ಚೆನ್ನೈನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯು ಭುಜದ ಮೇಲೆ ಹೊತ್ತು ರಕ್ಷಿಸಿದ್ದ ವ್ಯಕ್ತಿ ಸಾವು
ಚೆನ್ನೈ, ನವೆಂಬರ್ 12: ಚೆನ್ನೈನಲ್ಲಿ ಸುರಿಯುತ್ತಿರುವ ಮಳೆಯ ನಡುವೆ ಸಿಲುಕಿದ ವ್ಯಕ್ತಿಯನ್ನು ಮಹಿಳಾ ಪೊಲೀಸ್ ವೊಬ್ಬರು ತಮ್ಮ ಭುಜದ ಮೇಲೆ ಹೊತ್ತು ರಕ್ಷಿಸಿದ್ದರು. ಶುಕ್ರವಾರ ಅದೇ ವ್ಯಕ್ತಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದ್ದಾರೆ.
ನವೆಂಬರ್ 11ರ ಗುರುವಾರ ಚೆನ್ನೈನಲ್ಲಿ ಸುರಿದ ಮಳೆಯಿಂದಾಗಿ ಟಿಪಿ ಚತ್ರಮ್ ಪ್ರದೇಶದಲ್ಲಿ 25 ವರ್ಷದ ಉದಯ್ ಕುಮಾರ್ ಎಂಬುವವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಈ ವೇಳೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿ ರಾಜೇಶ್ವರಿ ತಮ್ಮ ಭುಜದ ಮೇಲೆ ವ್ಯಕ್ತಿಯನ್ನು ಹೊತ್ತು ರಕ್ಷಿಸಿದ್ದರು.
ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ವ್ಯಕ್ತಿಯನ್ನು ಭುಜದ ಮೇಲೆ ಹೊತ್ತು ಸಾಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ದಕ್ಷ ಅಧಿಕಾರಿಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಮಹಿಳಾ ಪೊಲೀಸ್ ಅಧಿಕಾರಿಯ ಶ್ರಮ ವ್ಯರ್ಥವಾಗಿದೆ.

ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಗುರುವಾರ ಭಾರೀ ಮಳೆ ಸುರಿದಿದ್ದು, ಚೆನ್ನೈನ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, 28 ವರ್ಷದ ಯುವಕ ಸ್ಮಶಾನದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಎಗ್ಮೋರ್ ಮತ್ತು ಪೆರಂಬೂರ್ನಂತಹ ಸ್ಥಳಗಳಲ್ಲಿ ಮರಗಳು ಉರುಳಿವೆ ಎಂದು ಪೊಲೀಸರು ತಿಳಿಸಿದ್ದರು.
ತಮಿಳುನಾಡಿನ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ಜಯಂತ್ ಮಾತನಾಡಿ, ಮಳೆ ಸಂಬಂಧಿತ ಘಟನೆಗಳಲ್ಲಿ ಕಳೆದ ಶನಿವಾರದಿಂದ ಈವರೆಗೂ 14 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಭಾರೀ ಮಳೆ ಮತ್ತು ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದ್ದರಿಂದ ತಮಿಳುನಾಡಿನಲ್ಲಿ ಪ್ರವಾಹ ಉಂಟಾಗಿದ್ದು, 14 ಜನರು ಪ್ರಾಣ ಬಿಟ್ಟಿದ್ದಾರೆ. ಗುರುವಾರ ತಡರಾತ್ರಿಯವರೆಗೆ ಚೆನ್ನೈನ ಹಲವು ಭಾಗಗಳು ನೀರಿನಿಂದ ಮುಳುಗಿದ್ದರಿಂದ, 75,000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಇತರ ಸರ್ಕಾರಿ ಅಧಿಕಾರಿಗಳು ನಾಗರಿಕರಿಗೆ ನೆರವು ನೀಡುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಸಾರ್ವಜನಿಕರನ್ನು ಕಾಡುತ್ತಿರುವ ಹಾನಿಯ ಭೀತಿ:
ಉಕ್ಕಿ ಹರಿಯುತ್ತಿರುವ ಕೂಂ ನದಿಯ ಸಮೀಪದಲ್ಲಿರುವ ಪುದುಪೇಟ್ನ ಬೈಲೇನ್ಗಳು, ಚೂಲೈ, ಸೆಮ್ಮಂಚೇರಿ, ಕೋಡಂಬಂಬಾಕ್ಕಂ, ಕೆಕೆ ನಗರ-ಎಂಜಿಆರ್ ನಗರ ಮತ್ತು ಅರುಂಬಕ್ಕಂ, ಅಸಂಖ್ಯಾತ ನೆರೆಹೊರೆಗಳಲ್ಲಿ ಪ್ರವಾಹಕ್ಕೆ ಸಿಲುಕಿವೆ. ಮಡಿಪಾಕ್ಕಂನ ರಾಮ್ ನಗರದ ಹಲವಾರು ನಿವಾಸಿಗಳು ತಮ್ಮ ಕಾರುಗಳನ್ನು, ಬೈಕ್ ಗಳನ್ನು, ತಳ್ಳುವ ಗಾಡಿಗಳನ್ನು ಹತ್ತಿರದ ವೆಲಚೇರಿ ಮೇಲ್ಸೇತುವೆಯ ಅಂಚಿನಲ್ಲಿ ನಿಲ್ಲಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ:
ಚೆನ್ನೈನಿಂದ ಮಳೆ ಸುರಿಸುವ ಮೋಡಗಳು ತೀರಾ ಹತ್ತಿರದಲ್ಲಿದ್ದು, ಶೀಘ್ರದಲ್ಲೇ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಪ್ರದೇಶವನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಲ್ಲಿಯವರೆಗೆ 157 ಜಾನುವಾರುಗಳು ಸಾವನ್ನಪ್ಪಿದ್ದು 1,146 ಗುಡಿಸಲುಗಳು ಮತ್ತು 237 ಮನೆಗಳು ಮಳೆ ಸಂಬಂಧಿತ ಘಟನೆಗಳಲ್ಲಿ ಹಾನಿಗೊಳಗಾಗಿವೆ.
ರೈಲುಗಳ ಸಂಚಾರ ಸ್ಥಗಿತ:
ಚೆನ್ನೈ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈಲ್ವೆ ಹಳಿಗಳ ಮೇಲೆ ಭಾರೀ ಪ್ರಮಾಣದ ನೀರು ನಿಂತುಕೊಂಡಿದೆ. ಈ ಹಿನ್ನೆಲೆ ಚೆನ್ನೈ ಸೆಂಟ್ರಲ್ ಮತ್ತು ತಿರುವಳ್ಳೂರ್ ನಡುವೆ ಉಪನಗರ ರೈಲು ಸಂಚಾರವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಇದರ ಜೊತೆಗೆ ಗುಮ್ಮಿಡಿಪೂಂಡಿ ಭಾಗದಲ್ಲಿ ರೈಲ್ವೆ ಸಂಚಾರದಲ್ಲಿ ವಿಳಂಬವಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. "ಚೆನ್ನೈ ಸೆಂಟ್ರಲ್ನಿಂದ ತಿರುವಳ್ಳೂರು ಮತ್ತು ಅರಕ್ಕೋಣಂ ಕಡೆಗೆ ರೈಲ್ವೆ ಸಂಚಾರದಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ ಸದ್ಯಕ್ಕೆ ಕೆಲವು ಸೇವೆಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ. ರೈಲು ಸೇವೆಗಳನ್ನು ಸಹಜ ಸ್ಥಿತಿಗೆ ತರಲು ಕೆಲಸ ನಡೆಯುತ್ತಿದೆ" ಎಂದು ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ.












Click it and Unblock the Notifications