ಕೊಲೆ ಕೇಸ್: ಎಂಜಿಆರ್ ಅವರ ಸಾಕು ಪುತ್ರಿಗೆ ಜೀವಾವಧಿ ಶಿಕ್ಷೆ
ಚೆನ್ನೈ, ಜುಲೈ 14: ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಸ್ಥಾಪಕ, ದಿವಂಗತ ಎಂಜಿ ರಾಮಚಂದ್ರನ್ ಸಾಕು ಮಗಳು ಭಾನು ಅವರಿಗೆ ಚೆನ್ನೈ ಪ್ರಿನ್ಸಿಪಲ್ ಜಿಲ್ಲಾ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಎಂಜಿಆರ್ ಅವರ ಸಾಕು ಮಗಳು ಸುಧಾ ಅವರ ಗಂಡ ವಿಜಯಕುಮಾರ್ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಭಾನುಮತಿ ಸೇರಿದಂತೆ ಏಳು ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಸುಧಾ ಅವರ ಗಂಡ ವಿಜಯಕುಮಾರ್ ಹತ್ಯೆ ಪ್ರಕರಣದಲ್ಲಿ ಸುಧಾ ಅವರ ಸೋದರಿ ಭಾನುಮತಿ, ಇನ್ನೊಬ್ಬ ಆರೋಪಿ, ಸಂಬಂಧಿ ಕರ್ಣ ಸೇರಿದಂತೆ ಏಳು ಮಂದಿ ಸೇರಿಕೊಂಡು ವಿಜಯನ್ ಹತ್ಯೆ ಮಾಡಿದ್ದರು.
ಆಳ್ವಾರ್ ಪೇಟ್ ನಲ್ಲಿ 2008ರ ಜೂನ್ 4ರಂದು ಈ ಘಟನೆ ನಡೆದಿತ್ತು, ಅಭಿರಾಮ್ ಪುರಂ ಪೊಲೀಸರು ಮೊದಲಿಗೆ ಕೇಸಿನ ತನಿಖೆ ನಡೆಸಿದರು. ನಂತರ ಸಿಬಿ-ಸಿಐಡಿ ತನಿಖೆ ನಡೆಸಿ 70ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ ಪಡೆದು ವರದಿ ಸಲ್ಲಿಸಿದ್ದರು.
ಆಸ್ತಿ ವಿವಾದ: ಮಕ್ಕಳಿಲ್ಲದ ಎಂಜಿ ಆರ್ ಅವರ ಆಸ್ತಿ ಮೇಲೆ ಎಲ್ಲರಿಗೂ ಕಣ್ಣಿತ್ತು. ಎಂಜಿಆರ್ ಅವರು ತಮ್ಮ ಪತ್ನಿ ಜಾನಕಿ ಅವರ ಸೋದರರ ಏಳು ಮಕ್ಕಳನ್ನು ಸಾಕುತ್ತಿದ್ದರು.

ನೂರಾರು ಕೋಟಿ ರು ಮೊತ್ತದ ಆಸ್ತಿ ಮೇಲೆ ಸಹಜವಾಗಿ ಮಕ್ಕಳಲ್ಲಿ ಜಗಳ ಉಂಟಾಯಿತು. ಸಾಕು ಮಕ್ಕಳಾದ ಸುಧಾ ಮತ್ತು ಭಾನುಮತಿ ನಡುವೆ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿ ತಿಕ್ಕಾಟ ನಡೆಯಿತು. ಇದಕ್ಕೂ ಮುನ್ನ ಭಾನುಮತಿ ಹಾಗೂ ಆಕೆಯ ಅಣ್ಣ ರಾಜ ಅಲಿಯಾಸ್ ದಿಲೀಪನ್ ನಡುವೆ ಜಾನಕಿ ರಾಮಚಂದ್ರನ್ ಮೆಟ್ರಿಕ್ಯುಲೇಷನ್ ಶಾಲೆ ಆಡಳಿತದ ಬಗ್ಗೆ ಜಗಳವಾಗಿತ್ತು. ಸುಧಾಳ ಪತಿ ವಿಜಯನ್ ಹೇಳಿದ ಮಾತಿಗೆ ರಾಜ ತಲೆ ಅಲ್ಲಾಡಿಸುತ್ತಿದ್ದ. ಕೊನೆಗೆ ಸುಧಾ ಅವರ ಪತಿ ವಿಜಯ್ ಕುಮಾರ್ ಅವರ ಹತ್ಯೆಯಲ್ಲಿ ಕೊನೆಗೊಂಡಿತು.
ವಿಜಯ್ಕುಮಾರ್ ಕೊಲೆಗೆ ಬಾಡಿಗೆ ಗೂಂಡಾಗಳನ್ನು ಬಳಸಲಾಗಿತ್ತು. ಆರೋಪಿ ಕರ್ಣ ಇದನ್ನೆಲ್ಲ ನಿಭಾಯಿಸಿದ್ದ. ಘಟನೆ ದಿನದಂದು ವಿಜಯನ್ ಕಾರಿಗೆ ಹಿಂದಿನಿಂದ ಗುದ್ದಿದ ಆರೋಪಿಗಳು ನಂತರ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದಿದ್ದರು. ಹತ್ಯೆಗೈದ ಸುರೇಶ್, ಆರ್. ಕಾರ್ತಿಕ್, ದೀನಾ. ಸೋಲಮನ್, ಎಂ.ಕಾರ್ತಿಕ್ ಅವರಿಗೂ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಸಹ ಆರೋಪಿ, ಭಾನುಮತಿ ಅವರ ಗೆಳತಿ ಭುವನಾ ಇನ್ನೂ ಪತ್ತೆಯಾಗಿಲ್ಲ.












Click it and Unblock the Notifications