Breaking: ಮೇಕೆದಾಟು, ತಮಿಳುನಾಡಿಗೆ ಸುಪ್ರೀಂನಲ್ಲಿ ಹಿನ್ನಡೆ
ನವದೆಹಲಿ, ಜುಲೈ 20: ಮೇಕೆದಾಟು ಯೋಜನೆ ವಿಚಾರದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ಣಯ ಪರಿಗಣಿಸಬಾರದು ಎಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ತುರ್ತು ವಿಚಾರಣೆಗೆ ಕೋರ್ಟ್ ನಿರಾಕರಿಸಿದ್ದು, ವಿಚಾರಣೆಯನ್ನು ಜುಲೈ 26ಕ್ಕೆ ಮುಂದೂಡಿದೆ.
ಕರ್ನಾಟಕ ಸರ್ಕಾರದ ಪ್ರಸ್ತಾಪಿತ ಮೇಕೆದಾಟು ಯೋಜನೆಯ ಯೋಜನಾ ವರದಿಗೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಯಾವುದೇ ಆದೇಶ ಅಥವಾ ನಿರ್ದೇಶನವನ್ನು ನೀಡದಂತೆ ತಮಿಳುನಾಡು ಸರ್ಕಾರ ಕಳೆದ ವಾರ ಅರ್ಜಿ ಸಲ್ಲಿಸಿತ್ತು. ಅರ್ಜಿ ಕುರಿತು ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿತ್ತು.
ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಸಲು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ಸಭೆ ಸೇರಲಿದೆ.
ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗನ್ ಸುಪ್ರೀಂಕೋರ್ಟ್ನಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ವಕೀಲರೊಂದಿಗೆ ಚರ್ಚೆ ನಡೆಸಿದ್ದರು. "ನ್ಯಾಯಾಲಯದಲ್ಲಿ ನಮ್ಮ ವಾದಗಳು ನ್ಯಾಯೋಚಿತವಾಗಿವೆ ಮತ್ತು ನ್ಯಾಯಾಲಯದಿಂದ ಅನುಕೂಲಕರ ಆದೇಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ" ಎಂದು ಹೇಳಿದ್ದರು.
ದೊರೈಮುರುಗನ್ ಜೂನ್ 22 ರಂದು ನವದೆಹಲಿಗೆ ಪಕ್ಷದ ನಾಯಕರ ನಿಯೋಗದೊಂದಿಗೆ ತೆರಳಿದ್ದರು. ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿರುವುದರಿಂದ ಅಣೆಕಟ್ಟು ಯೋಜನೆ ಕುರಿತು ಯಾವುದೇ ಚರ್ಚೆಗೆ ಅವಕಾಶ ನೀಡದಂತೆ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದರು.
Recommended Video
ಸಾಲಿಸಿಟರ್ ಜನರಲ್, ಮೇ 4 ರಂದು ತಮ್ಮ ಅಭಿಪ್ರಾಯದಲ್ಲಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ವ್ಯಾಪಕ ಅಧಿಕಾರವನ್ನು ಹೊಂದಿದೆ. ಈ ಪ್ರಾಧಿಕಾರವು ಪ್ರಶ್ನೆಯಲ್ಲಿರುವ ಯೋಜನೆಯ ಬಗ್ಗೆ ಚರ್ಚಿಸಬಹುದು ಮತ್ತು ಅದರ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ನೀಡಬಹುದು ಎಂದು ಹೇಳಿದ್ದಾರೆ.