Mekedatu; ಕರ್ನಾಟಕ ಡ್ಯಾಂಗೆ ಅನುದಾನ ಘೋಷಿಸುವುದು ಸರಿಯಲ್ಲ
ಚೆನ್ನೈ, ಮಾರ್ಚ್ 22; " ಕರ್ನಾಟಕ ಸರ್ಕಾರ ಮೇಕೆದಾಟುವಿನಲ್ಲಿ ಡ್ಯಾಂ ನಿರ್ಮಾಣ ಮಾಡಲು 1000 ಕೋಟಿ ರೂ. ಅನುದಾನ ಘೋಷಣೆ ಮಾಡುವುದು ಸರಿಯಲ್ಲ" ಎಂದು ಎಐಎಡಿಎಂಕೆ ನಾಯಕ ಎಂ.ತಂಬಿದೊರೈ ಹೇಳಿದರು.
ಮಂಗಳವಾರ ದೆಹಲಿಯಲ್ಲಿ ಮಾತನಾಡಿದ ಅವರು, "ನಮ್ಮ ಪಕ್ಷದ ನಾಯಕರು, ಸದಸ್ಯರು ತಮಿಳುನಾಡು ವಿಧಾನಸಭೆಯಲ್ಲಿ ಮಂಡನೆ ಮಾಡಿದ ಮೇಕೆದಾಟು ಯೋಜನೆ ವಿರುದ್ಧದ ನಿರ್ಣಯ ಬೆಂಬಲಿಸಿದ್ದಾರೆ" ಎಂದರು.
ಮೇಕೆದಾಟು: ತಮಿಳುನಾಡು ಶಾಸನಸಭೆ ನಿರ್ಣಯ ಕಾನೂನು ಬಾಹಿರ ಎಂದ ಸಿಎಂ
"ರಾಜ್ಯ ಕಾವೇರಿ ನದಿ ಪಾತ್ರದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದೆ. ಕರ್ನಾಟಕದವರು ಮೇಕೆದಾಟುವಿನಲ್ಲಿ ಡ್ಯಾಂ ನಿರ್ಮಾಣ ಮಾಡಿದರೆ ಜನರಿಗೆ ತೊಂದರೆಯಾಗಲಿದೆ" ಎಂದು ಎಂ. ತಂಬಿದೊರೈ ತಿಳಿಸಿದರು.
ಮೇಕೆದಾಟು ವಿರುದ್ಧ ತಮಿಳುನಾಡು ನಿರ್ಣಯ, ಬಿಜೆಪಿ ಬೆಂಬಲ
"ನಾವು ಕುಡಿಯುವ ನೀರು ಮತ್ತು ಕೃಷಿಗೆ ನೀರಾವರಿ ಸಮಸ್ಯೆ ಎದುರಿಸುತ್ತಿದ್ದೇವೆ. ಈಗಾಗಲೇ ಸುಪ್ರೀಂಕೋರ್ಟ್ ಕಾವೇರಿ ನದಿ ಪಾತ್ರದಲ್ಲಿ ಕೇರಳ, ಪುದುಚೇರಿ, ತಮಿಳುನಾಡು ರಾಜ್ಯದ ಒಪ್ಪಿಗೆ ಇಲ್ಲದೇ ಯಾವುದೇ ಡ್ಯಾಂ ನಿರ್ಮಾಣ ಮಾಡಬಾರದು ಎಂದು ಕರ್ನಾಟಕಕ್ಕೆ ಸೂಚನೆ ನೀಡಿದೆ" ಎಂದರು.
ಮೇಕೆದಾಟು ಯೋಜನೆ ತ್ವರಿತ ಅನುಮೋದನೆಗೆ ಕ್ರಮ ಎಂದ ಸಿಎಂ
"ಪಕ್ಷಕ್ಕಿಂತ ತಮಿಳುನಾಡು ರಾಜ್ಯದ ಹಿತ ನಮಗೆ ಮುಖ್ಯವಾದದ್ದು. ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಡ್ಯಾಂ ನಿರ್ಮಾಣ ಮಾಡಲು 1000 ಕೋಟಿ ರೂ. ಘೋಷಣೆ ಮಾಡಿದ್ದು ಸರಿಯಲ್ಲ" ಎಂದು ಎಂ.ತಂಬಿದೊರೈ ತಿಳಿಸಿದರು.
ವಿಧಾನಸಭೆಯಲ್ಲಿ ನಿರ್ಣಯ
ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ ನಿರ್ಣಯ ಮಂಡನೆ ಮಾಡಲಾಗಿದೆ. ಯೋಜನೆಯನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಬಜೆಟ್ನಲ್ಲಿ ಅನುದಾನ ಮೀಸಲಿಟ್ಟಿರುವ ವಿರುದ್ಧ ನಿರ್ಣಯ ಮಂಡಿಸಿದೆ. ತಮಿಳುನಾಡು ರಾಜ್ಯದ ಅನುಮತಿ ಇಲ್ಲದೇ ಕಾವೇರಿ ನದಿ ವ್ಯಾಪ್ತಿಯಲ್ಲಿ ಮೇಕೆದಾಟು ಯೋಜನೆ ಕೈಗೊಳ್ಳುವುದನ್ನು ವಿರೋಧಿಸಿದ್ದು, ಯೋಜನೆಗೆ ಒಪ್ಪಿಗೆ ನೀಡದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿರ್ಣಯದಲ್ಲಿ ತೀರ್ಮಾನಿಸಲಾಗಿದೆ.
ಯಾವ ಪಕ್ಷಗಳ ವಿರೋಧವೂ ಇಲ್ಲ
ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನ ಡಿಎಂಕೆ ಸರ್ಕಾರ ಮಂಡನೆ ಮಾಡಿದ ನಿರ್ಣಯಕ್ಕೆ ಎಲ್ಲಾ ಪಕ್ಷಗಳ ಬೆಂಬಲ ಸಿಕ್ಕಿದೆ. ರಾಜ್ಯದ ಪ್ರತಿಪಕ್ಷಗಳಾದ ಬಿಜೆಪಿ, ಎಐಎಡಿಎಂಕೆ ಸಹ ನಿರ್ಣಯ ಬೆಂಬಲಿಸಿದ್ದು, ಕರ್ನಾಟಕ ಸರ್ಕಾರದ ಮೇಕೆದಾಟು ಯೋಜನೆ ವಿರೋಧಿಸಿವೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ, ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವಿದೆ. ಆದರೆ ಅದೇ ಪಕ್ಷ ತಮಿಳುನಾಡು ವಿಧಾನಸಭೆಯಲ್ಲಿ ಕರ್ನಾಟಕ ಬಿಜೆಪಿ ಸರ್ಕಾರದ ಪ್ರಸ್ತಾವಿತ ಯೋಜನೆ ವಿರೋಧಿಸುತ್ತಿದೆ.
ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ತಮಿಳುನಾಡು ವಿಧಾನಸಭೆಯಲ್ಲಿ ಮಂಡನೆ ಮಾಡಿದ ನಿರ್ಣಯದ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ವಿರುದ್ಧ ಕೈಗೊಳ್ಳಲಾಗಿರುವ ನಿರ್ಣಯ ಕಾನೂನು ಬಾಹಿರವಾಗಿದೆ. ಒಂದು ರಾಜ್ಯ ಇನ್ನೊಂದು ರಾಜ್ಯದ ಹಕ್ಕನ್ನು ಆಕ್ರಮಿಸಿಕೊಳ್ಳುವಂತಹ ಜನ ವಿರೋಧಿ ನಿರ್ಣಯವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ತಮಿಳುನಾಡಿಗೆ ನಂಬಿಕೆ ಇಲ್ಲದ ನಿರ್ಣಯ ಇದಾಗಿದೆ. ಈ ನಿರ್ಣಯವನ್ನು ಸಮಸ್ತ ಕರ್ನಾಟಕದ ಜನತೆ ಹಾಗೂ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ಮೇಕೆದಾಟು ಯೋಜನೆ ಜಾರಿಗೆ ನಮ್ಮ ನಿರ್ಧಾರ ಅಚಲವಾಗಿದೆ" ಎಂದು ಹೇಳಿದ್ದಾರೆ.
ನೀರಿನ ಮೇಲೆ ಕರ್ನಾಟಕದ ಹಕ್ಕಿದೆ
"ಮೇಕೆದಾಟು ಯೋಜನೆ ರಾಜ್ಯದಲ್ಲಿ ಹುಟ್ಟುವ ಕಾವೇರಿ ನದಿಗೆ ಸಂಬಂಧಿಸಿದ್ದಾಗಿದೆ. ಕಾವೇರಿ ನ್ಯಾಯಾಧೀಕರಣ ಅನ್ವಯ ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಕೊಟ್ಟ ನಂತರ ಉಳಿದ ನೀರಿನ ಮೇಲೆ ಕರ್ನಾಟಕದ ಹಕ್ಕು ಇದೆ. ತಮಿಳುನಾಡಿನ ಈ ರಾಜಕೀಯ ನಿರ್ಧಾರವನ್ನು ಲೆಕ್ಕಿಸದೆ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ" ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಳೆದ ಶುಕ್ರವಾರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸಲು ಸರ್ವ ಪಕ್ಷಗಳ ಸಭೆ ನಡೆಸಲಾಗಿತ್ತು. ಆಗ ಮೇಕೆದಾಟು ಯೋಜನೆ ಕುರಿತು ಸಹ ಚರ್ಚೆ ನಡೆಸಲಾಗಿತ್ತು.