ತ.ನಾಡಿನಲ್ಲಿ ಅಮಾನವೀಯ ಕೃತ್ಯ: ಮೋದಿ ಬೆಂಬಲಿಸಿದ್ದಕ್ಕೆ 75 ವರ್ಷದ ಅಜ್ಜನ ಹತ್ಯೆ
ಚೆನ್ನೈ, ಏಪ್ರಿಲ್ 15: ಈ ಬಾರಿಯ ಲೋಕಸಭೆ ಚುನಾವಣೆ ಕುತೂಹಲ ಕೆರಳಿಸಿರುವಂತೆಯೇ ಅಹಿತಕರ ಘಟನೆಗಳಿಗೂ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ ಕಾರಣಕ್ಕೆ 75 ವರ್ಷದ ಅಜ್ಜನ ಮೇಲೆ ಅಮಾನವೀಯವಾಗಿ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಡಿಎಂಕೆ ಕಾಂಗ್ರೆಸ್ ಬೆಂಬಲಿಗ ಎಂಬಾತ ಮೋದಿ ಅವರ ಅಭಿಮಾನಿಯಾಗಿದ್ದ ಅಜ್ಜನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಗೋಪಿನಾಥ್ ಎಂಬಾತನನ್ನು ಬಂಧಿಸಲಾಗಿದೆ.
ವೃದ್ಧ ಗೋವಿಂದರಾಜನ್ ಎಂಬುವವರು ಮೋದಿ ಅವರ ಪರ ಲೋಕಸಭೆ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದರು. ಪ್ರಚಾರದ ವೇಳೆ ಅವರು ಮೋದಿ ಮತ್ತು ಜಯಲಲಿತಾ ಅವರ ಫೋಟೊಗಳನ್ನು ಅಂಗಿಗೆ ಅಂಟಿಸಿಕೊಂಡಿದ್ದರು.

ಶನಿವಾರ ಒರ್ಧನಾಡು ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾ, ಮತ ಕೇಳುತ್ತಿದ್ದ ಗೋವಿಂದರಾಜನ್ ಜತೆ ಗೋಪಿನಾಥ್ ಜಗಳ ಮಾಡಿದ್ದಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಾಗ ಗೋಪಿನಾಥ್, ಗೋವಿಂದರಾಜನ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಹೊಡೆತದಿಂದ ತೀವ್ರ ಪೆಟ್ಟಾಗಿದ್ದರಿಂದ ಗೋವಿಂದರಾಜನ್ ಕುಸಿದು ಬಿದ್ದಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಗೋಪಿನಾಥ್ನನ್ನು ಭಾನುವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಪಿನಾಥ್ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿಗ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications