು ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಕಾಯ್ದೆ ಆನ್ವಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
2003ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಜಯಲಲಿತಾ ಆರೋಪ ಮುಕ್ತಗೊಂಡು ಖುಲಾಸೆ ಹೊಂದಿದ್ದರು. ಅಂದು ತಮ್ಮ ಅಧಿಕಾರ ಉಳಿಸಿಕೊಳ್ಳಲು ಹಿರಿತನದ ಆಧಾರವನ್ನು ಲೆಕ್ಕಿಸದೆ ಥೇವರ್ ಸಮುದಾಯಕ್ಕೆ ಸೇರಿದ ತನ್ನ ನಿಷ್ಠಾವಂತ ಸೇವಕ ಪನ್ನೀರ್ ಸೆಲ್ವಂರನ್ನು ಸಿಎಂ ಸ್ಥಾನದಲ್ಲಿ ಜಯಾ ಕೂರಿಸಿ ರಿಮೋಟ್ ಕಂಟ್ರೋಲ್ ಸಿಎಂ ಆಗಿ ವರ್ತಿಸಿದ್ದರು.
2014ರಲ್ಲಿ ಜೈಲುಪಾಲಾದ ಸಂದರ್ಭದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಅವಕಾಶ ಮತ್ತೆ ಓ ಪನ್ನೀರ್ ಸೆಲ್ವಂ ಅವರಿಗೆ ಸಿಕ್ಕಿತ್ತು. ಈಗ ಮೂರನೆ ಬಾರಿಗೆ ಜಯಾ ವಿಧಿವಶರಾದ ಮೇಲೆ ಸೆಲ್ವಂಗೆ ಅಧಿಕಾರ ಸಿಕ್ಕಿದೆ.












Click it and Unblock the Notifications