ಪಂಚೆ ಪ್ರಕರಣ: ಕ್ರಿಕೆಟ್ ಕ್ಲಬ್ಬಿಗೆ ಸಿಎಂ ಜಯಾ ಪಂಚ್
ಚೆನ್ನೈ,ಜು.17: ಎನ್ ಶ್ರೀನಿವಾಸನ್ ನೇತೃತ್ವದ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಇತ್ತೀಚೆಗೆ ಪಂಚೆ ತೊಟ್ಟ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ವಕೀಲರಿಗೆ ಮಾಡಿರುವ ಅಪಮಾನವನ್ನು ಮುಖ್ಯಮಂತ್ರಿ ಜಯಲಲಿತಾ ಅವರು ತೀವ್ರವಾಗಿ ಖಂಡಿಸಿದ್ದಾರೆ. ಸದನದಲ್ಲಿ ಈ ಬಗ್ಗೆ ಮಾತನಾಡಿದ್ದ ಸಿಎಂ ಜಯಾ, ಕ್ರಿಕೆಟ್ ಕ್ಲಬ್ ಲೈಸನ್ ರದ್ದುಪಡಿಸುವ ಎಚ್ಚರಿಕೆ ಸಂದೇಶ ಹೊರಡಿಸಿದ್ದಾರೆ.
ಪಂಚೆ ತೊಟ್ಟುಕೊಂಡು ಆಗಮಿಸಿದ್ದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಇಬ್ಬರು ವಕೀಲರನ್ನು ಕ್ಲಬ್ನೊಳಗೆ ಪ್ರವೇಶಿಸಲು ನಿಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ನಿರಾಕರಿಸಿದ ಘಟನೆ ಇತ್ತೀಚೆಗೆ ನಡೆದಿತ್ತು.
ಕ್ರಿಕೆಟ್ ಕ್ಲಬ್ನ ಕೃತ್ಯ ತಮಿಳು ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ವಿರುದ್ಧ ವಾಗಿದೆ. ಇದೇ ರೀತಿ ಮುಂದೇನಾದರೂ ನಡೆದರೆ ಕ್ರಿಕೆಟ್ ಕ್ಲಬ್ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ರಾಜ್ಯ ವಿಧಾನಸಭೆಯಲ್ಲಿ ಹೇಳಿದ ಜಯಲಲಿತಾ, ಸ್ವಾತಂತ್ರ ದೊರಕಿದ 67 ವರ್ಷಗಳ ಬಳಿಕ ಈ ರೀತಿಯ ಘಟನೆಗಳು ವರದಿಯಾಗಿರುವುದು ದುರದೃಷ್ಟಕರ, ತಮಿಳು ಸಂಸ್ಕೃತಿ ರಕ್ಷಣೆಗಾಗಿ ಹೊಸ ಕಾನೂನು ಜಾರಿಗೊಳಿಸಲಾಗುವುದು ಎಂದಿದ್ದಾರೆ.

ಟಿಎನ್ಸಿಎ ಕ್ಲಬ್ನಿಂದ ಈ ಬಗ್ಗೆ ವಿವರಣೆ ಕೋರಲಾಗಿದೆ. ಘಟನೆ ಕುರಿತಂತೆ ಸರ್ಕಾರ ಕ್ರಮ ಕೈಗೊಂಡಿದ್ದು, ಕ್ಲಬ್ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ರಿಜಿಸ್ಟ್ರಾರ್ಗಳಿಗೆ ನಿರ್ದೇಶನ ನೀಡಲಾಗಿದೆ. ಖಾಸಗಿ ಕ್ಲಬ್ಗಳಲ್ಲಿ ಪಂಚೆಯನ್ನು ನಿಷೇಧಿಸುವುದರ ವಿರುದ್ಧ ಕಾನೂನು ಜಾರಿಗೊಳಿಸಲಾಗುವುದು. ಪ್ರಸ್ತುತ ಕಾನೂನು ಇದೀಗ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಅಂಗೀಕಾರವಾಗುವ ಸಾಧ್ಯತೆ ಇದೆ.[ಪಂಚೆ ಅಥವಾ ಲುಂಗಿ ಬಗ್ಗೆ ನಿಮಗೆಷ್ಟು ಗೊತ್ತು?]
ಪಂಚೆ ಧರಿಸಿದ್ದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಡಿ.ಹರಿಪರಂತಮಾನ್ರನ್ನು ಇತ್ತೀಚೆಗೆ ತಮಿಳುನಾಡು ಕ್ರಿಕೆಟ್ ಅಸೋಶಿಯೇಶನ್ ಕ್ಲಬ್ನೊಳಗೆೆ ಪ್ರವೇಶಿಸುವುದರಿಂದ ನಿರ್ಬಂಧಿಸಲಾಗಿತ್ತು. ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಅರುಣಾಚಲಮ್ ಸಂಘಟಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತನ್ನ ಅಧಿಕೃತ ಕಾರಿನಲ್ಲಿ ಆಗಮಿಸಿ ಇಳಿದ ಅವರನ್ನು ಕ್ಲಬ್ ಒಳಗೆ ಪ್ರವೇಶಿಸುವುದರಿಂದ ಕ್ಲಬ್ ಸಿಬ್ಬಂದಿ ತಡೆದಿದ್ದರು.
ಕ್ಲಬ್ನ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸುವ ಯಾರನ್ನೂ ಒಳಪ್ರವೇಶಿಸಲು ಬಿಡಬಾರದು ಎಂದು ಕ್ಲಬ್ ಪದಾಧಿಕಾರಿಗಳು ತಮಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದರು. ಘಟನೆಯನ್ನು ನ್ಯಾಯಮೂರ್ತಿಗಳು ದುರದೃಷ್ಟ ಎಂದು ಬಣ್ಣಿಸಿದ್ದರು.
ಪಂಚೆಯುಡುವುದು ತಮಿಳು ಸಂಸ್ಕೃತಿಯ ಒಂದು ಭಾಗ. ಇದಕ್ಕೆ ನಿಷೇಧ ಹೇರುವುದು ಖಂಡನೀಯ. ಕೆಲವು ಸ್ಥಳಗಳಲ್ಲಿ ನಿರ್ದಿಷ್ಟ ವಸ್ತ್ರಸಂಹಿತೆ ಕಡ್ಡಾಯ ಎಂದಾದರೆ ಸರಕಾರ ಮಧ್ಯಪ್ರವೇಶಿಸಬೇಕು ಹಾಗೂ ಅವರಿಗೆ ಸಲಹೆ ನೀಡಬೇಕು. ಇದು ಇಂತಹ ಘಟನೆಗಳನ್ನು ಕೊನೆಗಾಣಿಸಬಹುದು ಎಂದು ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಪ್ರತಿಕ್ರಿಯಿಸಿದ್ದರು. (ಐಎಎನ್ಎಸ್)












Click it and Unblock the Notifications