ಶಶಿಕಲಾರಿಂದ ಎಐಎಡಿಎಂಕೆ ಬಾವುಟ ಬಳಕೆ ಬಗ್ಗೆ ಖುಷ್ಬು ಕಿಡಿ
ಚೆನ್ನೈ, ಫೆಬ್ರವರಿ 8: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ ಬಳಿಕೆ ತಮಿಳುನಾಡಿಗೆ ಶಶಿಕಲಾ ನಟರಾಜನ್ ಇಂದು ಮರಳುತ್ತಿದ್ದಾರೆ. ಹೊಸೂರು ಗಡಿ ದಾಟುತ್ತಿದ್ದಂತೆ ಶಶಿಕಲಾ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದು ಅದ್ದೂರಿ ಸ್ವಾಗತ ಕೋರಿದ್ದಾರೆ.
ದೇವನಹಳ್ಳಿಯ ರೆಸಾರ್ಟಿನಿಂದ ಗಡಿಭಾಗದ ತನಕ ತೆರಳುವ ತನಕ ಶಶಿಕಲಾ ಅವರಿದ್ದ ಕಾರಿನ ಮೇಲೆ ಅಣ್ಣಾ ಡಿಎಂಕೆ ಧ್ವಜ ಹಾರಾಡುತ್ತಲೇ ಇತ್ತು. ಹೊಸೂರು ಗಡಿ ದಾಟುತ್ತಿದ್ದಂತೆ ಪೊಲೀಸರು ಎಐಎಡಿಎಂಕೆ ಧ್ವಜ ಬಳಕೆಗೆ ಅನುಮತಿ ಇಲ್ಲ ಎಂದು ತಡೆಯೊಡ್ಡಿದರು.
ಇದೆಲ್ಲವನ್ನು ಗಮಿಸುತ್ತಿದ್ದ ಭಾರತೀಯ ಜನತಾ ಪಕ್ಷದ ನಾಯಕಿ ಖುಷ್ಬು ಸುಂದರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ವಿಕೆ ಶಶಿಕಲಾ ಅವರು ಅವರು ಪಕ್ಷದ ಅಧಿಕೃತ ಧ್ವಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಐಎಡಿಎಂಕೆ ನಮ್ಮ ಮಿತ್ರಪಕ್ಷವಾಗಿದ್ದು, ಈ ಬಗ್ಗೆ ದನಿಯೆತ್ತಬೇಕಾಗುತ್ತದೆ ಎಂದಿದ್ದಾರೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಶಿಕಲಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿಅಪರಾಧ ಎನಿಸಿ ಬೆಂಗಳೂರಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಎಐಎಡಿಎಂಕೆ ಪಕ್ಷದ ಎರಡೆಲೆ ಧ್ವಜ ಬಳಕೆ ಬಗ್ಗೆ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ.
ಇದಕ್ಕೂ ಮುನ್ನ ಶಶಿಕಲಾ ಅವರು ಎಐಎಡಿಎಂಕೆ ಅಧಿಕೃತ ಧ್ವಜ ಬಳಕೆ ಮಾಡುತ್ತಿರುವುದನ್ನು ವಿರೋಧಿಸಿ ತಮಿಳುನಾಡಿನ ಸಚಿವ ಡಿ ಜಯಕುಮಾರ್ ಅವರು ಇತರೆ ಸಚಿವರ ಜೊತೆಗೂಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದಲ್ಲದೆ, ಜಯಲಲಿತಾ ಅವರಿಗೆ ಸೇರಿರುವ ಕಾರು ಬಳಸಿದ್ದಕ್ಕೂ ಆಕ್ಷೇಪ ವ್ಯಕ್ತವಾಗಿದೆ. ಚೆನ್ನೈಗೆ ತೆರಳಿದ ಬಳಿಕ ಟಿ ನಗರದಲ್ಲಿರುವ ಸೋದರ ಸೊಸೆ ಜೆ ಕೃಷ್ಣಪ್ರಿಯ ಅವರ ಮನೆಯಲ್ಲಿ ಶಶಿಕಲಾ ನೆಲೆಸಲಿದ್ದಾರೆ ಎಂದು ತಿಳಿದು ಬಂದಿದೆ. ಕೃಷ್ಣಪ್ರಿಯ ನಿವಾಸದ ಸುತ್ತಾಮುತ್ತಾ ನಿಷೇಧಾಜ್ಞೆ ಹೇರಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.