ರಜನಿ ಜತೆ ಕೈಜೋಡಿಸಲು ಸಿದ್ಧ, ಜನವರಿ 26ರಿಂದ ಪ್ರವಾಸ : ಕಮಲ್
ಚೆನ್ನೈ, ಜನವರಿ 16: ತಮಿಳುನಾಡಿನಲ್ಲಿ ನಿಧಾನಗತಿಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕಾಗುತ್ತಿವೆ. ಆರ್ ಕೆ ನಗರ ಉಪ ಚುನಾವಣೆ ಗೆದ್ದ ದಿನಕರನ್ ಈಗ ಹೊಸ ಪಕ್ಷ ಸ್ಥಾಪಿಸುವ ಉತ್ಸಾಹದಲ್ಲಿದ್ದಾರೆ. ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರು ಜನ ಸಂಪರ್ಕ ಬೆಳೆಸಲು ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ. ರಜನಿಕಾಂತ್ ಕೂಡಾ ಪ್ರವಾಸ ನಿರತರಾಗಿದ್ದಾರೆ.
ಇ ಪಳನಿಸ್ವಾಮಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವುದಾಗಿ ನಟ ಕಮಲ್ ಹಾಸನ್ ಹೇಳಿದ್ದಾರೆ.
ಜನವರಿ 26ರಿಂದ ರಾಜ್ಯದೆಲ್ಲೆಡೆ ಪ್ರವಾಸ ಮಾಡಲಿದ್ದು, ಸಂಪೂರ್ಣ ವೇಳಾಪಟ್ಟಿ ಆನಂದ್ ವಿಕಟನ್ ಪತ್ರಿಕೆಯಲ್ಲಿ ಈ ಬಗ್ಗೆ ವಿವರ ಪಡೆದುಕೊಳ್ಳಿ ಎಂದಿದ್ದಾರೆ.

ಮೈಯಮ್ ವಿಷಲ್ ಅಪ್ಲಿಕೇಷನ್ ಬಗ್ಗೆ ಘೋಷಣೆ ಮಾಡಿದ್ದ ಕಮಲ್, ಸದ್ಯದಲ್ಲೇ ಈ ಅಪ್ಲಿಕೇಷನ್ ಪೂರ್ಣವಾಗಿ ಸಕ್ರಿಯವಾಗಲಿದ್ದು, ನಾಗರಿಕರು ತಮ್ಮ ದೂರು ದುಮ್ಮಾನಗಳನ್ನು ನೀಡಬಹುದು ಎಂದರು.
ರಜನಿ ಜತೆ ಕೈಜೋಡಿಸಲು ಸಿದ್ಧ: ತಾತ್ವಿಕವಾಗಿ ರಜನಿ ಅವರ ಚಿಂತನೆಗಳು ಬಿಜೆಪಿಗೆ ಹತ್ತಿರವಾಗಿದ್ದು, ರಜನಿ ಅವರಿಗೆ ಆ ಪಕ್ಷವೇ ಹೊಂದುತ್ತದೆ ಎಂದು ಕಮಲ್ ಈ ಹಿಂದೆ ಹೇಳಿದ್ದರು. ಆದರೆ, ಈಗ ತಮಿಳುನಾಡಿನ ದುರಾಡಳಿತವನ್ನು ಹೋಗಲಾಡಿಸಲು ರಜನಿ ಜತೆ ಕೈಜೋಡಿಸಲು ಸಿದ್ಧ ಎಂದು 63 ವರ್ಷದ ನಟ ಕಮಲ್ ಹೇಳಿದರು.
67 ವರ್ಷ ವಯಸ್ಸಿನ ರಜನಿಕಾಂತ್ ಅವರು ರಾಜಕೀಯ ಎಂಟ್ರಿ ಬಗ್ಗೆ ಘೋಷಿಸಿದ್ದು, ಹೊಸ ಪಕ್ಷ ಸ್ಥಾಪಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ 232 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ. ಆದರೆ, ರಜನಿ ಅವರ ಗುರಿ 2019ರ ಲೋಕಸಭೆ ಚುನಾವಣೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications