ಜನಸಂಖ್ಯೆ ಆಧಾರದಲ್ಲಿ ಸಂಸತ್ ಸ್ಥಾನ ಕುಸಿತ, ಹೈಕೋರ್ಟ್ ಆದೇಶವೇನು?
ಚೆನ್ನೈ, ಆಗಸ್ಟ್ 22: ಜನಸಂಖ್ಯೆ ನಿಯಂತ್ರಿಸಿದ ಕಾರಣಕ್ಕೆ ಲೋಕಸಭಾ ಸ್ಥಾನಗಳ ಕಳೆದುಕೊಂಡ ತಮಿಳುನಾಡಿಗೆ ಪರಿಹಾರ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಮಹತ್ವದ ಆದೇಶ ನೀಡಿದೆ.
ಕೇಂದ್ರ ಸರ್ಕಾರದ ನೀತಿ, ಯೋಜನೆಯ ಫಲವಾಗಿ 1962ರಲ್ಲಿ ಇದ್ದ ಜನಪ್ರತಿನಿಧಿಗಳ ಸಂಖ್ಯೆ ನಿಧಾನವಾಗಿ ಕುಗ್ಗಿದೆ. ತಮಿಳುನಾಡು ರಾಜ್ಯವು ಯಶಸ್ವಿ ಕುಟುಂಬ ಕಲ್ಯಾಣ ಯೋಜನೆಯ ಮೂಲಕ ಜನಸಂಖ್ಯೆಯನ್ನು ತಹಬದಿಗೆ ತಂದ ಫಲವಾಗಿ 1967ರಲ್ಲಿ ರಾಜಕೀಯ ಪ್ರಾತಿನಿಧ್ಯವನ್ನು ತಗ್ಗಿಸಿಕೊಳ್ಳಬೇಕಾಗಿ ಬಂದಿದೆ. ಇದು, ಅನ್ಯಾಯ, ಅವಿವೇಚನಾ ಸಂಗತಿ, ಇದಕ್ಕಾಗಿ ತಮಿಳುನಾಡಿಗೆ ಪರಿಹಾರ ಏಕೆ ನೀಡಬಾರದು ಎಂದು ನ್ಯಾ. ಎನ್ ಕಿರುಕುಬಾಕರನ್ ಮತ್ತು ನ್ಯಾ. ಬಿ ಪುಗಳೇಂದಿ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ.
ಕೇವಲ ಪರಿಶಿಷ್ಟ ಜಾತಿಗೆ ಮಾತ್ರವೇ ಮೀಸಲಾಗಿರುವ ತಮಿಳುನಾಡಿನ ತೆಂಕಾಸಿ ಲೋಕಸಭಾ ಸ್ಥಾನವನ್ನು ಮೀಸಲಾತಿ ರಹಿತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಮೇಲಿನಂತೆ ಅಭಿಪ್ರಾಯಪಟ್ಟಿದೆ.

''ಕೇಂದ್ರ ಸರ್ಕಾರದ ಯೋಜನೆಯೊಂದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕಾರಣಕ್ಕೆ ಸಂಸತ್ತಿನಲ್ಲಿ ಆ ರಾಜ್ಯದ ಪ್ರಾತಿನಿಧ್ಯವನ್ನು ಕಡಿಮೆಗೊಳಿಸುವ ಮೂಲಕ ಆ ರಾಜ್ಯದ ಜನತೆಯ ವಿರುದ್ಧದ ನಡೆಯನ್ನು ಅನುಸರಿಸಬಹುದೇ?,'' ಎಂದು ನ್ಯಾಯಾಲಯವು ಪ್ರಶ್ನಿಸಿದೆ.
ಒಂದು ಕ್ಷೇತ್ರವನ್ನು ಹಲವು ವರ್ಷಗಳ ಕಾಲ ಮೀಸಲಿರಿಸಲಾಗದು ಎಂದ ನ್ಯಾಯಾಲಯವು, ಸಾಮಾನ್ಯ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿರುವ ಪರಿಸ್ಥಿತಿ ಇರುವ ಬಗ್ಗೆ ಬೇಸರಿಸಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯವು ಜನಸಂಖ್ಯೆಯನ್ನು ನಿಯಂತ್ರಿಸಿರುವ ಕಾರಣಕ್ಕೆ ಲೋಕಸಭಾ ಸ್ಥಾನಗಳಿಂದ ವಂಚಿತವಾಗಬೇಕಾದ ತಮಿಳುನಾಡಿನ ರಾಜಕೀಯ ಪಕ್ಷಗಳಿಗೆ ಈ ವಿಚಾರವಾಗಿ ಮಧ್ಯಪ್ರವೇಶಕ್ಕೆ ಆಸ್ಪದ ಕಲ್ಪಿಸಿದ್ದು, ವಿಚಾರಣೆಯನ್ನು ಮುಂದೂಡಿದೆ.
ಜನಸಂಖ್ಯಾ ನಿಯಂತ್ರಣದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ತಮಿಳುನಾಡು ಹಾಗೂ ದಕ್ಷಿಣದ ಅನೇಕ ರಾಜ್ಯಗಳು ಇದೇ ಕಾರಣಕ್ಕಾಗಿ ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳುವುದು ಅವುಗಳ ಹಕ್ಕುಗಳ ಉಲ್ಲಂಘನೆಯಲ್ಲವೇ?
ಯಾವ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿಲ್ಲವೋ ಆ ರಾಜ್ಯಗಳು ಇದೇ ಕಾರಣಕ್ಕಾಗಿ ಹೆಚ್ಚು ರಾಜಕೀಯ ಪ್ರಾತಿನಿಧ್ಯದ ಅನುಕೂಲ ಪಡೆಯಬಹುದೇ?
1962ರ ಚುನಾವಣೆಯವರೆಗೆ ಇದ್ದಂತೆಯೇ ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 41ಕ್ಕೇ ಏಕೆ ಮರಳಿಸಬಾರದು? 1962ರಿಂದ ಇಲ್ಲಿಯವರೆಗೆ 28 ಸಂಸದರನ್ನು (ಮರುವಿಂಗಡಣೆಯ ಕಾರಣದಿಂದಾಗಿ) ಕಳೆದುಕೊಂಡಿರುವ ತಮಿಳುನಾಡಿಗೆ ರೂ.5,600 ಕೋಟಿ ಹಣವನ್ನು ಕೇಂದ್ರ ಸರ್ಕಾರವು ಏಕೆ ನೀಡಬಾರದು?
ತಮಿಳುನಾಡಿಗೆ ಬೇರೆ ರೀತಿಯ ಪರಿಹಾರವನ್ನು ನೀಡಬೇಕು ಅಥವಾ ರಾಜ್ಯಸಭೆಯಲ್ಲಿ ಹೆಚ್ಚಿನ ಸ್ಥಾನವನ್ನು ಕಲ್ಪಿಸಬೇಕು ಎಂದೂ ಸಹ ಒಂದು ಹಂತದಲ್ಲಿ ನ್ಯಾಯಾಲಯವು ಅಭಿಪ್ರಾಯಪಟ್ಟಿತು.(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)












Click it and Unblock the Notifications