'ಲಿಂಗಾ' ಕಥೆ ಕಳ್ಳತನ: ಸೂಪರ್ ಸ್ಟಾರ್ ರಜನಿಗೆ ಸಮನ್ಸ್
ಚೆನ್ನೈ, ಮಾ. 08: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಲಿಂಗಾ ಚಿತ್ರದ ಕಥೆ ಕಳ್ಳತನದ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ನಟ ರಜನಿಕಾಂತ್, ನಿರ್ದೇಶಕ ಕೆಎಸ್ ರವಿಕುಮಾರ್ ಸೇರಿದಂತೆ ಚಿತ್ರತಂಡದ ಅನೇಕರಿಗೆ ಮದುರೈ ಕೋರ್ಟಿನಿಂದ ವಿಚಾರಣೆಗೆ ಹಾಜರಾಗುವಂತೆ ಮಂಗಳವಾರ ಸಮನ್ಸ್ ಜಾರಿಗೊಳಿಸಲಾಗಿದೆ.
ಈ ಹಿಂದೆ ಇದೇ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಲಿಂಗಾ ಚಿತ್ರದ ಕಥೆ ಕದಿಯಲಾಗಿದೆ ಎಂದು ನಿರ್ದೇಶಕ ಕೆ.ಆರ್ ರವಿ ರತ್ನಂ ಆರೋಪಿಸಿದ್ದರು. ಆದರೆ, ಮದುರೈ ಪೀಠ ರಿಟ್ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ಡಿ.12ರಂದು ವಿಶ್ವದೆಲ್ಲೆಡೆ ಚಿತ್ರ ಬಿಡುಗಡೆಗೊಂಡಿತ್ತು. [ರಜನಿ 'ಲಿಂಗಾ' ಚಿತ್ರದ ಹೈಲೈಟ್ಸ್]

ಆದರೆ, ಈಗ ಹೆಚ್ಚುವರಿ ಜಿಲ್ಲಾ ಮುನ್ಸಿಫ್ ಕೋರ್ಟ್ ಜಡ್ಜ್ ಅವರು ಕೆಆರ್ ರವಿರತ್ನಮ್, ಚಿತ್ರದ ನಿರ್ಮಾಪಕ ರಾಕ ಲೈನ್ ವೆಂಕಟೇಶ್, ಬಿ ಪೊನ್ ಕುಮಾರ್, ನಿರ್ದೇಶಕ ಕೆಎಸ್ ರವಿಕುಮಾರ್, ದಕ್ಷಿಣ ಭಾರತ ಚಲನಚಿತ್ರ ಸಾಹಿತಿಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.
ಚಿತ್ರದ ಹೀರೋ ಆದ ಮಾತ್ರಕ್ಕೆ ರಜನಿ ನೋಟಿಸ್ ನೀಡಲಾಗಿದೆಯೇ? ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿದ್ದರು. ಆದರೆ, ಅರ್ಜಿದಾರ ಕೆ.ಆರ್ ರವಿ ರತ್ನಂ ಅವರ ಪರವಾಗಿ ವಾದಿಸಿದ ಪೀಟರ್ ರಮೇಶ್ ಕುಮಾರ್ ಅವರು ಮಾತನಾಡಿ, ರಜನಿಕಾಂತ್ ಅವರು ಚಿತ್ರಕ್ಕೆ ಕಥೆ ಒದಗಿಸುವಲ್ಲಿ ಯಾವುದೇ ಪಾತ್ರವಹಿಸಿಲ್ಲ ನಿಜ, ಅದರೆ, ಚಿತ್ರದ ವಿತರಣೆ ಹಕ್ಕು ಇನ್ನಿತರ ರೀತಿಯಲ್ಲಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹೀಗಾಗಿ ದೂರಿನಲ್ಲಿ ರಜನಿ ಅವರ ಹೆಸರು ಸೇರಿಸಲಾಗಿದೆ ಎಂದಿದ್ದರು.
ಏನಿದು ತಕರಾರು?: ತಮಿಳುನಾಡು ಹೌಸಿಂಗ್ ಬೋರ್ಡಿನ ಅರ್ಜಿದಾರ ರವಿ ರತ್ನಂ ಪ್ರಕಾರ ಲಿಂಗಾ ಚಿತ್ರದ ಕಥೆಯನ್ನು ಅವರೆ ಬರೆದಿದ್ದಂತೆ. ಮುಲ್ಲೈ ವಾನಂ 999 ಎಂಬ ಮುಲ್ಲಪೆರಿಯಾರ್ ಅಣೆಕಟ್ಟು ಕುರಿತ ಚಿತ್ರ ಬಗ್ಗೆ ಜಾನ್ ಪೆನ್ನಿಕ್ಯೂಕ್ ಬರೆದಿರುವ ಲೇಖನ ಆಧಾರಿಸಿ ಚಿತ್ರ ಮಾಡಲು ಹೊರಟಾಗ ಈ ಕಥೆ ಬರೆದಿದ್ದರಂತೆ. ಈ ಕಥೆಯನ್ನು ಲಿಂಗಾ ಚಿತ್ರತಂಡ ಕದ್ದಿದೆ ಎಂದು ಆರೋಪಿಸಲಾಗಿದೆ.












Click it and Unblock the Notifications